ಕಾಂಗ್ರೆಸ್ ತನ್ನ ಹಾದಿ ತೊರೆದಿದೆ ಎಂದ ಹರಿಯಾಣ ಮಾಜಿ ಸಿಎಂ ಭೂಪಿಂದರ್ ಹೂಡಾ
ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನವನ್ನು ನೀಡುವ ಪರಿಚ್ಛೇದ 370 ರದ್ದು ಮಾಡಿದ ಕೇಂದ್ರ ಸರಕಾರದ ತೀರ್ಮಾನವನ್ನು ಹರಿಯಾಣದ ಮಾಜಿ ಮುಖ್ಯಮಂತ್ರಿ- ಕಾಂಗ್ರೆಸ್ ನ ಹಿರಿಯ ನಾಯಕ ಭೂಪಿಂದರ್ ಸಿಂಗ್ ಹೂಡಾ ಬೆಂಬಲಿಸಿದ್ದು, ಪಕ್ಷದ ನಿಲವಿಗೆ ವಿರುದ್ಧವಾದ ಅವರ ಮಾತುಗಳು ಇನ್ನೇನು ಚುನಾವಣೆ ಎದುರು ನೋಡುತ್ತಿರುವ ಹರಿಯಾಣದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ.
ರೋಹ್ಟಕ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಹಾದಿಯಿಂದ ಕಳೆದು ಹೋಗಿದೆ. ಸರಕಾರದ ನಿರ್ಧಾರ ಸರಿಯಿದ್ದಾಗ ನಾನು ಬೆಂಬಲಿಸಿದ್ದೇನೆ. ಪರಿಚ್ಛೇದ 370 ರದ್ದು ಮಾಡಿದ ಕ್ರಮವನ್ನು ನನ್ನ ಸಹವರ್ತಿಗಳು ಹಲವರು ವಿರೋಧಿಸಿದ್ದಾರೆ. ನನ್ನ ಪಕ್ಷ ತನ್ನ ಹಾದಿ ತಪ್ಪಿದೆ. ಇದು ಹಿಂದಿನ ಕಾಂಗ್ರೆಸ್ ಅಲ್ಲ. ದೇಶಾಭಿಮಾನ, ಆತ್ಮ ಗೌರವದ ವಿಚಾರದಲ್ಲಿ ನಾನು ಯಾರ ಜತೆಗೂ ರಾಜೀ ಆಗಲ್ಲ ಎಂದಿದ್ದಾರೆ.
ಮೋದಿ ಸರ್ಕಾರ ಬೆಂಬಲಿಸಿದ ರಾಹುಲ್ ಆಪ್ತ ಜ್ಯೋತಿರಾದಿತ್ಯ ಸಿಂದಿಯಾ!
ಆಕ್ಟೋಬರ್ ನಲ್ಲಿ ಹರಿಯಾಣ ವಿಧಾನಸಭಾ ಚುನಾವಣೆ ನಡೆಯಬೇಕಿದೆ. ಇದೀಗ ಭಾನುವಾರದ ಸಭೆಯಲ್ಲಿ ಹೀಗೆ ಮಾತನಾಡುವ ಮೂಲಕ ಕಾಂಗ್ರೆಸ್ ನಾಯಕತ್ವ ಬದಲಾವಣೆ ಆಗಬೇಕು ಎಂಬುದನ್ನು ಹೂಡಾ ಅವರು ಹೈ ಕಮಾಂಡ್ ಗಮನಕ್ಕೆ ತಂದಿದ್ದಾರೆ. ಇದರ ಜತೆಗೆ ಹೂಡಾ ಅವರೇ ಕಾಂಗ್ರೆಸ್ ತೊರೆಯಬಹುದು ಎಂಬ ಮಾತು ಕೂಡ ಕೇಳಿಬರುತ್ತಿದೆ.
ನಾನು ದೇಶಭಕ್ತರ ಕುಟುಂಬದಲ್ಲಿ ಜನಿಸಿದವನು. ರಾಷ್ಟ್ರೀಯ ಹಿತಾಸಕ್ತಿ ವಿಚಾರದಲ್ಲಿ ಎಂದೂ ರಾಜೀ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಭೂಪಿಂದರ್ ಹೂಡಾ ಅವರು ಜಾಟ್ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಪಕ್ಷದ ಅತಿ ಮುಖ್ಯ ನಾಯಕ. ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ಅಶೋಕ್ ತನ್ವರ್ ಜತೆಗೆ ಹಲವು ವಿಚಾರದಲ್ಲಿ ಹೂಡಾಗೆ ಅಸಮಾಧಾನ ಇದೆ. ತನ್ವರ್ ಅವರು ದಲಿತ ನಾಯಕರಾಗಿದ್ದು, ರಾಹುಲ್ ಗಾಂಧಿಗೆ ಪರಮಾಪ್ತರು.