ನವಜೋತ್ ಸಿಧು ರಾಜೀನಾಮೆ ಅಂಗೀಕರಿಸಿಲ್ಲ ಕಾಂಗ್ರೆಸ್ ಹೈಕಮಾಂಡ್?
ಚಂಡೀಘರ್, ಸೆಪ್ಟೆಂಬರ್ 29: ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ನೀಡಿರುವ ರಾಜೀನಾಮೆಯನ್ನು ಹೈಕಮಾಂಡ್ ನಾಯಕರು ನಿರಾಕರಿಸಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆಯು ವರದಿ ಮಾಡಿದೆ.
ಎಎನ್ಐ ವರದಿ ಪ್ರಕಾರ, ನವಜೋತ್ ಸಿಂಗ್ ಸಿಧು ರಾಜೀನಾಮೆಯನ್ನು ತಿರಸ್ಕರಿಸಿರುವ ಹೈಕಮಾಂಡ್ ನಾಯಕರು ರಾಜ್ಯ ಮಟ್ಟದಲ್ಲಿಯೇ ಬಿಕ್ಕಟ್ಟು ಬಗೆಹರಿಸಿಕೊಳ್ಳುವಂತೆ ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದಾರೆ.
'ದಲಿತ ವ್ಯಕ್ತಿ ಸಿಎಂ ಆಗಿದ್ದು ನವಜ್ಯೋತ್ಗೆ ತಡೆಯಲು ಆಗಿಲ್ಲ': ಆಪ್
ಪಂಜಾಬ್ ಸಚಿವ ಸಂಪುಟದಲ್ಲಿನ ಬದಲಾವಣೆಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ನವಜೋತ್ ಸಿಂಗ್ ಸಿಧು, ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಕ್ಕೆ ಸಂಬಂಧಿಸಿದ ಪತ್ರವನ್ನು ಟ್ವೀಟ್ ಮಾಡಿದ್ದರು.
ಎಐಸಿಸಿ ವಕ್ತಾರೆ ಸೋನಿಯಾ ಗಾಂಧಿಯವರಿಗೆ ಪತ್ರ:
"ರಾಜಿ ಮಾಡಿಕೊಳ್ಳುವುದರ ಮೂಲಕ ಮನುಷ್ಯನ ಪಾತ್ರದ ಕುಸಿಯಲು ಆರಂಭವಾಗುತ್ತದೆ. ಪಂಜಾಬ್ನ ಭವಿಷ್ಯ ಮತ್ತು ಪಂಜಾಬ್ನ ಕಲ್ಯಾಣದ ವಿಷಯದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದ್ದರಿಂದ, ನಾನು ಈ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಕಾಂಗ್ರೆಸ್ ಸೇವೆ ಮುಂದುವರಿಸುತ್ತೇನೆ," ಎಂದು ಎಐಸಿಸಿ ವಕ್ತಾರೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ನವಜೋತ್ ಸಿಧು ಉಲ್ಲೇಖಿಸಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿಧು ಪಂಜಾಬ್ ರಾಜ್ಯಕ್ಕೆ ಸೂಕ್ತವಲ್ಲ ಎಂದ ಕ್ಯಾಪ್ಟನ್:
ನವಜೋತ್ ಸಿಂಗ್ ಸಿಧು ಕಾಲಾವಧಿಯಲ್ಲೇ ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಅಮರೀಂದರ್ ಸಿಂಗ್ ಅವರನ್ನು ಬದಲಾಯಿಸಲಾಗಿತ್ತು. "ನಾನು ನಿಮಗೆ ಹೇಳಿದೆ ಅಲ್ಲವೇ, ಅವರು ಪಂಜಾಬ್ನಂತಹ ಗಡಿ ರಾಜ್ಯಕ್ಕೆ ಸರಿಹೊಂದುವ ಸ್ಥಿರ ವ್ಯಕ್ತಿ ಅಲ್ಲ" ಎಂದು ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಟ್ವೀಟ್ ಮಾಡಿದ್ದರು.
ಸಿಧು ರಾಜೀನಾಮೆ ಹಿಂದಿನ ಕಾರಣ?:
ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮಾಡಿದ ಸಚಿವ ಸಂಪುಟದಲ್ಲಿನ ಬದಲಾವಣೆಗಳ ಬಗ್ಗೆ ಸಿಧು ತೀವ್ರ ಅಸಮಾಧಾನ ಹೊಂದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಕೆಲವು ನಿರ್ಧಾರಗಳ ವಿಷಯದಲ್ಲಿ ನವಜೋತ್ ಸಿಂಗ್ ಸಿಧು "ಸೂಪರ್ ಸಿಎಂ" ರೀತಿಯಲ್ಲಿ ವರ್ತಿಸುತ್ತಿದ್ದರು, ಆದರೆ ಇತ್ತೀಚಿಗೆ ತೆಗೆದುಕೊಂಡ ಸರ್ಕಾರ ನೇಮಕಾತಿ ಮತ್ತು ಸಂಪುಟ ರಚನೆಯಲ್ಲಿ ಸಿಧುರನ್ನು ತೀವ್ರವಾಗಿ ನಿರ್ಲಕ್ಷಿಸಲಾಗಿತ್ತು ಎಂದು ವರದಿಯಾಗಿದೆ. ಅದರಲ್ಲೂ "ಸಕ್ರಿಲೇಜ್" ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ನೀಡಲಾದ ಪ್ರಮುಖ ಹುದ್ದೆಗಳ ಬಗ್ಗೆ ಸಿಧು ಕೋಪಗೊಂಡಿದ್ದರು ಎಂದು ಗೊತ್ತಾಗಿದೆ.
ಸಿಧು ಬೆಂಬಲಿಗರಿಂದ ರಾಜೀನಾಮೆ ಪರ್ವ:
ಪಂಜಾಬ್ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎರಡೇ ದಿನಗಳಲ್ಲಿ ಮಲೆರ್ಕೋಟ್ಲಾ ಶಾಸಕಿ ರಜಿಯಾ ಸುಲ್ತಾನಾ ಮಂಗಳವಾರ "ನವಜೋತ್ ಸಿಂಗ್ ಸಿಧುಗೆ ಬೆಂಬಲವಾಗಿ" ರಾಜೀನಾಮೆ ನೀಡಿದ್ದಾರೆ. "ಸಿದ್ದು ಸಾಹಬ್ ತತ್ವಗಳ ವ್ಯಕ್ತಿ. ಅವರು ಪಂಜಾಬ್ ಮತ್ತು ಪಂಜಾಬಿಯತ್ ಗಾಗಿ ಹೋರಾಡುತ್ತಿದ್ದಾರೆ" ಎಂದು ಸುಲ್ತಾನಾ ಹೇಳಿದ್ದಾರೆ. ಪಂಜಾಬ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೋಗಿಂದರ್ ಧಿಂಗ್ರಾ ಮತ್ತು ಖಜಾಂಚಿ ಗುಲ್ಜಾರ್ ಇಂದರ್ ಚಹಲ್ ಕೂಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.