ಹರ್ಯಾಣ ಚುನಾವಣೆಗೂ ಮುನ್ನವೇ ಬಿಜೆಪಿಗೆ ಗೆಲುವಿನ ಮುನ್ಸೂಚನೆ
ಚಂಡೀಗಢ, ಸೆ. 20: ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಚುನಾವಣೆಗಳ ದಿನಾಂಕ ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿಯ ಬೆನ್ನಲ್ಲೇ ಹರ್ಯಾಣದಲ್ಲಿ ಬಿಜೆಪಿಗೆ ಚುನಾವಣೆಗೂ ಮುನ್ನವೇ ಗೆಲುವಿನ ಮುನ್ಸೂಚನೆ ಸಿಕ್ಕಿದೆ.
ಚುನಾವಣೆ ದಿನಾಂಕ ಘೋಷಣೆಯಾದ ತಕ್ಷಣವೇ ಆಯಾ ರಾಜ್ಯಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಶಿವ ಸೇನಾ ಪ್ರಚಾರ ಆರಂಭಿಸಿಯಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಳೆದ ತಿಂಗಳಿಂದ ಮಹಾ ಜನ್ ಆದೇಶ್ ಯಾತ್ರಾ ಮಾಡುತ್ತಿದ್ದಾರೆ.
ದೀಪಾವಳಿ ಮುನ್ನವೇ ಮಹಾರಾಷ್ಟ್ರ, ಹರ್ಯಾಣ ಚುನಾವಣೆ ಸಾಧ್ಯತೆ
ಕಳೆದ ಬಾರಿ ಮಹಾರಾಷ್ಟ್ರ, ಹರ್ಯಾಣದಲ್ಲಿ ಅಕ್ಟೋಬರ್ ನಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಈ ಬಾರಿ ಬಿಜೆಪಿಯನ್ನು ಮಣಿಸಲು ವಿಪಕ್ಷಗಳು ಮೈತ್ರಿಕೂಟ ರಚಿಸಲು ಯತ್ನಿಸಿದ್ದವು. ಆದರೆ,ಮೈತ್ರಿಕೂಟಕ್ಕೆ ಚಾಲನೆ ಸಿಗುವ ಮುನ್ನವೇ ಮುರಿದು ಬಿದ್ದಿದೆ.
ಬಹುಜನ ಸಮಾಜ ಪಕ್ಷ(ಬಿಎಸ್ ಪಿ), ಇಂಡಿಯನ್ ನ್ಯಾಷನಲ್ ಲೋಕದಳ(ಐಎನ್ ಎಲ್ ಡಿ) ಜೊತೆಗೆ ಜನ್ನಾಯಕ್ ಜನತಾ ಪಾರ್ಟಿ( ಜೆಜೆಪಿ) ಮೈತ್ರಿ ಸಾಧಿಸುವ ಮುನ್ನವೇ ಮಾತುಕತೆ ಮುರಿದು ಬಿದ್ದಿದೆ. ಕಳೆದ ಒಂದು ವಾರದಿಂದ ಮೈತ್ರಿ ಬದಲು ಈ ಪಕ್ಷಗಳ ನಡುವೆ ವೈಮನಸ್ಯ ಹೆಚ್ಚಾಗಿದ್ದು, ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ವರವಾಗಿ ಪರಿಣಮಿಸಲಿದೆ. ಹೀಗಾಗಿ, ಬಿಜೆಪಿ ವಿರುದ್ಧ ಒಗ್ಗೂಡಬೇಕಿದ್ದ ವಿಪಕ್ಷಗಳಲ್ಲಿನ ಒಡಕು ಬಿಜೆಪಿಗೆ ಜಯ ತರುವ ಎಲ್ಲಾ ಲಕ್ಷಣಗಳು ಕಾಣಿಸಿವೆ ಎಂದು ವಿಶ್ಲೇಷಿಸಲಾಗಿದೆ.