ಪಂಜಾಬ್: ಪ್ರಧಾನಿ ಭದ್ರತಾ ವೈಫಲ್ಯದ ನೆಪದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರದ ಹುನ್ನಾರ; ಸಿಎಂ ಚನ್ನಿ
ಚಂಡೀಗಢ, ಜನವರಿ 7: ಪಂಜಾಬ್ಗೆ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ವೈಫಲ್ಯದ ಘಟನೆಯು ರಾಜಕೀಯ ವಾಕ್ಸಮರಕ್ಕೆ ಸಾಕ್ಷಿಯಾಗುತ್ತಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸುವುದಕ್ಕೆ ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಆರೋಪಿಸಿದ್ದಾರೆ.
"ಪಂಜಾಬ್ ಮತ್ತು ಪಂಜಾಬಿಯತ್ ವಿರುದ್ಧ ಹುನ್ನಾರ ನಡೆಸಲಾಗುತ್ತಿದೆ. ರಾಜ್ಯದ ಪರಿಸ್ಥಿತಿಯನ್ನು ಹದಗೆಡಿಸುವ ಪ್ರಯತ್ನ ನಡೆಯುತ್ತಿದೆ. ಇದು ಪಂಜಾಬಿನಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಸಂಚು," ಎಂದು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ದೂಷಿಸಿದ್ದಾರೆ.
ಪಂಜಾಬಿನಲ್ಲಿ ಬಿಜೆಪಿ ಬಾವುಟ ಹಿಡಿದು ಪ್ರಧಾನಿ ಮೋದಿಗೆ ಧಿಕ್ಕಾರ!
"ಅವರು ಪಂಜಾಬ್ ಮತ್ತು ಪಂಜಾಬಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದು, ಕೊಲೆಗಡುಕರಂತೆ ಬಿಂಬಿಸಲು ಹೊರಟಿದ್ದಾರೆ. ನಾವು ರಾಷ್ಟ್ರೀಯವಾದಿಗಳು. ನಾವು ದೇಶಕ್ಕಾಗಿ ನಡೆದ ಹಲವು ಯುದ್ಧಗಳಲ್ಲಿ ಹೋರಾಡಿದ್ದು, ಹಲವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಪ್ರಧಾನಮಂತ್ರಿಗೆ ಬುಲೆಟ್ ಹೊಡೆಯುವವರು ಮೊದಲು ನನ್ನನ್ನು ದಾಟಬೇಕು ಎಂದು ಮೊದಲೇ ನಾನು ಹೇಳಿದ್ದೇನೆ. ಇದಕ್ಕಿಂತ ಇನ್ನೇನು ಹೇಳಬೇಕು. ನನ್ನ ಕೈಗಳನ್ನೇ ಕತ್ತರಿಸಿ ರಕ್ತ ಹರಿಸಬೇಕೇ?," ಎಂದು ಸಿಎಂ ಚನ್ನಿ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಆರೋಪಕ್ಕೆ ಸಿಎಂ ಚನ್ನಿ ತಿರುಗೇಟು:
ಮಾರ್ಚ್ ವೇಳೆಗೆ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಪ್ರಚಾರ ನಡೆಸುತ್ತಿರುವ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, "ಕೊಲೆಯ ಉದ್ದೇಶದಿಂದ" ಪ್ರಧಾನಿ ಮೋದಿಯವರ ಜೀವಕ್ಕೆ ಅಪಾಯವನ್ನು ಉಂಟು ಮಾಡುವ ಬಿಜೆಪಿಯ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
"ಅವರಿಗೆ ಜೀವ ಬೆದರಿಕೆ ಎಲ್ಲಿದೆ? ನಿಮ್ಮಿಂದ ಒಂದು ಕಿಲೋಮೀಟರ್ ದೂರದಲ್ಲಿ ಯಾರೂ ಇರಲಿಲ್ಲ. ಕಲ್ಲು ಎಸೆದಿಲ್ಲ, ಗುಂಡು ಹಾರಿಸಿಲ್ಲ, ಯಾವುದೇ ಘೋಷಣೆಗಳನ್ನು ಮಾಡಿಲ್ಲ. ನಾನು ಅದನ್ನು ಮಾಡಿದ್ದೇವೆ ಎಂದು ನೀವು ಹೇಗೆ ಹೇಳುತ್ತೀರಿ! ಅಂತಹ ದೊಡ್ಡ ನಾಯಕರು ಹೇಗೆ ಇಂತಹ ಹೇಳಿಕೆ ನೀಡುತ್ತಾರೆ. ಜನರು ನಿಮ್ಮನ್ನು ಪ್ರಧಾನಿಯಾಗಿ ಮತ ಹಾಕಿದ್ದಾರೆ - ನೀವು ಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬೇಕು. ನಾವು ನಮ್ಮ ಪ್ರಧಾನಿಯನ್ನು ಕೊಲ್ಲುತ್ತೇವೆ ಎಂದು ನೀವು ಹೇಳುತ್ತಿದ್ದೀರಿ," ಎಂದಿದ್ದಾರೆ.
ಬಿಜೆಪಿಗರಿಂದ ತಪ್ಪು ಸಂದೇಶ ರವಾನೆ:
"ಫಿರೋಜ್ಪುರ ರಾಷ್ಟ್ರೀಯ ಹೆದ್ದಾರಿ ಬಳಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೆಲವು ಪ್ರತಿಭಟನಾಕಾರರು ಅಡ್ಡ ಹಾಕಿದ ಘಟನೆ ಬಗ್ಗೆ ಕೆಲವು ಬಿಜೆಪಿ ನಾಯಕರು ತಪ್ಪು ತಪ್ಪು ಸಂದೇಶವನ್ನು ಹರಿ ಬಿಡುತ್ತಿದ್ದಾರೆ. ಪ್ರಧಾನಿ ಮೆರವಣಿಗೆ ಸ್ಥಳಕ್ಕೆ ತೆರಳಬೇಕಾಗಿದ್ದರೂ, ಹವಾಮಾನ ವೈಪರೀತ್ಯದಿಂದಾಗಿ ಸಾಧ್ಯವಾಗಲಿಲ್ಲ. ಅವರು ಬಟಿಂಡಾದ ಫ್ಲೈಓವರ್ನಲ್ಲಿ 15-20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದು, ನಂತರ, ಅವರು ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದರು," ಎಂದರು
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರತ್ಯೇಕ ತನಿಖೆ:
ಪಂಜಾಬ್ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭದ್ರತಾ ವೈಫಲ್ಯದ ಘಟನೆಯು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ನಾಯಕರ ನಡುವೆ ರಾಜಕೀಯ ಪ್ರೇರಿತ ವಾಕ್ಸಮರ ನಡೆಯುತ್ತಿದೆ. ಕೇಂದ್ರ ಸರ್ಕಾರ ಮತ್ತು ಪಂಜಾಬ್ ರಾಜ್ಯ ಸರ್ಕಾರಗಳು ಈ ಘಟನೆಗೆ ಸಂಬಂಧಿಸಿದಂತೆ ಪ್ರತ್ಯೇಕ ತನಿಖೆಗೆ ಆದೇಶಿಸಿವೆ. ಪ್ರಧಾನಮಂತ್ರಿ ಸಂಚಾರ ಮಾರ್ಗದ ಬಗ್ಗೆ ಮೊದಲೇ ಸೂಚನೆ ನೀಡಿದ್ದರೂ ಸಹ, ರಾಜ್ಯ ಸರ್ಕಾರ ಮತ್ತು ಪೊಲೀಸರು ಭದ್ರತಾ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.
70,000 ಕುರ್ಚಿಗಳಿದ್ದರೂ 700 ಜನರೂ ಇರಲಿಲ್ಲ:
Recommended Video
"ಪ್ರಧಾನಿಯವರು ತಲಪಬೇಕಾದ ಪ್ರದೇಶದಲ್ಲಿ 70,000 ಕುರ್ಚಿಗಳನ್ನು ಹಾಕಲಾಗಿದ್ದು, ಆದರೆ ಅಲ್ಲಿ 700 ಕುರ್ಚಿಗಳು ಸಹ ಭರ್ತಿ ಆಗಿರಲಿಲ್ಲ. ಈ ಹಿನ್ನೆಲೆ ಪ್ರಚಾರದ ವೇದಿಕೆಗಿಂತ 10 ಕಿಲೋ ಮೀಟರ್ ಹಿಂದಿನಿಂದಲೇ ವಾಪಸ್ ಆಗುವುದು ಉತ್ತಮ ಎಂದು ಅವರು ಭಾವಿಸಿದ್ದರು. ಟಿವಿಯಲ್ಲಿ ಖಾಲಿ ಕುರ್ಚಿಗಳನ್ನು ತೋರಿಸಬಾರದು ಎನ್ನುವುದಕ್ಕಾಗಿ ಈ ಹೊಸ ವಿಷಯವನ್ನು ಎತ್ತಿದ್ದಾರೆ. 'ಪ್ರಧಾನಿ ಅಪಾಯದಲ್ಲಿದ್ದಾರೆ, ಅವರು ಬದುಕುಳಿದರು, ಎಲ್ಲೆಡೆ ಮೃತ್ಯುಂಜಯ ಜಪ ನಡೆಯುತ್ತಿದೆ ಎಂದಿದ್ದಾರೆ. ನೀವು ದೇಶವನ್ನು ಏಕೆ ತಪ್ಪು ದಾರಿಗೆ ಎಳೆಯುತ್ತೀರಿ, ನಾವು ರಾಷ್ಟ್ರೀಯವಾದಿಗಳೇ ಆಗಿದ್ದೇವೆ. ಆದರೆ ನೀವು ಪ್ರತಿಬಾರಿ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಷ್ಟ್ರೀಯತೆಯನ್ನು ನೆನಪಿಸಿಕೊಳ್ಳುತ್ತೀರಿ ಹಾಗೂ ರಾಷ್ಟ್ರೀಯವಾದಿಗಳಾಗುತ್ತೀರಿ," ಎಂದು ಚನ್ನಿ ಆರೋಪಿಸಿದ್ದಾರೆ.