ಕಾಂಗ್ರೆಸ್ ಬಿಕ್ಕಟ್ಟು: ಪಂಜಾಬ್ ಮತ್ತು ಛತ್ತೀಸ್ಗಢ ಮಧ್ಯೆ ಒಂದೇ ಒಂದು ಸಾಮ್ಯತೆ!?
ಚಂಡೀಘರ್, ಅಕ್ಟೋಬರ್ 2: ಛತ್ತೀಸ್ಗಢ ಕಾಂಗ್ರೆಸ್ನಲ್ಲಿ ಭಿನ್ನಮತದ ಕೂಗು ಕೇಳಿ ಬರುತ್ತಿರುವುದರ ನಡುವೆ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಎಲ್ಲ ಊಹಾಪೋಹಗಳನ್ನು ತಳ್ಳಿ ಹಾಕಿದ್ದಾರೆ. ನಮ್ಮ ರಾಜ್ಯ ರಾಜಕಾರಣ ಎಂದಿಗೂ ಪಂಜಾಬ್ ರೀತಿ ಆಗುವುದಕ್ಕೆ ಸಾಧ್ಯವಿಲ್ಲ. ಎರಡು ರಾಜ್ಯಗಳ ನಡುವೆ ಕೇವಲ ಒಂದೇ ಒಂದು ಸಾಮ್ಯತೆಯಿದೆ. ಅದು ರಾಜ್ಯದ ಹೆಸರಿನಲ್ಲಿರುವ ಅಂಕಿ-ಸಂಖ್ಯೆಗಳಷ್ಟೇ ಎಂದು ಬಾಘೇಲ್ ಹೇಳಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಂತೆ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮುಖ್ಯಮಂತ್ರಿ ಸ್ಥಾನದಿಂದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೆಳಗಿಳಿದರೆ, ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ಸಲ್ಲಿಸಿದ್ದಾರೆ. ಅದೇ ರೀತಿ ಛತ್ತೀಸ್ಗಢ ಕಾಂಗ್ರೆಸ್ ಕೂಡ ಒಡೆದ ಮನೆಯಾಗಿದೆ ಎಂಬ ಲಕ್ಷಣ ಗೋಚರಿಸುತ್ತಿವೆ.
ಛತ್ತೀಸ್ಗಢ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟ: ಮತ್ತಷ್ಟು ಶಾಸಕರು ದೆಹಲಿಗೆ
"ಛತ್ತೀಸ್ಗಢ ಯಾವಾಗಲೂ ಛತ್ತೀಸ್ಗಢ ಆಗಿಯೇ ಉಳಿದುಕೊಳ್ಳಲಿದೆ. ಇದು ಎಂದಿಗೂ ಪಂಜಾಬ್ ಆಗುವುದಕ್ಕೆ ಸಾಧ್ಯವಿಲ್ಲ. ಎರಡು ರಾಜ್ಯಗಳ ನಡುವಿರುವ ಒಂದೇ ಒಂದು ಸಾಮ್ಯತೆ ಎಂದರೆ ರಾಜ್ಯಗಳು ತಮ್ಮ ಹೆಸರಿನಲ್ಲಿ ಅಂಕಿಗಳನ್ನು ಹೊಂದಿವೆ," ಎಂದು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಹೇಳಿದ್ದಾರೆ.
ಪಂಜಾಬ್ ಮತ್ತು ಛತ್ತೀಸ್ಗಢ ಬಗ್ಗೆ ವ್ಯಾಖ್ಯಾನ:
"ಪಂಜಾಬ್ ಎನ್ನುವುದು ಪಂಜ್(ಐದು) ಆಬ್ (ನದಿ)ಗಳನ್ನು ಹೊಂದಿರುವ ರಾಜ್ಯ ಎಂಬುದನ್ನು ತೋರಿಸುತ್ತದೆ. ಅದೇ ರೀತಿಯಾಗಿ ಛತ್ತೀಸ್ಗಢ ಎಂಬ ರಾಜ್ಯದ ಹೆಸರಿನಲ್ಲಿ ಅಂಕಿ-ಸಂಖ್ಯೆಗಳನ್ನು ಸೇರಿಸಲಾಗಿದೆ. ಛತ್ತೀಸ್(ಮೂವತ್ತಾರು) ಗಢ್ (ಕೋಟೆ)ಗಳನ್ನು ಹೊಂದಿರುವ ರಾಜ್ಯ ಎಂಬ ಅರ್ಥ ಬರುತ್ತದೆ. ಇದರ ಹೊರತಾಗಿ ಬೇರೆ ಯಾವ ರಾಜ್ಯಗಳು ತಮ್ಮ ಹೆಸರಿನಲ್ಲಿ ಅಂಕಿಗಳನ್ನು ಒಳಗೊಂಡಿಲ್ಲ. ಇದೊಂದು ಸಾಮ್ಯತೆಯನ್ನು ಹೊರತುಪಡಿಸಿದರೆ ಎರಡು ರಾಜ್ಯಗಳ ನಡುವೆ ಬೇರೆ ಯಾವುದೇ ರೀತಿ ಸಾಮ್ಯತೆಯು ಇಲ್ಲ," ಎಂದು ಭೂಪೇಶ್ ಬಾಘೇಲ್ ಹೇಳಿದ್ದಾರೆ.
ದೆಹಲಿಗೆ ಹಾರಿದ ಭಿನ್ನಮತೀಯ ಶಾಸಕರು:
ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ವಿರುದ್ಧ ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕರು ನಾಯಕತ್ವ ಬದಲಾವಣೆ ಕೂಗು ಎತ್ತಿದ್ದಾರೆ. ಈ ನಿಟ್ಟಿನಲ್ಲಿ ಸುಮಾರು 24ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಈಗಾಗಲೇ ದೆಹಲಿ ಹೈಕಮಾಂಡ್ ಮೆಟ್ಟಿಲೇರಿದ್ದಾರೆ. ಬಾಘೇಲ್ ವಿರುದ್ಧ ಭಿನ್ನಮತೀಯ ಶಾಸಕರು ಹೈಕಮಾಂಡ್ ಎದುರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಶಾಸಕರ ದೆಹಲಿ ಭೇಟಿ ಬಗ್ಗೆ ಪ್ರಶ್ನಿಸಿದ ಸಂದರ್ಭದಲ್ಲಿ "ಚುನಾಯಿತ ಶಾಸಕರು ಒಂದು ಪ್ರದೇಶಕ್ಕೆ ತೆರಳಲು ಯಾವುದೇ ರೀತಿ ನಿರ್ಬಂಧಗಳಿಲ್ಲ, ತಾವು ಇಷ್ಟಪಟ್ಟ ಜಾಗಕ್ಕೆ ಹೋಗಲು ಅವರು ಸಂಪೂರ್ಣ ಸ್ವತಂತ್ರರಾಗಿದ್ದಾರೆ. ಇದು ರಾಜಕೀಯ ಚಳುವಳಿಯಲ್ಲ. ಇದು ರಾಜಕೀಯ ಚಳುವಳಿಯೇ ಎಂದು ನೀವು ಕೇಳುತ್ತೀರಿ. ಅವರು ಭೇಟಿ ನೀಡಿ ಹಿಂದಿರುಗುತ್ತಾರೆ," ಎಂದು ಸಿಎಂ ಬಾಘೇಲ್ ಹೇಳಿದ್ದಾರೆ.
ಛತ್ತೀಸ್ಗಢದಲ್ಲಿ ಭೂಪೇಶ್ ಬಾಘೇಲ್ ಸಿಎಂ ಆದ ದಿನದಿಂದ ರಾಜ್ಯ ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯಗಳು ಕೇಳಿ ಬರುತ್ತಲೇ ಇವೆ. ಚುನಾವಣೆ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿದ್ದ, ಈಗ ಆರೋಗ್ಯ ಸಚಿವ ತ್ರಿಭುವನೇಶ್ವರ್ ಸರಣ್ ಸಿಂಗ್ ಡಿಯೋ ಅಥವಾ ಟಿ.ಎಸ್.ಡಿಯೋ ಅವರೇ ವಿಧಾನಸಭಾ ಚುನಾವಣೆ ಗೆಲುವಿಗೆ ಕಾರಣ ಎಂದು ಅವರ ಬೆಂಬಲಿಗರು ಹೇಳಿಕೊಂಡಿದ್ದರು. ಟಿ.ಎಸ್.ಡಿಯೋ ಬೆಂಬಲಿಗರು ಜೂನ್ನಿಂದ ಇಲ್ಲಿಯವರೆಗೆ ದೆಹಲಿ ತಲುಪಿ ಡಿಯೋ ಪರವಾಗಿ ಬಲಪ್ರದರ್ಶನ ಮಾಡಲು ಮುಂದಾಗಿದ್ದರು. ಇದೇ ಕಾರಣದಿಂದ ಈಗ ಬಘೇಲ್ ಪರವಾಗಿ ಶಾಸಕರು ದೆಹಲಿಗೆ ತೆರಳಿದ್ದಾರೆ.
ದೆಹಲಿಯಲ್ಲಿ ಭೂಪೇಶ್ ಬಾಘೇಲ್ ಕ್ಯಾಂಪ್:
ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಕೂಡಾ ದೆಹಲಿಯಲ್ಲಿ ಕ್ಯಾಂಪ್ ಹೂಡಿದ್ದಾರೆ. ಕೆಲವು ಬೆಂಬಲಿಗರು ಟಿ.ಎಸ್.ಡಿಯೋ ಅವರಿಗೆ ಸಿಎಂ ಸ್ಥಾನ ನೀಡಬೇಕೆಂದು ಒತ್ತಾಯ ಮಾಡಿದ್ದರು. ಆದರೆ ಸಿಎಂ ಸ್ಥಾನ ಟಿ.ಎಸ್.ಡಿಯೋಗೆ ಒಲಿಯಲಿಲ್ಲ. ಜೂನ್ನಲ್ಲಿ ಬಘೇಲ್ ಸರ್ಕಾರವು ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಮತ್ತೆರಡು ವರ್ಷಗಳಿಗಾದರೂ ಸಿಎಂ ಆಗಿ ಟಿ.ಎಸ್.ಡಿಯೋ ಅವರನ್ನು ನೇಮಿಸಬೇಕೆಂಬ ಒತ್ತಡ ಹೆಚ್ಚಾಗಿದೆ.