ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಪರೀಕ್ಷೆ ಬರೆಯದಿದ್ದರೂ ನೀವೆಲ್ಲ ಪಾಸ್
ರಾಯಪುರ್, ಏಪ್ರಿಲ್.01: ಭಾರತದಲ್ಲಿ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿದೆ. ಏಪ್ರಿಲ್.14ರವರೆಗೂ ದೇಶದಲ್ಲಿ ಎಲ್ಲವೂ ಸ್ತಬ್ಧ. ಶಾಲಾ-ಕಾಲೇಜುಗಳಿಗೂ ಈಗಾಗಲೇ ರಜೆ ಘೋಷಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಛತ್ತೀಸ್ ಗಢ ಸರ್ಕಾರ ಸಿಹಿಸುದ್ದಿ ನೀಡಿದೆ.
ಛತ್ತೀಸ್ ಗಢದಲ್ಲಿ 1 ರಿಂದ 9 ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದಿದ್ದರೂ ಮುಂದಿನ ಶೈಕ್ಷಣಿಕ ವರ್ಷಕ್ಕೆ ತೇರ್ಗಡೆಯಾಗಿ ಹೋಗಬಹುದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಅಂದರೆ ಪರೀಕ್ಷೆ ಬರೆಯದಿದ್ದರೂ ವಿದ್ಯಾರ್ಥಿಗಳನ್ನು ಪಾಸ್ ಮಾಡುವಂತೆ ಸೂಚಿಸಲಾಗಿದೆ.
ಕೊರೊನಾ ವೈರಸ್ ಭೀತಿ: ಮುಂದಕ್ಕೆ ಹೋದ NEET ಪರೀಕ್ಷೆ
ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಈ ಕುರಿತು ಶೈಕ್ಷಣಿಕ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಭಾರತ ಲಾಕ್ ಡೌನ್ ಹಿನ್ನೆಲೆ ಕಳೆದ ಮಾರ್ಚ್.19ರಿಂದಲೇ ರಾಜ್ಯದಲ್ಲಿನ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಪರೀಕ್ಷೆಗಳನ್ನೆಲ್ಲ ಮುಂದೂಡಿಕೆ ಮಾಡಲಾಗಿತ್ತು.
ಮಾರ್ಚ್.20ರಿಂದ ಛತ್ತೀಸ್ ಗಢ ಲಾಕ್ ಡೌನ್:
ಛತ್ತೀಸ್ ಗಢದಲ್ಲಿ ಮಾರ್ಚ್.20ರಿಂದಲೇ ಲಾಕ್ ಡೌನ್ ಮಾಡಲಾಗಿತ್ತು. ಇದಾಗಿ ನಾಲ್ಕು ದಿನಗಳ ಬಳಿಕ ಮಾರ್ಚ್.24ರಿಂದ ಏಪ್ರಿಲ್.14ರವರೆಗೂ 21 ದಿನಗಳ ಕಾಲ ದೇಶಾದ್ಯಂತ ಲಾಕ್ ಡೌನ್ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದರು. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ 1 ರಿಂದ 9 ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಈ ತರಗತಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ.