ಹೊಸ ರಾಜಕೀಯ ಪಕ್ಷದ ಹೆಸರು ಘೋಷಿಸಿದ ಅಮರಿಂದರ್ ಸಿಂಗ್
ಚಂಡೀಗಢ, ನವೆಂಬರ್ 02: ಪಂಜಾಬ್ ಕಾಂಗ್ರೆಸ್ ತೊರೆದಿದ್ದ, ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೊಸ ಪಕ್ಷವನ್ನು ಕಟ್ಟಿದ್ದು, ಅದರ ಹೆಸರನ್ನು ಮಂಗಳವಾರ ಘೋಷಣೆ ಮಾಡಿದ್ದಾರೆ.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ತಮ್ಮ ಹೊಸ ಪಕ್ಷದ ಹೆಸರು 'ಪಂಜಾಬ್ ಲೋಕ್ ಕಾಂಗ್ರೆಸ್' ಎಂದು ನಾಮಕರಣ ಮಾಡಿದ್ದಾರೆ.
ಪಂಜಾಬ್ನಲ್ಲಿ ಹೊಸ ಪಕ್ಷ ಘೋಷಿಸಿದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದೇನು?
ಪಂಜಾಬ್ ಮಾಜಿ ಸಿಎಂ ಏಳು ಪುಟಗಳ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದಷ್ಟೇ ಕೇಂದ್ರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವನ್ನು ರೈತ ಹಿತಾಸಕ್ತಿಯಿಂದ ಬಗೆಹರಿಸಿದರೆ ಬಿಜೆಪಿಯೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಅಮರಿಂದರ್ ಸಿಂಗ್ ಅವರು ಹೇಳಿದ್ದರು.
I have today sent my resignation to @INCIndia President Ms Sonia Gandhi ji, listing my reasons for the resignation.
— Capt.Amarinder Singh (@capt_amarinder) November 2, 2021
‘Punjab Lok Congress’ is the name of the new party. The registration is pending approval with the @ECISVEEP. The party symbol will be approved later. pic.twitter.com/Ha7f5HKouq
ಪಂಜಾಬ್ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಅಮರಿಂದರ್ ಸಿಂಗ್ ಅವರು ತಮ್ಮದೇ ಆದ ರಾಜಕೀಯ ಪಕ್ಷ ಸ್ಥಾಪಿಸಿದ್ದು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಸಾಧ್ಯತೆ ಇದೆ.
ಅಮರಿಂದರ್ ಸಿಂಗ್ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಅವರು ಬಿಜೆಪಿಗೆ ಸೇರುವ ಊಹಾಪೋಹಗಳಿಗೆ ಪುಷ್ಟಿ ನೀಡಿದಂತಾಗಿತ್ತು.
ಆದರೆ ಪಂಜಾಬ್ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಹೊಸ ಪಕ್ಷವನ್ನು ರಚಿಸುವುದಾಗಿ ತರುವಾಯ ಘೋಷಿಸಿದ್ದರು.
ಟ್ವಿಟ್ಟರ್ನಲ್ಲಿ ಪಕ್ಷದ ಹೆಸರನ್ನು ಪ್ರಕಟಿಸಿದ ಸಿಂಗ್, ಪಕ್ಷದ ನೋಂದಣಿಗೆ ಅನುಮೋದನೆಯು ಭಾರತದ ಚುನಾವಣಾ ಆಯೋಗದಲ್ಲಿ ಬಾಕಿ ಉಳಿದಿದೆ. ನಂತರ ಚುನಾವಣಾ ಚಿಹ್ನೆಯನ್ನು ಪಡೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರೊಂದಿಗಿನ ಜಟಾಪಟಿಯಾ ಮಧ್ಯೆ ಸೆಪ್ಟೆಂಬರ್ 18 ರಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಕಾಂಗ್ರೆಸ್ ತಮ್ಮನ್ನು ಅವಮಾನಿಸಿದೆ ಎಂದು ಆರೋಪಿಸಿ, ಶೀಘ್ರದಲ್ಲೇ ಪಕ್ಷ ತ್ಯಜಿಸುವೆ ಎಂದು ಹೇಳಿದ್ದರು. ಮುಂದಿನ ಕಾರ್ಯತಂತ್ರದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ, ಸ್ನೇಹಿತರು ಮತ್ತು ಆಪ್ತರೊಂದಿಗೆ ಚರ್ಚಿಸಿದ ನಂತರ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ಇದಾದ ಬಳಿಕ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಅವರು ಘೋಷಿಸಿದ್ದರು.
ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಇಂದು ಔಪಚಾರಿಕವಾಗಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ. ಏಳು ಪುಟಗಳ ರಾಜೀನಾಮೆ ಪತ್ರವನ್ನು ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದಾರೆ.
ಇದರೊಂದಿಗೆ ಅವರು ತಮ್ಮ ಹೊಸ ಪಕ್ಷದ ಘೋಷಣೆಯನ್ನು ಕೂಡ ಮಾಡಿದ್ದಾರೆ. ಕ್ಯಾಪ್ಟನ್ ಅವರು ತಮ್ಮ ಹೊಸ ಪಕ್ಷಕ್ಕೆ 'ಪಂಜಾಬ್ ಲೋಕ ಕಾಂಗ್ರೆಸ್' ಎಂದು ಹೆಸರನ್ನಿಟ್ಟಿದ್ದಾರೆ.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಕಳೆದ 3 ವರ್ಷಗಳಿಂದ ಅಮರಿಂದರ್ ವಿರುದ್ಧ ಸಿಧು ಕತ್ತಿ ಮಸೆಯುತ್ತಲೇ ಇದ್ದರು. ಕಾಂಗ್ರೆಸ್ ಒಳಜಗಳ ಹೆಚ್ಚಾಗುತ್ತಿದ್ದಂತೆ ಇತ್ತ ಹೈಕಮಾಂಡ್ ಅಮರಿಂದರ್ ಸಿಂಗ್ ಅವರನ್ನು ಕಡೆಗಣಿಸಿತು. ಭಾರಿ ವಿರೋಧದ ನಡುವೆ ನವವೋಜ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿತು. ಇದು ಪಂಜಾಬ್ ಕಾಂಗ್ರೆಸ್ನಲ್ಲಿ ಬಿರುಗಾಳಿ ಎಬ್ಬಿಸಿತು.
ಸಿಧು ಹಾಗೂ ಅಮರಿಂದರ್ ಹಗ್ಗಜಗ್ಗಾಟ ಹೆಚ್ಚಾಗುತ್ತಿದ್ದಂತೆ ಅಮರಿಂದರ್ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದರು. ಇತ್ತ ಸಿಧು, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜಿನಾಮೆ ನೀಡಿ ಅಚ್ಚರಿ ಮೂಡಿಸಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ನೊಂದಿದ್ದ ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆದು ಹೊಸ ಪಕ್ಷ ಕಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ್ದಾರೆ. ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಮುಂಬರುವ ಪಂಜಾಬ್ ವಿಧಾನ ಸಭಾ ಚುನಾವಣೆ ಅಖಾಡಕ್ಕೆ ಇಳಿಯುತ್ತಿದೆ.
ಬಿಜೆಪಿ ಜೊತೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿರುವ ಕ್ಯಾಪ್ಟನ್ ಅಮರಿಂದರ್, ಪಂಜಾಬ್ನಿಂದ ಕಾಂಗ್ರೆಸ್ ದೂರವಿಡಲು ಎಲ್ಲಾ ಪ್ರಯತ್ನ ನಡೆಸುತ್ತಿದ್ದಾರೆ.
ಹೊಸ ಪಕ್ಷ ಪಂಜಾಬ್ ನಾಗರೀಕರ, ಕಳೆದೊಂದು ವರ್ಷದಿಂದ ಹೊರಾಡುತ್ತಿರುವ ರೈತರ ಸಮಸ್ಯೆಗಳನ್ನು ಬಗೆ ಹರಿಸಲು ಪ್ರಯತ್ನಿಸಲಿದೆ. ಪಂಜಾಬ್ ಜನತೆ, ರೈತರ ಧನಿಯಾಗಿ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಕೆಲಸ ಮಾಡಲಿದೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಗಡಿ ಹೊಂದಿರುವ ಪಂಜಾಬ್ ರಾಜ್ಯದಲ್ಲಿ ಜನರ ಸುರಕ್ಷತೆಗೆ ಹೆಚ್ಚಿನ ಅದ್ಯತೆ ನೀಡಬೇಕಿದೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.