"ಜನರ ಕೋಪ ಎದುರಿಸುತ್ತೇವೆ, ಆದರೆ ರಾಶಿರಾಶಿ ಹೆಣ ನೋಡಲು ಸಾಧ್ಯವಿಲ್ಲ"
ಹರ್ಯಾಣ, ಏಪ್ರಿಲ್ 16: ಹರಿಯಾಣದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಏರುತ್ತಿರುವ ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲು ಹರ್ಯಾಣ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಘೋಷಿಸಿದೆ. ಈ ಕುರಿತು ಮಾತನಾಡಿರುವ ರಾಜ್ಯ ಆರೋಗ್ಯ ಸಚಿವ ಅನಿಲ್ ವಿಜ್, "ಸರ್ಕಾರ ಜನರ ಕೋಪವನ್ನು ಎದುರಿಸಲು ಸಿದ್ಧವಿದೆ. ಆದರೆ ರಾಶಿ ರಾಶಿ ಹೆಣಗಳನ್ನು ನೋಡಲು ಸಿದ್ಧವಿಲ್ಲ" ಎಂದು ಹೇಳಿದ್ದಾರೆ.
ಸದ್ಯಕ್ಕೆ ಕೊರೊನಾ ನಿಯಂತ್ರಣಕ್ಕೆ ಎರಡು ಮಾರ್ಗಗಳು ಇವೆ. ಅದರಲ್ಲಿ ಲಾಕ್ಡೌನ್ ಕೂಡ ಒಂದು. ಆದರೆ ಅದು ಈಗ ಸಾಧ್ಯವಿಲ್ಲ. ಮತ್ತೊಂದು ಮಾರ್ಗ ಮಾರ್ಗಸೂಚಿಗಳ ಪಾಲನೆ ಎಂದಿದ್ದಾರೆ.
ಜನರಿಗೆ ಕಷ್ಟ ಎನಿಸಿದರೂ ಪರವಾಗಿಲ್ಲ, ನಿಯಮಗಳನ್ನು ಕಠಿಣವಾಗಿ ಪಾಲಿಸುವುದರ ಕುರಿತು ನಿಗಾ ವಹಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಜನರ ಕೋಪವನ್ನು, ಆಕ್ರೋಶವನ್ನು ಎದುರಿಸಬಹುದು. ಆದರೆ ಕೊರೊನಾದಿಂದ ಸಾವನ್ನಪ್ಪುವವರನ್ನು ನೋಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕೋವ್ಯಾಕ್ಸಿನ್ ಪ್ರಯೋಗ: ಹರ್ಯಾಣ ಆರೋಗ್ಯ ಸಚಿವರಿಗೆ ಮೊದಲ ಲಸಿಕೆ
ಕೊರೊನಾ ಪ್ರಕರಣಗಳು ಏರಿಕೆಯಾದ ಬೆನ್ನಲ್ಲೇ ಹರ್ಯಾಣದಲ್ಲಿ ಕಾರ್ಯಕ್ರಮಗಳಿಗೆ ಸೇರುವ ಜನರ ಸಂಖ್ಯೆಯನ್ನು ಇನ್ನಷ್ಟು ಕಡಿಮೆಗೊಳಿಸಿದೆ. ತೆರೆದ ಜಾಗಗಳಲ್ಲಿ 200ಕ್ಕೂ ಹೆಚ್ಚು ಜನರು ಸೇರುವಂತಿಲ್ಲ ಹಾಗೂ ಒಳಾಂಗಣದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ 50ಕ್ಕೂ ಹೆಚ್ಚು ಜನರು ಸೇರುವಂತಿಲ್ಲ ಎಂದು ತಿಳಿಸಲಾಗಿದೆ. 20ಕ್ಕೂ ಹೆಚ್ಚು ಜನರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವಂತಿಲ್ಲ ಎಂಬ ನಿಯಮ ಹೇರಲಾಗಿದೆ.
ಗುರುವಾರ ಹರ್ಯಾಣದಲ್ಲಿ 5858 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 30 ಸಾವಿರ ದಾಟಿದೆ. ಇದುವರೆಗೂ ಸೋಂಕಿನಿಂದ 3,316 ಮಂದಿ ಸಾವನ್ನಪ್ಪಿದ್ದಾರೆ.