Breaking: ಪಂಜಾಬ್ ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ
ಚಂಡೀಗಢ, ಸೆಪ್ಟೆಂಬರ್ 18: ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ . ಹಲವಾರು ತಿಂಗಳುಗಳಿಂದ ಪಂಜಾಬ್ನಲ್ಲಿ ನಾಯಕತ್ವದ ವಿಚಾರದಲ್ಲಿ ಉಂಟಾಗಿದ್ದ ಅಸಮಾಧಾನ ಅಮರೀಂದರ್ ಸಿಂಗ್ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಬಂದು ತಲುಪಿದೆ.
"ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಮತ್ತು ಮಂತ್ರಿಗಳ ಮಂಡಳಿಯ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ರಾಜಭವನ ದ್ವಾರದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಾರೆ," ಎಂದು ಪಂಜಾಬ್ ಸಿಎಂ ಮಾಧ್ಯಮ ಸಲಹೆಗಾರ ರವೀನ್ ತುಕ್ರಲ್ ತಿಳಿಸಿದ್ದಾರೆ.
ಪಂಜಾಬ್ನಲ್ಲಿ ನಾಯಕತ್ವ ಬದಲಾವಣೆ?: ಇಂದು ಕಾಂಗ್ರೆಸ್ ಶಾಸಕರ ಸಭೆ
ಪಂಜಾಬ್ನ ಕಾಂಗ್ರೆಸ್ ಘಟಕದಲ್ಲಿ ನಾಯಕತ್ವದ ವಿಚಾರದಲ್ಲಿ ವೈಮನಸ್ಸು ಮತ್ತಷ್ಟು ಹೆಚ್ಚಾಗಿತ್ತು. ಪಂಜಾಬ್ನ ಈ ಕಾಂಗ್ರೆಸ್ನ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರುಗಳ ಸಭೆಯನ್ನು ಇಂದು ಕರೆದಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ರಾತ್ರೋರಾತ್ರಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.
ಪಂಜಾಬ್ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ವಿರುದ್ದವಾಗಿ ಕಳೆದ ತಿಂಗಳು ನಾಲ್ಕು ಸಚಿವರುಗಳು ಹಾಗೂ ಸುಮಾರು ಹನ್ನೆರಡಕ್ಕೂ ಅಧಿಕ ಶಾಸಕರುಗಳು ಬಂಡಾಯ ಎದ್ದಿದ್ದರು. ಪಂಜಾಬ್ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಬಗ್ಗೆ ಯಾವುದೇ ನಂಬಿಕೆ ನಮಗೆ ಇಲ್ಲ ಎಂದು ಈ ಶಾಸಕರು, ಸಚಿವರುಗಳು ಹೇಳಿಕೊಂಡಿದ್ದರು. ಈ ಹಿನ್ನೆಲೆ ಪಕ್ಷದ ಒಳಗಿನ ಈ ಬಿಕ್ಕಟ್ಟನ್ನು ಸರಿಪಡಿಸುವುದು ಕಾಂಗ್ರೆಸ್ ಹೈಕಮಾಂಡ್ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಶಾಸಕರುಗಳು ಕೂಡಾ ಸಭೆ ಕರೆಯುವಂತೆ ಒತ್ತಡ ಹೇರುತ್ತಿದ್ದರು ಎಂದು ಹೇಳಲಾಗಿದೆ. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸುಮಾರು 50 ರಷ್ಟು ಶಾಸಕರು ಪತ್ರ ಬರೆದಿದ್ದರು.
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಪಂಜಾಬ್ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತನ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಈ ಪತ್ರಿಕಾಗೋಷ್ಠಿಗೂ ಮುನ್ನ ಅಮರೀಂದರ್ ಸಿಂಗ್ ತನ್ನ ಪರವಾಗಿ ಇರುವ ಶಾಸಕರುಗಳೊಂದಿಗೆ ಸಭೆ ನಡೆಸಿದ್ದರು ಎಂದು ಹೇಳಲಾಗಿದೆ.
ಈಗಾಗಲೇ ಕಾಂಗ್ರೆಸ್ ಪಂಜಾಬ್ನ ಉಸ್ತುವಾರಿ ಹರೀಶ್ ರಾವತ್, "ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಸಭೆಯನ್ನು ಸೇರುವಂತೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ನಿರ್ದೇಶನ ನೀಡಿದೆ. ಕಾಂಗ್ರೆಸ್ನ ಎಲ್ಲಾ ಶಾಸಕರುಗಳು ಈ ಸಭೆಗೆ ಹಾಜರಾಗಬೇಕಾಗಿ ವಿನಂತಿ," ಎಂದು ನಿನ್ನೆ ತಡ ರಾತ್ರಿ ಟ್ವೀಟ್ ಮೂಲಕ ತಿಳಿಸಿದ್ದರು.
ಇನ್ನು ತನ್ನ ತಂದೆ ರಾಜೀನಾಮೆ ನೀಡುವ ಬಗ್ಗೆ ಪುತ್ರ ರಣೀಂದರ್ ಸಿಂಗ್ ಕೂಡಾ ಮಾಹಿತಿ ನೀಡಿದ್ದಾರೆ. "ನನ್ನ ತಂದೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಅವರ ಜೊತೆಯಾಗಲು ನನಗೆ ಹೆಮ್ಮೆಯಿದೆ," ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅಮರೀಂದರ್ ಸಿಂಗ್, ತಾನು "ಅವಮಾನಕ್ಕೆ ಒಳಗಾಗುತ್ತೇನೆ ಎಂದನಿಸಿತು, ಆದ್ದರಿಂದ ನಾನು ರಾಜೀನಾಮೆ ನೀಡಿದೆ," ಎಂದು ಹೇಳಿದ್ದಾರೆ. "ನಾನು ರಾಜೀನಾಮೆ ನೀಡಲು ಹೋಗುತ್ತಿದ್ದೇನೆ ಎಂದು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ತಿಳಿಸಿದ್ದೇನೆ. ಇದು ಮೂರನೇ ಬಾರಿ ನಡೆಯುತ್ತಿದೆ. ನಾನು ಅವಮಾನಕ್ಕೆ ಒಳಗಾಗಿದ್ದೇನೆ. ಅವರು ಯಾರನ್ನು ನಂಬಬಲ್ಲರೋ ಅವರನ್ನು ಮುಖ್ಯಮಂತ್ರಿ ಮಾಡಬಹುದು. ಕಾಂಗ್ರೆಸ್ ಅಧ್ಯಕ್ಷೆ ಏನು ನಿರ್ಧಾರ ಮಾಡುತ್ತಾರೋ ಅದು ಸರಿ. ನಾನು ಕಾಂಗ್ರೆಸ್ ಪಕ್ಷದೊಂದಿಗೆ ಇದ್ದೇನೆ, ನನ್ನ ಬೆಂಬಲತರನ್ನು ಭೇಟಿಯಾದ ಬಳಿಕ ನಾನು ನನ್ನ ಮುಂದಿನ ಜೀವನದ ರಾಜಕೀಯದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ," ಎಂದು ಹೇಳಿದ್ದಾರೆ.
(ಒನ್ ಇಂಡಿಯಾ ಸುದ್ದಿ)