ಹರಿಯಾಣ; ಬಿಜೆಪಿ ಸೋಲಿಗೆ ರಜಾ ದಿನಗಳೇ ಕಾರಣ ಎಂದ ವಕ್ತಾರ
ಚಂಡೀಗಢ, ಜನವರಿ 01: ಹರಿಯಾಣದ ಅಂಬಾಲದಲ್ಲಿ ಬಿಜೆಪಿ ಸೋಲಿಗೆ ವರ್ಷಾಂತ್ಯದ ರಜಾ ದಿನಗಳೇ ಕಾರಣ ಎಂದು ಬಿಜೆಪಿ ವಕ್ತಾರ ತಮ್ಮ ಸೋಲನ್ನು ಸಮರ್ಥಿಸಿಕೊಂಡಿದ್ದಾರೆ.
ಅಂಬಾಲದಲ್ಲಿ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ತಮ್ಮ ಮತದಾರರು ರಜೆಗೆಂದು ದೂರದೂರುಗಳಿಗೆ ತೆರಳಿದ್ದೇ ಬಿಜೆಪಿ ಸೋಲಲು ಕಾರಣ ಎಂದಿದ್ದಾರೆ. ಆದರೆ, ಕಠಿಣ ಪರಿಸ್ಥಿತಿಯ ನಗರಸಭೆ ಚುನಾವಣೆಯಲ್ಲಿ ಪಕ್ಷವು ತೃಪ್ತಿದಾಯಕವಾಗಿ ಕಾರ್ಯನಿರ್ವಹಿಸಿದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತರ್ ತಿಳಿಸಿದ್ದಾರೆ.
ಹರಿಯಾಣ ಸ್ಥಳೀಯ ಸಂಸ್ಥೆ ಚುನಾವಣೆ; ಬಿಜೆಪಿ ಮೇಲೆ ಪರಿಣಾಮ ಬೀರಿತೇ ರೈತರ ಪ್ರತಿಭಟನೆ?
ಆದರೆ ಆ ಕಠಿಣ ಸನ್ನಿವೇಶಗಳು ಯಾವುವು ಎಂಬುದರ ಬಗ್ಗೆ ಖತ್ತರ್ ಹೇಳಿಲ್ಲ. ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ರೈತರು ಕೈಗೊಂಡಿದ್ದ ಪ್ರತಿಭಟನೆಯೂ ಚುನಾವಣೆ ಮೇಲೆ ಪರಿಣಾಮ ಬೀರಿದೆ ಎಂದು ಪರೋಕ್ಷವಾಗಿ ನುಡಿದಿದ್ದಾರೆ. ಭಾನುವಾರ, ಡಿಸೆಂಬರ್ 27ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಅಂಬಾಲ, ಪಂಚಕುಲ, ಸೋನಿಪತ್ ನ ಮೂರು ಮೇಯರ್ ಸೀಟ್ ಗಳಲ್ಲಿ ಒಂದು ಸ್ಥಾನ ಪಡೆದಿದೆ. ಪಂಚಕುಲದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ.
ಕಾಂಗ್ರೆಸ್ ಹಾಗೂ ಹರಿಯಾಣ ಜನ ಚೇತನಾ ಪಕ್ಷ ಸೋನಿಪತ್ ಹಾಗೂ ಅಂಬಾಲದಲ್ಲಿ ಸ್ಥಾನವನ್ನು ಪಡೆದುಕೊಂಡಿವೆ. ಆದರೆ ಇದನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ವಕ್ತಾರ ಸಂಜಯ್ ಶರ್ಮಾ, ನಮ್ಮ ವೋಟ್ ಬ್ಯಾಂಕ್ ಎನಿಸಿಕೊಂಡಿದ್ದ ಜನರು ರಜಾಗೆಂದು ಬೇರೆ ಕಡೆ ತೆರಳಿದ್ದೇ ಈ ಸೋಲಿಗೆ ಕಾರಣ, ಅತಿ ಕಡಿಮೆ ಮತಗಳು ಬೀಳಲು ಕಾರಣ ಎಂದಿದ್ದಾರೆ.
ಇದರೊಂದಿಗೆ, ರಜಾ ಕಾಲಗಳಲ್ಲಿ ಹಾಗೂ ಹಬ್ಬದ ದಿನಗಳಲ್ಲಿ ಚುನಾವಣೆಗಳನ್ನು ನಿಗದಿಪಡಿಸದಂತೆ ಚುನಾವಣಾ ಆಯೋಗದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. 2013ರ ನಗರಪಾಲಿಕೆ ಚುನಾವಣೆಯಲ್ಲಿ 67% ಇದ್ದ ಮತದಾನ ಪ್ರಮಾಣ ಈ ಬಾರಿ 56.3% ಗೆ ಇಳಿದಿದೆ.