ಜುಲೈ 5ರವರೆಗೆ ತಜೀಂದರ್ ಬಗ್ಗಾ ಬಂಧಿಸುವಂತಿಲ್ಲ: ಪಂಜಾಬ್ ಪೊಲೀಸ್ಗೆ ಕೋರ್ಟ್ ಆದೇಶ
ಚಂಡೀಗಢ, ಮೇ 10; ಬಿಜೆಪಿ ನಾಯಕ, ಶಾಸಕ ತಜೀಂದರ್ ಪಾಲ್ ಸಿಂಗ್ ಬಗ್ಗಾಗೆ ಬಂಧನದಿಂದ ರಕ್ಷಣೆ ಸಿಕ್ಕಿದೆ. ಜುಲೈ 5ರವರೆಗೆ ಬಗ್ಗಾ ವಿರುದ್ಧ ಯಾವುದೇ ಕ್ರಮ ಜರುಗಿಸಬಾರದು ಎಂದು ಪಂಜಾಬ್ ಸರಕಾರಕ್ಕೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಆದೇಶ ನೀಡಿದೆ.
ಮಂಗಳವಾರ ಹೈಕೋರ್ಟ್ ಈ ಕುರಿತಂತೆ ಆದೇಶ ಹೊರಡಿಸಿದೆ. ಇದರೊಂದಿಗೆ ಬಿಜೆಪಿ ನಾಯಕನಿಗೆ ಬಂಧನದ ಭೀತಿ ತಾತ್ಕಾಲಿಕವಾಗಿ ನಿವಾರಣೆ ಆದಂತಾಗಿದೆ. ಇದೇ ವೇಳೆ ಪ್ರಕರಣ ಸಂಬಂಧ ವಿವರವಾದ ಅಫಿಡವಿಟ್ ಸಲ್ಲಿಸಲು ಪಂಜಾಬ್ ಸರಕಾರ ಕೋರ್ಟ್ ಬಳಿ 10 ದಿನ ಕಾಲಾವಕಾಶ ಕೇಳಿದೆ.
ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರದಲ್ಲಿ ಸ್ಫೋಟ; ಚುರುಕಿನ ತನಿಖೆ
ಮಾರ್ಚ್ 30ರಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಹೊರಗೆ ಪ್ರತಿಭಟನೆ ಮಾಡುವ ವೇಳೆ ತಜೀದಂರ್ ಸಿಂಗ್ ಮುಖ್ಯಮಂತ್ರಿಗಳನ್ನು ನಿಂದಿಸಿದ ಆರೋಪವಿದೆ. ಈ ಸಂಬಂಧ ಏಪ್ರಿಲ್ 1ರಂದು ಎಫ್ಐಆರ್ ದಾಖಲಾಗಿತ್ತು. ಐಪಿಸಿಯ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಯಿತು.
ಕಳೆದ ಶುಕ್ರವಾರ ನಡೆದ ಹೈಡ್ರಾಮಾದಲ್ಲಿ ಪಂಜಾಬ್ ಪೊಲೀಸರು ದೆಹಲಿಗೆ ಹೋಗಿ ತಜೀಂದರ್ ಪಾಲ್ ಸಿಂಗ್ ಬಗ್ಗಾರನ್ನು ಬಂಧಿಸಿದ್ದರು. ಹರ್ಯಾಣ ಮತ್ತು ದೆಹಲಿ ಪೊಲೀಸರು ಇದನ್ನು ವಿರೋಧಿಸಿದ್ದರು. ಇದು ಈ ಮೂರು ರಾಜ್ಯಗಳ ಪೊಲೀಸರ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿತ್ತು. ಕೆಲ ಗಂಟೆಗಳ ಬಳಿಕ ಅವರನ್ನು ದಹಲಿ ಪೊಲೀಸರು ವಾಪಸ್ ದೆಹಲಿಗೆ ಕರೆದುಕೊಂಡು ಬಂದಿದ್ದರು.
ಮೊಹಾಲಿಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಪಂಜಾಬ್ ಪೊಲೀಸರು ತಜೀಂದರ್ ಪಾಲ್ರನ್ನು ಬಂಧಿಸಲು ಕಾದುಕುಳಿತಿದ್ದಾರೆ. ಈಗ ಪಂಜಾಬ್ ಹರ್ಯಾಣ ಹೈಕೋರ್ಟ್ ಆದೇಶದ ಕಾರಣ ಎರಡು ತಿಂಗಳವರೆಗೆ ಬಂಧನದಿಂದ ಬಗ್ಗಾಗೆ ವಿನಾಯಿತಿ ಸಿಕ್ಕಂತಾಗಿದೆ.
(ಒನ್ಇಂಡಿಯಾ ಸುದ್ದಿ)