ಪಂಜಾಬ್: ಶನಿವಾರ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿರುವ ಭಗವಂತ್ ಮಾನ್
ಚಂಡೀಗಢ, ಮಾರ್ಚ್ 11: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಆಗಿ ಭಗವಂತ್ ಮಾನ್ ಆಯ್ಕೆ ಆಗಿದ್ದಾರೆ. ಮಾರ್ಚ್ 12ರ ಶನಿವಾರ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿಲಿರುವ ಮಾನ್, ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
ರಾಜ್ಯದ ಎಎಪಿ ಶಾಸಕಾಂಗ ಪಕ್ಷದ ನಾಯಕರಾಗಿ ಭಗವಂತ್ ಮಾನ್ ಅವರನ್ನು ಶುಕ್ರವಾರ ಆಯ್ಕೆ ಮಾಡಲಾಯಿತು. ಇದರ ಬೆನ್ನಲ್ಲೇ, ಮನ್ ಚಂಡೀಗಢದ ತಮ್ಮ ನಿವಾಸದಲ್ಲಿ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರ ಸಭೆಯನ್ನು ನಡೆಸಿದರು.
ಪಂಜಾಬ್ ನೂತನ ಸಚಿವ ಸಂಪುಟ: ಯಾರಿಗೆ, ಯಾವ ಖಾತೆ? ಸಂಪೂರ್ಣ ಪಟ್ಟಿ
"ನಾವು ಔಪಚಾರಿಕವಾಗಿ ನಮ್ಮ ನಾಯಕರಾಗಿ ಭಗವಂತ್ ಮಾನ್ ಅವರನ್ನು ಆಯ್ಕೆ ಮಾಡಿದ್ದೇವೆ," ಎಂದು ಎಎಪಿ ನಾಯಕ ಅಮನ್ ಅರೋರಾ ಹೇಳಿದ್ದಾರೆ. ಭಗವಂತ್ ಮಾನ್ ಮಾರ್ಚ್ 16ರಂದು ನವನ್ಶಹರ್ ಜಿಲ್ಲೆಯ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ಖಟ್ಕರ್ ಕಲಾನ್ನಲ್ಲಿ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಭಗತ್ ಸಿಂಗ್ ಪೂರ್ವಿಕರ ಗ್ರಾಮದಲ್ಲಿ ಪ್ರಮಾಣವಚನ:
ಪಂಜಾಬ್ ವಿಧಾನಸಭೆ ಚುನಾವಣೆ ಫಲಿತಾಂಶ ಗುರುವಾರ ಹೊರ ಬೀಳುತ್ತಿದ್ದಂತೆ ಗೆಲುವು ಸಾಧಿಸಿದ ಆಪ್ ಮಹತ್ವದ ಘೋಷಣೆಯನ್ನು ಹೊರಡಿಸಿತು. ಶಹೀದ್ ಭಗತ್ ಸಿಂಗ್ ನಗರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಿಕರ ಗ್ರಾಮವಾದ ಖಟ್ಕರ್ ಕಲಾನ್ನಲ್ಲಿ ನೂತನ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕರಿಸಲಿದೆಯೇ ಹೊರತು ರಾಜಭವನದಲ್ಲಿ ಅಲ್ಲ ಎಂದು ಭಗವಂತ್ ಮಾನ್ ಘೋಷಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಅಹಂಕಾರಿಗಳಾಗಬೇಡಿ, ಜನರಿಗಾಗಿ ಕೆಲಸ ಮಾಡಿ:
ಪಂಜಾಬಿನಲ್ಲಿ ಹೊಸದಾಗಿ ಚುನಾಯಿತ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಭಗವಂತ್ ಮಾನ್, "ಪಕ್ಷಕ್ಕೆ ಮತ ಹಾಕದ" ಜನರಲ್ಲಿ ದುರಹಂಕಾರ ತೋರಿಸಬೇಡಿ. ಎಲ್ಲ ಜನರಿಗಾಗಿ ಕೆಲಸ ಮಾಡುವಂತೆ ಎಲ್ಲರಲ್ಲೂ ಮನವಿ ಮಾಡಿಕೊಂಡರು. ಅಹಂಕಾರಿಯಾಗಬೇಡಿ ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ನಿಮಗೆ ಮತ ಹಾಕಿದವರಿಗೂ ಮತ್ತು ಹಾಕದವರಿಗೂ ವ್ಯತ್ಯಾಸ ತೋರಿಸಬೇಡಿ. ನೀವು ಪಂಜಾಬಿಗರ ಶಾಸಕರು, ಅವರು ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ರಾಜ್ಯದ ಎಲ್ಲ ಜನರಿಗಾಗಿ ಕೆಲಸ ಮಾಡಿ ಎಂದು ಮಾನ್ ಮನವಿ ಮಾಡಿಕೊಂಡರು.
ಪಂಜಾಬ್ ಚುನಾವಣೆಯಲ್ಲಿ ಮತದಾರರ ತೀರ್ಪು:
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಎಎಪಿ ಭರ್ಜರಿ ಗೆಲುವು ದಾಖಲಿಸಿದೆ. ಆಡಳಿತಾರೂಢ ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದುಕೊಂಡಿದೆ. ಶಿರೋಮಣಿ ಅಕಾಲಿದಳ (ಎಸ್ಎಡಿ) ಕೇವಲ ಮೂರು ಸ್ಥಾನಗಳಲ್ಲಿ ಜಯ ಗಳಿಸಿದರೆ, ಬಿಜೆಪಿಯು ಎರಡು ಕ್ಷೇತ್ರಗಳನ್ನು ಗೆದ್ದುಕೊಳ್ಳುವುದಕ್ಕಷ್ಟೇ ಸಾಧ್ಯವಾಗಿದೆ. ಉಳಿದಂತೆ ಬಹುಜನ ಸಮಾಜವಾದಿ ಪಕ್ಷ 1 ಹಾಗೂ ಸ್ವತಂತ್ರ್ಯ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.