ರೈತರನ್ನು ಬೆಂಬಲಿಸಿದ್ದಕ್ಕೆ ಬಾಸುಂಡೆ ಬರುವಂತೆ ಥಳಿಸಿದರು; ಕಾರ್ಯಕರ್ತೆ ಆರೋಪ
ಚಂಡೀಗಢ, ಫೆಬ್ರವರಿ 24: ಕೃಷಿ ಕಾಯ್ದೆಗಳ ವಿರುದ್ಧ ರೈತರ ಚಳವಳಿಗೆ ವ್ಯಾಪಕ ಬೆಂಬಲ ಗಳಿಸಿದ ಕಾರಣ ಪೊಲೀಸರು ನನ್ನನ್ನು ಬಂಧಿಸಿದ್ದು, ನನಗೆ ತೀವ್ರವಾಗಿ ಥಳಿಸಿದ್ದಾರೆ. ಬಾಸುಂಡೆ ಬರುವಂತೆ ಥಳಿಸಿ ಹಿಂಸೆ ನೀಡಿದ್ದಾರೆ ಎಂದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ಗೆ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ದಲಿತ ಕಾರ್ಮಿಕ ಹಕ್ಕುಗಳ ಹೋರಾಟಗಾರ್ತಿ ನೊದೀಪ್ ಕೌರ್ ಆರೋಪಿಸಿದ್ದಾರೆ.
ಜನವರಿ 12ರಂದು ಕೌರ್ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿ ಕಾರ್ಮಿಕರ ಬಾಕಿ ವೇತನ ಪಾವತಿಗೆ ಆಗ್ರಹಿಸಿದ್ದರು. ಅಲ್ಲಿಗೆ ಆಗಮಿಸಿದ್ದ ಪೊಲೀಸರು ಕೌರ್ ಮೇಲೆ ಹಲ್ಲೆ ನಡೆಸಿದ್ದು, ಸ್ಥಳದಲ್ಲಿ ಗಲಭೆ ಏರ್ಪಟ್ಟಿತ್ತು. ನಂತರ ಕೌರ್ ವಿರುದ್ಧ ಕೊಲೆ ಯತ್ನ, ಸುಲಿಗೆ, ಕಳ್ಳತನ, ಗಲಭೆ, ಕಾನೂನುಬಾಹಿರ ಸಭೆ ಆರೋಪಗಳಲ್ಲಿ ಹರಿಯಾಣದ ಕರ್ನಲ್ ಕಾರಾಗೃಹದಲ್ಲಿರಿಸಿದ್ದರು.
ಟೂಲ್ಕಿಟ್ ಪ್ರಕರಣ: ದಿಶಾ ರವಿಗೆ ಕೊನೆಗೂ ಜಾಮೀನು ಮಂಜೂರು
ಸೋಮವಾರ ಕೌರ್ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಬುಧವಾರಕ್ಕೆ ವಿಚಾರಣೆ ಮುಂದೂಡಿತ್ತು. ಬುಧವಾರ ವಿಚಾರಣೆ ನಡೆಸಿದ ನ್ಯಾಯಾಲಯ ಫೆಬ್ರವರಿ 26ಕ್ಕೆ ಮತ್ತೊಮ್ಮೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದೆ.
ರೈತರ ಪ್ರತಿಭಟನೆಗೆ ವ್ಯಾಪಕ ಬೆಂಬಲ ಗಳಿಸಿದ ಕಾರಣಕ್ಕೆ ತಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಬಂಧನದಲ್ಲಿದ್ದ ನನಗೆ ಚರ್ಮ ನೀಲಿಗಟ್ಟುವಂತೆ ಥಳಿಸಿ ಹಿಂಸೆ ನೀಡಿದ್ದಾರೆ ಎಂದು ಜಾಮೀನು ಅರ್ಜಿಯಲ್ಲಿ ಆರೋಪಿಸಿದ್ದಾರೆ. ನನ್ನ ವೈದ್ಯಕೀಯ ಪರೀಕ್ಷೆ ಕೂಡ ಮಾಡದೇ ಕ್ರಿಮಿನಲ್ ದಂಡ ಸಂಹಿತೆ ಸೆಕ್ಷನ್ 54 ಉಲ್ಲಂಘಿಸಿದ್ದಾರೆ ಎಂದು 23 ವರ್ಷದ ನೊದೀಪ್ ಕೌರ್ ದೂರಿದ್ದಾರೆ.
ಮಜ್ದೂರ್ ಅಧಿಕಾರ್ ಸಂಘಟನೆ ಸದಸ್ಯೆ ನೊದೀಪ್ ಕೌರ್, ಕೃಷಿ ಕಾಯ್ದೆಗಳ ವಿರುದ್ಧ ಸೋನಿಪತ್ ಜಿಲ್ಲೆಯ ಕುಂಡ್ಲಿ ಎಂಬಲ್ಲಿ ಜನರನ್ನು ಪ್ರತಿಭಟನೆಗೆ ಸೇರಿಸಿದ್ದರು. ಸ್ಥಳೀಯ ಕಾರ್ಮಿಕರನ್ನೂ ಪ್ರತಿಭಟನೆಗೆ ಕರೆ ತಂದಿದ್ದರು. ಪ್ರತಿಭಟನೆ ಹತ್ತಿಕ್ಕಲು ತಮ್ಮನ್ನು ಬಂಧಿಸಲಾಗಿದೆ ಎಂದು ಕೌರ್ ಆರೋಪಿಸಿದ್ದರು.