ಗಾಯಕಿ ಸಪ್ನಾ ಚೌಧರಿ ವಿರುದ್ಧ ಬಿಜೆಪಿ ನಾಯಕರು ಸಿಟ್ಟಿಗೆದ್ದಿದ್ದೇಕೆ?
ಚಂದೀಗಢ, ಅಕ್ಟೋಬರ್ 20: ಇತ್ತೀಚೆಗೆ ಭಾರತೀಯ ಜನತಾ ಪಕ್ಷ ಸೇರಿದ್ದ ಜನಪ್ರಿಯ ಗಾಯಕಿ ಸಪ್ನಾ ಚೌಧರಿ ವಿರುದ್ಧ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಬಿಜೆಪಿ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿರುವ ಗೋಪಾಲ್ ಕಾಂಡ ಪರ ಸಪ್ನಾ ಪ್ರಚಾರ ನಡೆಸಿರುವುದೇ ಇದಕ್ಕೆ ಕಾರಣ. ಹರ್ಯಾಣದಲ್ಲಿ ಅಕ್ಟೋಬರ್ 21ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 24ರಂದು ಫಲಿತಾಂಶ ಹೊರ ಬರಲಿದೆ.
ಹರ್ಯಾಣದ ಸಿರ್ಸಾ ಕ್ಷೇತ್ರದ ಲೋಕಹಿತ್ ಪಕ್ಷದ ಅಭ್ಯರ್ಥಿ ಗೋಪಾಲ್ ಕಾಂಡಾ ಪರ ಸಪ್ನಾ ಪ್ರಚಾರ ನಡೆಸಿದ ಆರೋಪ ಹೊರೆಸಲಾಗಿದೆ. ಕಾಂಡಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ ಅವರ ಪರ ಪ್ರಚಾರ ನಡೆಸಿಲ್ಲ, ವಿಡಿಯೋ ಸಂದೇಶ ಕಳಿಸಿದ್ದಷ್ಟೇ ಎಂದು ಸಪ್ನಾ ಪರ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.
ಆದರೆ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಪಕ್ಷದ ಸದಸ್ಯೆಯಾಗಿ ಬಿಜೆಪಿ ವಿರೋಧಿ ಪರ ಪ್ರಚಾರ ಸಂದೇಶ ಕಳಿಸಿದ್ದಾರೆ. ಸಪ್ನಾ ವಿರುದ್ಧ ಪಕ್ಷ ವಿರೋಧಿ ಆರೋಪದ ಮೇಲೆ ಕ್ರಮ ಜರುಗಿಸಬೇಕೆಂದು ಕೋರಿದ್ದಾರೆ.
ಸಿರ್ಸಾದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರದೀಪ್ ರತುಸರಿಯಾ ಕಣದಲ್ಲಿದ್ದಾರೆ. ಪ್ರಧಾನಿ ಮೋದಿ ಅವರು ಶನಿವಾರದಂದು ಪ್ರದೀಪ್ ಪರ ಪ್ರಚಾರ ನಡೆಸಿದ್ದಾರೆ.
ಜುಲೈ ತಿಂಗಳಿನಲ್ಲಿ ಜವಹಾರ ಲಾಲ್ ನೆಹರೂ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಸೇರಿದ ಸಪ್ನಾ ಅವರನ್ನು ಪಕ್ಷದಕ್ಕೆ ಬಿಜೆಪಿ ಉಪಾಧ್ಯಕ್ಷ ಶಿವರಾಜ್ ಸಿಂಗ್ ಚೌಹಾಣ್ ಸ್ವಾಗತಿಸಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಹಾಗೂ ದೆಹಲಿ ಮುಖ್ಯಸ್ಥ ಮನೋಜ್ ತಿವಾರಿ ಕೂಡಾ ಅಂದು ಉಪಸ್ಥಿತರಿದ್ದರು.
ಪ್ರಚಾರ ಸಮಿತಿ ಸದಸ್ಯರ ಪೂರ್ವನುಮತಿ ಪಡೆದುಕೊಂಡು ಸಪ್ನಾ ಅವರು ಕಾಂಡಾ ಪರ ಪ್ರಚಾರ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.
ಬಿಗ್ ಬಾಸ್ ರಿಯಾಲಿಟಿ ಶೋ 11ರ ಸ್ಪರ್ಧಿಯಾಗಿದ್ದ ಸಪ್ನ ಅವರು ತಮ್ಮ ಹಾಡು, ನೃತ್ಯಗಳ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದವರು. 'ತೇರಿ ಅಖ್ಯಾ ಕಾ ಯೋ ಕಾಜಲ್' ಎಂಬ ಹರ್ಯಾನ್ವಿ ಭಾಷೆಯ ಹಾಡು ಅತ್ಯಂತ ಜನಪ್ರಿಯವಾಗಿದೆ.