ಹರಿಯಾಣ-ಪಂಜಾಬ್ ಗಡಿಯಲ್ಲಿ 3 ಗ್ರೆನೇಡ್ಗಳು ಪತ್ತೆ: ಜನರಲ್ಲಿ ಆತಂಕ
ಅಂಬಾಲ ಮಾರ್ಚ್ 21: ಹರಿಯಾಣ-ಪಂಜಾಬ್ ಅಂಬಾಲ ಗಡಿಯಲ್ಲಿ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಹಳ್ಳಿಯೊಂದರ ಪೊದೆಗಳ ಬಳಿ ಈ ಆಯುಧಗಳು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಸ್ಥಳೀಯ ಜನರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ 5 ಸದಸ್ಯರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ 3 ಗ್ರೆನೇಡ್ಗಳು ಮತ್ತು 1 ಕೆಜಿಗಿಂತ ಹೆಚ್ಚು ಐಇಡಿ ಇದ್ದದ್ದು ಕಂಡು ಬಂದಿದೆ. ಅವುಗಳನ್ನು ಬಾಂಬ್ ನಿಷ್ಕ್ರಿಯ ದಳ ನಾಶಪಡಿಸಿದೆ.
ಶನಿವಾರ ಸಂಜೆ ಕೂಲಿ ಕಾರ್ಮಿಕರೊಬ್ಬರು ಮಲವಿಸರ್ಜನೆಗೆ ಪೊದೆಯ ಬಳಿ ಹೋಗಿದ್ದರು. ಈ ವೇಳೆ ಅರೆ ಬರೆ ಮಣ್ಣಿನಲ್ಲಿ ಹೂತು ಹಾಕಿರುವ ಯಾವುದೋ ಒಂದು ವಸ್ತು ಕಂಡು ಬಂದಿದೆ. ಯಾರೂ ಓಡಾಡದ ಜಾಗದಲ್ಲಿ ಈ ವಸ್ತು ಕಂಡು ಅನುಮಾನ ಬಂದಿದೆ. ಜೊತೆಗೆ ಅವರು ಹಿಂದೆಂದು ಇಂತಹ ವಸ್ತುವನ್ನು ಕಂಡಿರಲಿಲ್ಲ. ಹೀಗಾಗಿ ತಮ್ಮ ಸ್ಥಳೀಯರಿಗೆ ಅವರು ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸುತ್ತಮುತ್ತಲಿನ ಜನ ಬಂದು ನೋಡಿದಾಗ ಇದು ಬಾಂಬ್ ಆಗಿರಬಹುದು ಎಂಬ ಅನುಮಾನ ಹೆಚ್ಚಾಗಿದೆ. ಕೆಲ ಗಂಟೆಗಳ ನಂತರ ಜನರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಅಂಬಾಲಾ ಎಸ್ಪಿ ಜಶ್ನ್ದೀಪ್ ಸಿಂಗ್ ರಾಂಧವಾ ತಿಳಿಸಿದ್ದಾರೆ. ಸ್ಫೋಟಕ ವಸ್ತು ಎಲ್ಲಿಂದ ಬಂತು ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಪಂಜಾಬ್ ಗಡಿಗೆ ಹೊಂದಿಕೊಂಡಿರುವ ಸದ್ದೋಪುರ ಗ್ರಾಮದ ಪೊದೆಗಳ ಬಳಿ ತಂಡ 1 ಕೆಜಿ 630 ಗ್ರಾಂ ಐಇಡಿ ಹೊಂದಿರುವ ಮೂರು ಹ್ಯಾಂಡ್ ಗ್ರೆನೇಡ್ಗಳು ಮತ್ತು ಉನ್ನತ ದರ್ಜೆಯ ಸ್ಫೋಟಕಗಳನ್ನು ಪತ್ತೆ ಮಾಡಿದೆ ಎಂದು ಅವರು ಹೇಳಿದರು.
ಪೊದೆಗಳಲ್ಲಿ ಪಾಲಿಥಿನ್ ಮತ್ತು ಪ್ಯಾಕೆಟ್ಗಳಲ್ಲಿ ಪ್ಯಾಕ್ ಮಾಡಲಾಗಿದ್ದ 3 ಹ್ಯಾಂಡ್ ಗ್ರೆನೇಡ್ ಮತ್ತು ನೀಲಿ ಬಣ್ಣದ ಸ್ಫೋಟಕಗಳು ಪತ್ತೆಯಾಗಿವೆ ಎಂದು ಕಾರ್ಮಿಕರು ಹೇಳಿಕೊಂಡಿದ್ದಾರೆ. ಅದೇನಿರಬಹುದು ಎಂದು ಮಣ್ಣಿನಿಂದ ಹೊರತೆಗೆಯಲಾಗಿದೆ ಎಂದು ಅವರು ಹೇಳಿದ್ದಾರೆ. ಕೊಂಚ ಮಣ್ಣು ಸರಿಸುತ್ತಿದ್ದಂತೆ ಅದು ಸಾಮಾನ್ಯವಾಧ ವಸ್ತುವಲ್ಲ ಎಂದು ಹಿರಿಯರಿಗೆ ಅನುಮಾನ ಬಂದಿದೆ. ನಂತರ ಪೊಲೀಸರು ಆಗಮಿಸಿದಾಗ ಎಲ್ಲರನ್ನೂ ಅಲ್ಲಿಂದ ದೂರ ಕಳುಹಿಸಲಾಗಿದೆ. ಇದರ ನಂತರ ಸ್ಥಳಕ್ಕೆ ಆಗಮಿಸಿದ 5 ಸದಸ್ಯರ ಬಾಂಬ್ ನಿಷ್ಕ್ರಿಯ ದಳ ಸ್ಫೋಟಕಗಳನ್ನು ಸ್ಫೋಟಿಸಿದೆ. ಆದರೆ ಈ ಬಗ್ಗೆ ತನಿಖೆ ನಡೆಯುತ್ತಿದೆ.