ನೆರೆರಾಜ್ಯದ ರೈತರಿಂದ ಬೆಳೆ ಖರೀದಿಸಲ್ಲ ಎಂದ CM ಮನೋಹರ್ ಲಾಲ್ ಖಟ್ಟರ್!
ಚಂಡೀಘರ್, ಸಪ್ಟೆಂಬರ್.29: ಹರಿಯಾಣ ಸರ್ಕಾರವು ರೈತರ ಬಗ್ಗೆ ಕಾಳಜಿಯನ್ನು ಹೊಂದಿದ್ದು, ಬೇರೆ ರಾಜ್ಯಗಳ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೀಡಿದ ಹೇಳಿಕೆ ಸಾಕಷ್ಟು ಸದ್ದು ಮಾಡುತ್ತಿದೆ.
ಕೇಂದ್ರ ಸರ್ಕಾರದ ಕೃಷಿ ಸಂಬಂಧಿತ ಮೂರು ಮಸೂದೆಗಳು ಕಾಯ್ದೆಯಾಗುವ ಮೊದಲೇ ಹರಿಯಾಣ ಸಿಎಂ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅನ್ಯ ರಾಜ್ಯಗಳಿಂದ ಬೆಳೆಗಳನ್ನು ಸಂಗ್ರಹಿಸುವುದನ್ನು ಬಿಟ್ಟು, ರಾಜ್ಯದಲ್ಲೇ ಬೆಳೆದ ರೈತರಿಂದ ಬೆಳೆ ಖರೀದಿಸಲಾಗುತ್ತದೆ ಎಂದು ಸಿಎಂ ಖಟ್ಟರ್ ಹೇಳಿದ್ದರು.
NDA ಮೈತ್ರಿಕೂಟದ ಬಗ್ಗೆ So 'SAD' ಎಂದ ಸುಖ್ಬೀರ್ ಬಾದಲ್!
ಕಳೆದ ಸಪ್ಟೆಂಬರ್.17ರಂದು ಮಾತನಾಡಿರುವ ವಿಡಿಯೋದಲ್ಲಿ ಸಿಎಂ ಮನೋಹರ್ ಲಾಲ್ ಖಟ್ಟರ್ ಹೀಗೆ ಹೇಳಿದ್ದಾರೆ. "ರಾಜ್ಯದಲ್ಲಿ ಬೆಳೆದ ಜೋಳ ಮತ್ತು ಮೆಕ್ಕೆಜೋಳದ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆಯನ್ನು ನೀಡಿ ಸರ್ಕಾರವೇ ಖರೀದಿಸುತ್ತದೆ. ಬೇರೆ ರಾಜ್ಯದ ರೈತರು ತಾವು ಬೆಳೆದ ಬೆಳೆಗಳನ್ನು ನಮ್ಮ ರಾಜ್ಯದಲ್ಲಿ ಮಾರಾಟ ಮಾಡುವುದರಿಂದ ಹೆಚ್ಚು ಲಾಭ ಪಡೆಯಬಹುದು. ಆದರೆ ನಾವು ನಮ್ಮ ರಾಜ್ಯದ ರೈತರ ಬಗ್ಗೆ ಹೆಚ್ಚು ಕಾಳಜಿಯನ್ನು ಹೊಂದಿದ್ದೇವೆ. ಅನ್ಯರಾಜ್ಯಗಳ ರೈತರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ" ಎಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದರು.
"ಕೃಷಿ ಕಾಯ್ದೆ ಜಾರಿಗೊಳಿಸುವಲ್ಲಿ ಕಾಂಗ್ರೆಸ್ ರಾಜಕಾರಣ"
ಕೇಂದ್ರ ಸರ್ಕಾರವು ದೇಶಾದ್ಯಂತ ಕೃಷಿ ಸಂಬಂಧಿತ ಮೂರು ಮಸೂದೆಗಳನ್ನು ಜಾರಿಗೊಳಿಸಲು ಮುಂದಾಗಿದ್ದರೆ ಕಾಂಗ್ರೆಸ್ ಈ ವಿಚಾರದಲ್ಲೂ ರಾಜಕಾರಣ ಮಾಡುತ್ತಿದೆ ಎಂದು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಆರೋಪಿಸಿದ್ದರು. ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಮೆಕ್ಕೆಜೋಳ ಮತ್ತು ಜೋಳ ಸೇರಿದಂತೆ ಮುಂತಾದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸಲು ಆಗುತ್ತಿಲ್ಲ. ಅದರ ಬದಲಿಗೆ ಆ ರಾಜ್ಯಗಳಲ್ಲಿ ರೈತರು ಬೆಳೆದ ಉತ್ಪನ್ನಗಳನ್ನು ಹರಿಯಾಣದಲ್ಲಿ ಮಾರಾಟ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಸಿಎಂ ಮನೋಹರ್ ಲಾಲ್ ಖಟ್ಟರ್ ದೂಷಿಸಿದ್ದಾರೆ.
"ಪಂಜಾಬ್, ರಾಜಸ್ಥಾನದಿಂದ ಬೆಳೆ ಖರೀದಿಸುವುದಿಲ್ಲ"
"ಕೃಷಿ ಸಂಬಂಧಿತ ಕಾಯ್ದೆ ವಿಚಾರದಲ್ಲಿ ರಾಜಕೀಯವನ್ನು ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ನನ್ನೊಂದು ಪ್ರಶ್ನೆಯಿದೆ. ನಿಮ್ಮದೇ ಸರ್ಕಾರವು ಅಸ್ತಿತ್ವದಲ್ಲಿರುವ ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಮೆಕ್ಕೆಜೋಳ ಮತ್ತು ಜೋಳವನ್ನು ರೈತರಿಂದ ಸರ್ಕಾರವೇ ಏಕೆ ಖರೀದಿಸಬಾರದು. ಅದನ್ನು ಬಿಟ್ಟು ಹರಿಯಾಣದಲ್ಲಿ ರೈತರು ಬೆಳೆ ಮಾರಾಟಕ್ಕೆ ಕಳುಹಿಸುವುದು ಏಕೆ. ಇನ್ನು ಮುಂದೆ ಹಾಗೆ ಆಗುವುದಿಲ್ಲ. ಬೇರೆ ರಾಜ್ಯಗಳಲ್ಲಿ ಬೆಳೆದ ಈ ಬೆಳೆಗಳನ್ನು ಹರಿಯಾಣ ಸರ್ಕಾರವು ಖರೀದಿಸುವುದಿಲ್ಲ" ಎಂದು ಮನೋಹರ್ ಲಾಲ್ ಖಟ್ಟರ್ ಹೇಳಿದ್ದರು.
ಗಡಿಯಲ್ಲಿ ಭತ್ತ ಮಾರಾಟಕ್ಕೆ ಬಂದ ರೈತರಿಗೆ ತಡೆ
ಕಳೆದ ಸೋಮವಾರ ರಾತ್ರಿ ಉತ್ತರ ಪ್ರದೇಶದಿಂದ ಹರಿಯಾಣಕ್ಕೆ ಭತ್ತ ಮಾರಾಟ ಮಾಡುವುದಕ್ಕಾಗಿ 50ಕ್ಕೂ ಹೆಚ್ಚು ರೈತರು ಬರುತ್ತಿದ್ದರು. ಹರಿಯಾಣದ ಗಡಿ ಜಿಲ್ಲೆ ಕರ್ನಲ್ ನಲ್ಲಿ ಆ ರೈತರನ್ನು ತಡೆ ಹಿಡಿಯಲಾಗಿತ್ತು. ಇಲ್ಲದಿದ್ದಲ್ಲಿ ಆ ರೈತರು ಹರಿಯಾಣದ ಸರ್ಕಾರಿ ಮಂಡಿಗಳಲ್ಲಿ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಮನೋಹರ್ ಲಾಲ್ ಖಟ್ಟರ್ ದೂಷಿಸಿದ್ದಾರೆ.
ರಾಷ್ಟ್ರಪತಿ ಅನುಮೋದನೆ ನೀಡಿದ ಕೃಷಿ ಕಾಯ್ದೆಗಳು
ಸಂಸತ್ ನಲ್ಲಿ ತೀವ್ರ ಸದ್ದು ಗದ್ದಲಕ್ಕೆ ಕಾರಣವಾದ ಕೃಷಿ ಸಂಬಂಧಿತ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾನುವಾರ ಅನುಮೋದನೆ ನೀಡಿದ್ದಾರೆ. ಇದರಿಂದ ಮೂರು ಮಸೂದೆಗಳು ಇದೀಗ ಕಾಯ್ದೆಗಳಾಗಿ ಬದಲಾಗಿವೆ. ಈ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ
2. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ
3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ