ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆ; ಇದು ಕೇವಲ ಆರಂಭ: ಅಮರಿಂದರ್ ಸಿಂಗ್
ಚಂಡೀಗಡ ಜೂನ್ 5: ಪಂಜಾಬ್ ಕಾಂಗ್ರೆಸ್ನ ಐವರು ನಾಯಕರು ಬಿಜೆಪಿ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, "ಇದು ಕೇವಲ ಆರಂಭ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಇನ್ನಷ್ಟು ಅಚ್ಚರಿಗಳು ಕಾದಿವೆ,'' ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್ನ ಮಾಜಿ ಸಚಿವರಾದ ರಾಜ್ ಕುಮಾರ್ ವರ್ಕಾ, ಬಲ್ಬೀರ್ ಸಿಂಗ್ ಸಿಧು, ಗುರ್ಪ್ರೀತ್ ಸಿಂಗ್ ಕಂಗಾರ್, ಸುಂದರ್ ಶಾಮ್ ಅರೋರಾ ಹಾಗೂ ಮಾಜಿ ಶಾಸಕ ಕೇವಲ್ ಸಿಂಗ್ ಧಿಲ್ಲೋನ್ ಶನಿವಾರ ಕೇಸರಿ ಪಡೆಗೆ ಸೇರ್ಪಡೆಯಾಗಿದ್ದಾರೆ.
"ಬಿಜೆಪಿಯನ್ನು ಸೇರ್ಪಡೆಯಾಗುವ ಮೂಲಕ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇರಿಸಿದ ಬಲ್ಬೀರ್ ಸಿಂಗ್ ಸಿಧು, ಗುರ್ಪ್ರೀತ್ ಸಿಂಗ್ ಕಂಗಾರ್, ಡಾ. ರಾಜ್ ಕುಮಾರ್ ವರ್ಕಾ, ಸುಂದರ್ ಶಾಮ್ ಅರೋರಾ ಮತ್ತು ಕೇವಲ್ ಸಿಂಗ್ ಧಿಲ್ಲೋನ್ ಅವರಿಗೆ ನನ್ನ ಶುಭ ಹಾರೈಕೆಗಳು,'' ಎಂದು ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಅಮರಿಂದರ್ ಸಿಂಗ್ ಅವರು ದಶಕಗಳ ಕಾಲ ಕಾಂಗ್ರೆಸ್ ನಲ್ಲಿದ್ದರು. ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
"ಇದು ಕೇವಲ ಆರಂಭ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಇನ್ನಷ್ಟು ಅಚ್ಚರಿಗಳು ಕಾದಿವೆ. ಕಾಂಗ್ರೆಸ್ನ ಮತ್ತಷ್ಟು ನಾಯಕರು ಪಕ್ಷ ತೊರೆಯುವುದು ಖಚಿತ,'' ಎಂದು ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಏಳು ಮಂದಿ ಸೇರ್ಪಡೆ ಬಿಜೆಪಿಗೆ ಸೇರ್ಪಡೆ
ಕೇಂದ್ರ ಗೃಹ ಅಮಿತ್ ಶಾ ಸಮ್ಮುಖದಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಈ ಐವರು ಕಾಂಗ್ರೆಸ್ ನಾಯಕರೊಂದಿಗೆ ಶಿರೋಮಣಿ ಅಕಾಲಿ ದಳದ ಮಾಜಿ ಶಾಸಕರಾದ ಸ್ವರೂಪ್ ಚಂದ್ ಸಿಂಗ್ಲಾ ಮತ್ತು ಮೊಹಿಂದರ್ ಕೌರ್ ಜೋಶ್ ಕೂಡ ಕಮಲ ಪಾಳಯ ಸೇರಿದರು. ಕೆಲವು ದಿನಗಳ ಹಿಂದಷ್ಟೇ, ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಸುನಿಲ್ ಜಖಾರ್ ಬಿಜೆಪಿ ಸೇರ್ಪಡೆಯಾದರು.
ಪಂಜಾಬ್ ಸರಕಾರದಲ್ಲಿ ಮಾಜಿ ಸಚಿವರು
ರಾಮಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ಗುರ್ಪ್ರೀತ್ ಕಂಗಾರ್ ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದರು. ಮೊಹಾಲಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ಬಲ್ಬೀರ್ ಸಿಂಗ್ ಸಿಧು ಆರೋಗ್ಯ ಸಚಿವರಾಗಿದ್ದರು. ಮಝಾ ಪ್ರದೇಶದಿಂದ ಮೂರು ಬಾರಿ ಶಾಸಕರಾಗಿದ್ದ ಪ್ರಮುಖ ದಲಿತ ನಾಯಕ ರಾಜ್ ಕುಮಾರ್ ವರ್ಕಾ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಹಾಗೂ ಅಲ್ಪಸಂಖ್ಯಾತ ಸಚಿವರಾಗಿದ್ದರು. ಹೋಶಿಯಾರ್ ಪುರ ಕ್ಷೇತ್ರದ ಮಾಜಿ ಶಾಸಕ ಸುಂದರ್ ಶಾಮ್ ಅರೋರಾ ಅವರು ಚರಣ್ಜಿತ್ ಸಿಂಗ್ ಚನ್ನಿ ಸರಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದರು. ಈ ನಾಲ್ವರು 2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು.
ಭಾರಿ ಬಹುಮತದೊಂದಿಗೆ ಆಪ್ ಅಧಿಕಾರಕ್ಕೆ
ಇತ್ತೀಚಿಗೆ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತು. ಭಾರಿ ಬಹುಮತದೊಂದಿಗೆ ಆಮ್ ಆದ್ಮಿ ಪಕ್ಷ ಮೊದಲ ಬಾರಿಗೆ ಪಂಜಾಬ್ ನ ಚುಕ್ಕಾಣಿ ಹಿಡಿಯಿತು. ಪಂಜಾಬ್ ವಿಧಾನಸಭೆ ಚುನಾವಣೆಗೂ ಕೆಲವು ತಿಂಗಳ ಮುನ್ನ ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು. ಇದರ ಬೆನ್ನಲ್ಲೇ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದರು. ನಂತರ ತಮ್ಮದೇ ಪಕ್ಷ ಸ್ಥಾಪಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಜತೆ ಮೈತ್ರಿಯನ್ನು ಕೂಡ ಮಾಡಿಕೊಂಡಿದ್ದರು. ಆದರೆ, ಆಪ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಿತು.
Recommended Video
ಸೋಲಿಗೆ ಗಾಂಧಿ ಕುಟಂಬವೇ ನೇರ ಹೊಣೆ
'ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಸೋಲಿಗೆ ಗಾಂಧಿ ಕುಟಂಬವೇ ನೇರ ಹೊಣೆ' ಎಂದು ಅಮರಿಂದರ್ ಸಿಂಗ್ ಟೀಕಿಸಿದ್ದರು. ನಂತರ ಅವರು ಕೇಸರಿ ಪಡೆ ಸೇರಿದರು. ಇದೀಗ ಪಂಜಾಬ್ ನಲ್ಲಿ ಮತ್ತೇ ಪಕ್ಷಂತರ ಪರ್ವ ಆರಂಭಗೊಂಡಿದ್ದು, ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.
(ಒನ್ಇಂಡಿಯಾ ಸುದ್ದಿ)