ಪಂಜಾಬ್ ತಂಟೆಗೆ ಬರಬೇಡಿ: ಅರವಿಂದ್ ಕೇಜ್ರಿವಾಲ್ಗೆ ಅಮರಿಂದರ್ ಸಿಂಗ್ ಎಚ್ಚರಿಕೆ
ಚಂಡೀಗಡ, ಸೆಪ್ಟೆಂಬರ್ 3: ಪಂಜಾಬ್ ತಂಟೆಗೆ ಬರಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಕೊರೊನಾ ವೈರಸ್ ಸೋಂಕಿನ ಸಂಕಷ್ಟದ ಸಂದರ್ಭವನ್ನು ಪಂಜಾಬ್ ಜನತೆಯನ್ನು ಪ್ರಚೋದಿಸಲು ಬಳಸಿಕೊಳ್ಳದಂತೆ ದೂರವಿರಲು ಸೂಚನೆ ನೀಡಿದ್ದಾರೆ.
ಕೊರೊನಾ ವೈರಸ್ ಸಂಕಷ್ಟದ ನಡುವೆ ಹೋರಾಟ ನಡೆಸುತ್ತಿರುವಾಗಲೇ ಗಡಿ ರಾಜ್ಯದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಭಾರತ ವಿರೋಧ ಪಡೆಗಳ ಮುಷ್ಟಿಯೊಳಗೆ ಬೀಳುತ್ತಿದ್ದೀರಿ ಎಂದು ಕೇಜ್ರಿವಾಲ್ ಅವರನ್ನು ಅಮರಿಂದರ್ ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ 3,000 ಕೋಟಿ ಪರಿಹಾರ ಕೋರಿದ ಪಂಜಾಬ್ ಸಿಎಂ
ಪಂಜಾಬ್ಗೆ ಸಂಬಂಧಿಸಿದಂತೆ ಇತ್ತೀಚೆಗೆ ಪ್ರಕಟಣೆಯೊಂದನ್ನು ಹೊರಡಿಸಿದ್ದಕ್ಕಾಗಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಿಡಿಕಾರಿರುವ ಕ್ಯಾಪ್ಟರ್ ಅಮರಿಂದರ್ ಸಿಂಗ್, ಪಂಜಾಬ್ನ ಜನತೆಯ ದಿಕ್ಕುತಪ್ಪಿಸಲು ನಡೆಯುತ್ತಿರುವ ಬೃಹತ್ ಸಂಚಿನಲ್ಲಿ ಆಮ್ ಆದ್ಮಿ ಪಾರ್ಟಿಯ ಕೈವಾಡ ಏನಿದೆ ಎಂದು ಪ್ರಶ್ನಿಸಿದ್ದಾರೆ.
ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರ ಆಕ್ಸಿಜನ್ ಮಟ್ಟವನ್ನು ಪರಿಶೀಲನೆ ಮಾಡುವಂತೆ ಪಂಜಾಬ್ನ ಎಎಪಿ ಕಾರ್ಯಕರ್ತರಿಗೆ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇತ್ತೀಚೆಗೆ ಸಲಹೆ ನೀಡಿದ್ದರು. ಇದರ ಬಳಿಕ ಪಂಜಾಬ್ನಲ್ಲಿ ನಕಲಿ ಸುದ್ದಿಗಳು ಮತ್ತು ಪ್ರಚೋದನಾಕಾರಿ ವಿಡಿಯೋಗಳು ವ್ಯಾಪಕವಾಗಿ ಹರಿದಾಡುತ್ತಿವೆ.
ಎಎಪಿ ಕಾರ್ಯಕರ್ತನ ಬಂಧನ
ಕೋವಿಡ್ 19ಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ನಕಲಿ ವಿಡಿಯೋವೊಂದರ ಪ್ರಕರಣದಲ್ಲಿ ಎಎಪಿ ಕಾರ್ಯಕರ್ತನೊಬ್ಬನನ್ನು ಪಂಜಾಬ್ನಲ್ಲಿ ಬಂಧಿಸಲಾಗಿತ್ತು. ಆತನ ಸಂಪರ್ಕಗಳ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಪೊಲೀಸರಿಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೂಚನೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ಸೃಷ್ಟಿಯಾದ ವಿಡಿಯೋ
ಈ ವಿಡಿಯೋಗಳಲ್ಲಿ ಒಂದು ವಿಡಿಯೋ ವಿದೇಶದಲ್ಲಿ ಸೃಷ್ಟಿಯಾಗಿರುವುದು ಕಂಡುಬಂದಿದೆ. ಬಹುಶಃ ಪಾಕಿಸ್ತಾನದಲ್ಲಿ ಇದನ್ನು ಸೃಷ್ಟಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಈ ವಿಡಿಯೋವನ್ನು ಆಮ್ ಆದ್ಮಿ ಪಕ್ಷದ ಕಾರ್ಯಕರ್ತನೊಬ್ಬ ಪಂಜಾಬ್ನಲ್ಲಿ ವೈರಲ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಹರಿಯಾಣ ಜತೆ ನೀರು ಹಂಚಿಕೆಯಾದರೆ ಪಂಜಾಬ್ ಸುಟ್ಟು ಹೋಗುತ್ತದೆ: ಅಮರಿಂದರ್ ಎಚ್ಚರಿಕೆ
ಅಂಗಾಂಗ ಕಳವಿನ ಆರೋಪ
ಬಂಧಿತ ಎಎಪಿ ಕಾರ್ಯಕರ್ತನನ್ನು ಫೆರೋಜಪುರ್ ಜಿಲ್ಲೆಯ ಮಿಶ್ರಿವಾಲಾ ಎಂಬ ಗ್ರಾಮದ ನಿವಾಸಿ ಅಮ್ರಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಮೃತದೇಹವೊಂದನ್ನು ತೋರಿಸುವ ಮೂಲಕ ನಕಲಿ ವಿಡಿಯೋವನ್ನು ಹರಡುವ ಆತನ ಹಿಂದಿನ ಉದ್ದೇಶಗಳೇನು ಎಂಬುದನ್ನು ತಿಳಿಯಲು ವಿಚಾರಣೆಗೆ ಒಳಪಡಿಸಲಾಗಿದೆ. ಕೋವಿಡ್-19ರಿಂದ ಮೃತಪಟ್ಟ ರೋಗಿಗಳ ಅಂಗಾಂಗಗಳನ್ನು ಪಂಜಾಬ್ ಆರೋಗ್ಯ ಇಲಾಖೆಯು ಕದಿಯುತ್ತಿದೆ ಎಂದು ವಿಡಿಯೋದಲ್ಲಿ ಪ್ರಚಾರ ಮಾಡಲಾಗಿದೆ.
ದೇಶವಿರೋಧಿ ಗುಂಪುಗಳ ನೆರವು
ಈ ವಿಡಿಯೋ ಮೂಲಕ ಪಂಜಾಬ್ನ ಜನತೆಯನ್ನು ಪ್ರಚೋದಿಸಲು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಗೆ ಸಹಕರಿಸದಂತೆ ಸೂಚಿಸಲು ಎಎಪಿ ಕಾರ್ಯಕರ್ತ ಪ್ರಯತ್ನಿಸುತ್ತಿದ್ದ. ಪಂಜಾಬ್ನ ಶಾಂತಿಯನ್ನು ಕದಡಲು ಭಾರಿ ಪ್ರಮಾಣದ ಸಂಚು ನಡೆದಿದ್ದು, ಅದಕ್ಕೆ ದೇಶವಿರೋಧಿ ಗುಂಪುಗಳ ಸಹಾಯವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಎಎಪಿ ವಿರುದ್ಧ ಅಮರಿಂದರ್ ಸಿಂಗ್ ಕಿಡಿಕಾರಿದ್ದಾರೆ.
ಆಕ್ಸಿಜನ್ ಪರೀಕ್ಷಿಸಿ ಎಂದಿದ್ದ ಕೇಜ್ರಿವಾಲ್
ಎಎಪಿಯ ಕಾರ್ಯಕರ್ತರು ಹಳ್ಳಿ ಹಳ್ಳಿಗೆ ಹೋಗಿ ಆಕ್ಸಿಮೀಟರ್ ಮೂಲಕ ಅಲ್ಲಿನ ಜನತೆಯ ಆಕ್ಸಿಜನ್ ಮಟ್ಟವನ್ನು ಪರೀಕ್ಷಿಸುವಂತೆ ಅರವಿಂದ್ ಕೇಜ್ರಿವಾಲ್ ಸೂಚಿಸಿದ್ದರು. ಕೊರೊನಾ ವೈರಸ್ ಸಂಕಷ್ಟದಲ್ಲಿ ಪಂಜಾಬ್ ಸರ್ಕಾರ ಜನರ ಜೀವ ಉಳಿಸಲು ನಡೆಸುತ್ತಿರುವ ಪ್ರಯತ್ನಗಳ ಮಧ್ಯೆ ಕೇಜ್ರಿವಾಲ್ ಅವರ ಈ ಸೂಚನೆ ಅನೇಕ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದರ ಜತೆಯಲ್ಲಿಯೇ ನಕಲಿ ವಿಡಿಯೋಗಳು ಹರಿದಾಡುತ್ತಿರುವುದರ ಹಿಂದೆ ಎಎಪಿ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ.
ಭಾರತ ವಿರೋಧಿ ಶಕ್ತಿಗಳು
ನಮಗೆ ನಿಮ್ಮ ಆಕ್ಸಿಮೀಟರ್ಗಳ ಅಗತ್ಯವಿಲ್ಲ. ಪಂಜಾಬ್ನಲ್ಲಿ ನಿಮ್ಮ ಕಾರ್ಯಕರ್ತರನ್ನು ನೀವು ಹತೋಟಿಯಲ್ಲಿಡಿ ಸಾಕು. ನಮ್ಮ ಜನರು ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಪಡದಂತೆ ಮತ್ತು ಕೋವಿಡ್ ಚಿಕಿತ್ಸೆಗೆ ಒಳಗಾಗದಂತೆ ಅವರು ತಡೆಯುತ್ತಿದ್ದಾರೆ. ದೆಹಲಿ ಮುಖ್ಯಮಂತ್ರಿಯ ಹೇಳಿಕೆಯು ಪಂಜಾಬ್ನ ಭದ್ರತೆ ಮತ್ತು ಸಮಗ್ರತೆಗೆ ತೀವ್ರ ಹಾನಿಯುಂಟುಮಾಡುತ್ತಿದೆ. ಗಡಿಯಾಚೆಗಿನ ಭಾರತ ವಿರೋಧಿ ಶಕ್ತಿಗಳೊಂದಿಗೆ ಸೇರಿ ಅವರ ಕೈವಶವಾಗಬೇಡಿ ಎಂದು ಕೇಜ್ರಿವಾಲ್ಗೆ ಎಚ್ಚರಿಕೆ ನೀಡಿದ್ದಾರೆ.