ಹೊಸ ಪಕ್ಷ ರಚನೆಗೆ ಕ್ಯಾಪ್ಟನ್ ಸಜ್ಜು, ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಸಾಧ್ಯತೆ
ನವದೆಹಲಿ, ಅಕ್ಟೋಬರ್ 19: ಪಂಜಾಬ್ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೊಸ ಪಕ್ಷವನ್ನು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ರೈತರ ಸಮಸ್ಯೆ ಬಗೆಹರಿದರೆ, ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಪಂಜಾಬ್ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು ಉಂಟಾಗಿ ಪಂಜಾಬ್ನಲ್ಲಿ ಮುಖ್ಯಮಂತ್ರಿ ಆಗಿದ್ದ ಕಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧ ಶಾಸಕರುಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಆಗಿದ್ದು, ಅವರು ಬಿಜೆಪಿಗೆ ಸೇರಲಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿತ್ತು.
"ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕರಣಾಜನಕ ಪರಿಸ್ಥಿತಿ": ಕ್ಯಾಪ್ಟನ್ ಸಿಂಗ್ ವಾಗ್ಬಾಣ
ಆದರೆ ಇದು ಬರೀ ರೈತರಿಗೆ ಸಂಬಂಧಿಸಿ ವಿಚಾರದಲ್ಲಿ ಮಾತುಕತೆ ನಡೆಸಲು ಆದ ಭೇಟಿ ಎಂದು ಹೇಳಿ ಅಮರೀಂದರ್ ಸಿಂಗ್ ಊಹಾಪೋಹಕ್ಕೆ ತೆರೆ ಎಳೆದಿದ್ದರು. "ನಾನು ಕಾಂಗ್ರೆಸ್ಗೆ ರಾಜೀನಾಮೆ ನೀಡಿಲ್ಲ ಆದರೆ ನಾನು ರಾಜೀನಾಮೆ ನೀಡುತ್ತೇನೆ. ನಾನು ವಿಭಜಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಯಲ್ಲ. ಆದರೆ ನಾನು ಬಿಜೆಪಿ ಸೇರುವುದಿಲ್ಲ" ಎಂದು ಸ್ವತಃ ಕ್ಯಾಪ್ಟನ್ ಅಮರೀಂದರ್ ಸಿಂಗ್ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿಯಾಗಿದ್ದ ಅಮರೀಂದರ್ ಸಿಂಗ್ ಹೊಸ ಪಕ್ಷವನ್ನು ಸ್ಥಾಪನೆ ಬಗ್ಗೆ ಮಾಧ್ಯಮ ಸಲಹೆಗಾರ ರವೀನ್ ತುಕ್ರಲ್ ಸರಣಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. "ಪಂಜಾಬ್ನ ಭವಿಷ್ಯಕ್ಕಾಗಿ ನಡೆಯುತ್ತಿರುವ ಹೋರಾಟವು ಈಗಲೂ ಮುಂದುವರಿದಿದೆ. ಒಂದು ವರ್ಷದಿಂದ ತಮ್ಮ ಉಳಿವಿಗಾಗಿ ಹೋರಾಡುತ್ತಿರುವ ನಮ್ಮ ರೈತರು ಸೇರಿದಂತೆ ಪಂಜಾಬ್ ಮತ್ತು ಅದರ ಜನರ ಹಿತಾಸಕ್ತಿಗಾಗಿ ನನ್ನದೇ ರಾಜಕೀಯ ಪಕ್ಷವನ್ನು ಆರಂಭಿಸುವ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡುತ್ತೇನೆ" ಎಂದು ಅಮರೀಂದರ್ ಹೇಳಿಕೆಯನ್ನು ಮಾಧ್ಯಮ ಸಲಹೆಗಾರ ರವೀನ್ ತುಕ್ರಲ್ ಟ್ವೀಟ್ ಮಾಡಿದ್ದಾರೆ.
"ರೈತರ ಪ್ರತಿಭಟನೆಯು ರೈತರ ಪರವಾದ ನಿರ್ಧಾರದ ಬಳಿಕ ಅಂತ್ಯವಾದರೆ ಮುಂದಿನ 2022 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು. ಹಾಗೆಯೇ ಅದೇ ರೀತಿಯ ಸಿದ್ಧಾಂತವನ್ನು ಹೊಂದಿರುವ ಅಕಾಳಿದಳದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದೆ ತೀರ್ಮಾನಿಸಲಾಗುತ್ತದೆ. ವಿಶೇಷವಾಗಿ ದಿಂಡಾಸ ಮತ್ತು ಬ್ರಹ್ಮಪುರ ಬಣಗಳೊಂದಿಗೆ," ಎಂದು ಇನ್ನೊಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ಟ್ವಿಟರ್ ಬಯೋದಲ್ಲಿ ಕಾಂಗ್ರೆಸ್ ಮಾಯ!
ಇನ್ನು ಮೂರನೇ ಟ್ವೀಟ್ನಲ್ಲಿ, "ನನ್ನ ರಾಜ್ಯ ಹಾಗೂ ನನ್ನ ಜನರ ಭವಿಷ್ಯವನ್ನು ಸುರಕ್ಷತೆಗೊಳಿಸುವವರೆಗೂ ನಾನು ವಿರಾಮ ಪಡೆಯಲಾರೆ. ಪಂಜಾಬ್ಗೆ ರಾಜಕೀಯ ಸ್ಥಿರತೆಯ ಅಗತ್ಯವಿದೆ. ಹಾಗೆಯೇ ಆಂತರಿಕ ಹಾಗೂ ಬಾಹ್ಯ ಬೆದರಿಕೆಯಿಂದ ಸುರಕ್ಷತೆ ಅಗತ್ಯವಿದೆ. ಇಂದು ಅಪಾಯದಲ್ಲಿರುವ ಜನರ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತೇನೆ ಎಂದು ನಾನು ಈ ಮೂಲಕ ಜನರಿಗೆ ಭರವಸೆಯನ್ನು ನೀಡುತ್ತೇನೆ," ಎಂಬ ಅಮರೀಂದರ್ ಸಿಂಗ್ ಹೇಳಿಕೆಯನ್ನು ಮಾಧ್ಯಮ ಸಲಹೆಗಾರ ರವೀನ್ ತುಕ್ರಲ್ ಟ್ವೀಟ್ ಮಾಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಮರೀಂದರ್ ಸಿಂಗ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹಾಗೆಯೇ ಅಮರೀಂದರ್ ಸಿಂಗ್ರ ಟ್ವಿಟ್ಟರ್ ಬಯೋದಿಂದ ಕಾಂಗ್ರೆಸ್ ಮಾಯವಾಗಿತ್ತು. "ಸೇನಾ ಅನುಭವಿ. ಪಂಜಾಬ್ನ ಮಾಜಿ ಮುಖ್ಯಮಂತ್ರಿ. ರಾಜ್ಯಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸುವುದು," ಎಂದು ಮಾತ್ರ ಅಮರೀಂದರ್ ಸಿಂಗ್ರ ಟ್ವಿಟ್ಟರ್ ಬಯೋದಲ್ಲಿ ಬರೆದುಕೊಳ್ಳಲಾಗಿದೆ.
"ಕಳೆದ ಎರಡು ತಿಂಗಳಲ್ಲಿ ಕಾಂಗ್ರೆಸ್ ನಾಯಕತ್ವದಿಂದ ನಾನು ಮೂರು ಬಾರಿ ಅವಮಾನಕ್ಕೊಳಗಾಗಿದ್ದೇನೆ. ಕಾಂಗ್ರೆಸ್ ನಾಯಕತ್ವ ಎರಡು ಬಾರಿ ಶಾಸಕರನ್ನು ದೆಹಲಿಗೆ ಕರೆಸಿಕೊಂಡಿದೆ ಹಾಗೂ ಬಳಿಕ ಶಾಸಕಾಂಗ ಸಭೆಯನ್ನು ಕರೆದಿದೆ. ಕಾಂಗ್ರೆಸ್ ನಾಯಕತ್ವಕ್ಕೆ ನನ್ನ ಮೇಲೆ ವಿಶ್ವಾಸವಿಲ್ಲ, ಈಗ ಕಾಂಗ್ರೆಸ್ ನಾಯಕತ್ವ ವಿಶ್ವಾಸವಿರುವ ಯಾರನ್ನಾದರೂ ನೇಮಿಸಿಕೊಳ್ಳಲಿ," ಎಂದು ಅಮರೀಂದರ್ ಸಿಂಗ್ ಈ ಹಿಂದೆ ಖಡಕ್ ಆಗಿ ಹೇಳಿದ್ದರು. "ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕರಣಾಜನಕ ಪರಿಸ್ಥಿತಿ ಇದೆ," ಎಂದು ಕೂಡಾ ಉಲ್ಲೇಖಿಸಿದ್ದರು.