ಸಿಧು ಅಧಿಕಾರ ಸ್ವೀಕಾರಕ್ಕೂ ಮುನ್ನ ಪಕ್ಷದ ನಾಯಕರನ್ನು ಟೀ ಪಾರ್ಟಿಗೆ ಕರೆದ ಅಮರಿಂದರ್ ಸಿಂಗ್
ಚಂಡೀಗಢ, ಜು.22: ಪಂಜಾಬ್ ರಾಜ್ಯ ಕಾಂಗ್ರೆಸ್ನ ಅಧಿಕಾರವನ್ನು ನವಜೋತ್ ಸಿಂಗ್ ಸಿಧು ಹಾಗೂ ನಾಲ್ವರು ಕಾರ್ಯಕಾರಿ ಅಧ್ಯಕ್ಷರು ನಾಳೆ ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬೆಂಬಲಿಗರು ಭಾಗವಹಿಸಲಿದ್ದಾರೆ. ಸಿಂಗ್ ನಾಳೆ ಪಂಜಾಬ್ ಭವನದಲ್ಲಿ ಪಕ್ಷದ ನಾಯಕರನ್ನು ಚಹಾಕ್ಕೆ ಆಹ್ವಾನಿಸಿದ್ದಾರೆ. ನಂತರ ಕಾರ್ಯಕ್ರಮಕ್ಕಾಗಿ ಪಕ್ಷದ ಕಚೇರಿಗೆ ತೆರಳಲಿದ್ದಾರೆ.
ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿ ನವಜೋತ್ ಸಿಂಗ್ ಸಿಧು ಪತ್ರ ಬರೆದ ಬೆನ್ನಲ್ಲೇ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಈ ಟೀ ಪಾರ್ಟಿ ಕರೆದಿದ್ದಾರೆ. ಸೋನಿಯಾ ಗಾಂಧಿಯವರ ನೇಮಕಾತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಿರುವ ಪತ್ರದಲ್ಲಿ ಸಿಧು, "ನನಗೆ ಯಾವುದೇ ವೈಯಕ್ತಿಕ ಅಜೆಂಡಾ ಇಲ್ಲ. ಜನರ ಪರವಾದ ಅಜೆಂಡಾ ಮಾತ್ರ ಇದೆ. ಹೀಗಾಗಿ, ನಮ್ಮ ಪಂಜಾಬ್ ಕಾಂಗ್ರೆಸ್ ಕುಟುಂಬದ ಹಿರಿಯರಾದ ನೀವು ದಯವಿಟ್ಟು ಬಂದು ನಮ್ಮ ಹೊಸ ತಂಡಕ್ಕೆ ಆಶೀರ್ವದಿಸಬೇಕೆಂದು ನಾನು ವಿನಂತಿಸುತ್ತೇನೆ," ಎಂದು ಪತ್ರದಲ್ಲಿ ಬರೆದಿದ್ದಾರೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಜುಲೈ 23ಕ್ಕೆ ಸಿಧು ಅಧಿಕಾರ ಸ್ವೀಕಾರ
ಈ ಬಗ್ಗೆ ಬಳಿಕ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್, "ಪಂಜಾಬ್ ಸಿಎಂ ಪಂಜಾಬ್ ಭವನದಲ್ಲಿ ಎಲ್ಲಾ ಶಾಸಕರು, ಸಂಸದರು ಮತ್ತು ಪಕ್ಷದ ಹಿರಿಯ ಕಾರ್ಯಕರ್ತರನ್ನು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಚಹಾಕ್ಕಾಗಿ ಆಹ್ವಾನಿಸಿದ್ದಾರೆ. ನಂತರ ಅವರೆಲ್ಲರೂ ಹೊಸ ಕಾಂಗ್ರೆಸ್ ತಂಡದ ಉದ್ಘಾಟನೆಗೆ ಒಟ್ಟಾಗಿ ಪಂಜಾಬ್ ಕಾಂಗ್ರೆಸ್ ಭವನಕ್ಕೆ ಹೋಗುತ್ತಾರೆ," ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಈಗಾಗಲೇ ಹೊಸ ತಂಡದ ಒಂದು ಭಾಗವನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಸಿಂಗ್ರನ್ನು ಭೇಟಿಯಾದ ತಂಡದಲ್ಲಿ ಸಿಧು ಇರಲಿಲ್ಲ ಎಂದು ವರದಿ ತಿಳಿಸಿದೆ. ಪಕ್ಷದೊಳಗೆ ನಾಯಕತ್ವ ವಿಚಾರದಲ್ಲಿ ಬಿಕ್ಕಟ್ಟು ಕಾಣಿಸಿಕೊಂಡ ಬಳಿಕ ಇವರಿಬ್ಬರದ್ದು ಮೊದಲ ಭೇಟಿಯಾಗಿದೆ. ಸಿಧು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಮುಖ್ಯಮಂಂತ್ರಿ ಆಗ್ರಹಿಸಿದ್ದರು. ಕ್ಷಮೆಯಾಚಿಸುವವರೆಗೂ ಭೇಟಿಯಾಗುವುದಿಲ್ಲ ಎಂದು ಕೂಡಾ ಹೇಳಿದ್ದರು.ಆದರೆ ಇವರಿಬ್ಬರ ನಡುವೆ ಸ್ವಲ್ಪ ಹೊಂದಾಣಿಕೆ ನಡೆದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮರುಚುನಾವಣೆ ತೊಂದರೆ ಉಂಟಾಗುವ ಹಿನ್ನೆಲೆ ಪಕ್ಷದ ವಿರುದ್ದ ಬಂಡಾಯವೆದ್ದಿದ್ದ ಸಿಧುವನ್ನು ಪಕ್ಷದ ನಾಯಕನನ್ನಾಗಿ ಮಾಡಲಾಗಿದೆ. ಆದರೆ ಇದಕ್ಕೆ ಹಿರಿಯ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ ತಿರಸ್ಕರಿಸಲ್ಪಟ್ಟು ಇಲ್ಲಿಗೆ ಬಂದವರಿಗೆ ಹಾಗೆ ನಾಯಕತ್ವ ನೀಡುವುದು ಸರಿಯಲ್ಲ ಎಂದು ಕೆಲ ನಾಯಕರು ಹೇಳಿದ್ದರು.
'ಪಯಣ ಈಗ ಆರಂಭ': ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾದ ಬಳಿಕ ಗಾಂಧಿ ಕುಟುಂಬಕ್ಕೆ ಸಿಧು ಧನ್ಯವಾದ
ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಧು ನಡುವಿನ ಜಗಳವು 2017 ರ ರಾಜ್ಯ ಚುನಾವಣೆಯಿಂದಲೂ ನಡೆಯುತ್ತಿದೆ. ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್ಗೆ ಸೇರ್ಪಡೆಯಾದ ಬಳಿಕ ಸಿಧುಗೆ ತನ್ನನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಆಶಯವಿತ್ತು. ಆದರೆ ಇದನ್ನು ಸಿಂಗ್ ತಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಸ್ತುತ ಇಬ್ಬರ ನಡುವೆ ವೈಮನಸ್ಸು ಇದೆ. ಆದರೆ ಇಬ್ಬರು ನಾಳೆ ಭೇಟಿಯಾಗಲಿದ್ದಾರೆ ಎನ್ನಲಾಗಿದೆ.
Recommended Video
(ಒನ್ಇಂಡಿಯಾ ಸುದ್ದಿ)