ಕ್ಯಾಪ್ಟನ್ ಅಮರೀಂದರ್ ಸಿಂಗ್ ಟ್ವಿಟರ್ ಬಯೋದಲ್ಲಿ ಕಾಂಗ್ರೆಸ್ ಮಾಯ!
ಚಂಡೀಘರ್, ಸೆಪ್ಟೆಂಬರ್ 30: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಒಂದೇ ವಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆಯುವುದಕ್ಕೆ ಮಾಜಿ ಸಿಎಂ ಅಮರೀಂದರ್ ಸಿಂಗ್ ಬಹುಪಾಲು ಸಿದ್ಧರಾಗಿ ನಿಂತಿದ್ದಾರೆ. ಗುರುವಾರ ಸಂಜೆ ವೇಳೆಗೆ ಕಾಂಗ್ರೆಸ್ ತೊರೆಯುವ ಬಗ್ಗೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ.
ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ಸಲ್ಲಿಸಿರುವುದರ ಬೆನ್ನಲ್ಲೇ ಕಾಂಗ್ರಸ್ಸಿಗೆ ಮತ್ತೊಬ್ಬ ಹಿರಿಯ ನಾಯಕ ಕೈ ಕೊಡುವ ಲಕ್ಷಣ ಗೋಚರಿಸುತ್ತಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಒಂದು ನಡೆ ಅದಕ್ಕೆ ಪೂರಕ ಎನ್ನುವಂತಿದೆ. ಏಕೆಂದರೆ ಅವರ ಟ್ವಿಟರ್ ಖಾತೆಯ ಬಯೋದಲ್ಲಿ ಹಾಕಲಾಗಿದ್ದ ಕಾಂಗ್ರೆಸ್ ಅನ್ನುವ ಪದವನ್ನು ತೆಗೆದು ಹಾಕಲಾಗಿದೆ.
'ಬಿಜೆಪಿಗೂ ಸೇರಲ್ಲ, ಕಾಂಗ್ರೆಸ್ನಲ್ಲೂ ಉಳಿಯಲ್ಲ' ಎಂದ ಅಮರೀಂದರ್ ಸಿಂಗ್
ಕೇಂದ್ರ ಸಚಿವ ಅಮಿತ್ ಶಾರನ್ನು ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ ಭೇಟಿ ಮಾಡಿರುವುದರ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎಂಬ ಗುಮಾನಿ ಸೃಷ್ಟಿಯಾಗಿತ್ತು. ಈ ಎಲ್ಲ ಅನುಮಾನಗಳಿಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಇದೀಗ ಉತ್ತರ ನೀಡಿದ್ದಾರೆ.
ನಾನು ಕಾಂಗ್ರೆಸ್ಸಿನಲ್ಲಿ ಇರಲ್ಲ, ಬಿಜೆಪಿಗೆ ಹೋಗಲ್ಲ:
"ನಾನು ಕಾಂಗ್ರೆಸ್ಗೆ ರಾಜೀನಾಮೆ ನೀಡಿಲ್ಲ ಆದರೆ ನಾನು ರಾಜೀನಾಮೆ ನೀಡುತ್ತೇನೆ. ನಾನು ವಿಭಜಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಯಲ್ಲ. ಆದರೆ ನಾನು ಬಿಜೆಪಿ ಸೇರುವುದಿಲ್ಲ," ಎಂದು ಸ್ವತಃ ಕ್ಯಾಪ್ಟನ್ ಅಮರೀಂದರ್ ಸಿಂಗ್ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಟ್ವಿಟರ್ ಬಯೋದಲ್ಲಿ ಬದಲಾವಣೆ:
ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿರುವ ನಡುವೆ ಅವರ ಟ್ವಿಟರ್ ಬಯೋದಲ್ಲಿ ಬದಲಾವಣೆ ಕಂಡು ಬಂದಿದೆ. "ಸೇನಾ ಅನುಭವಿ. ಪಂಜಾಬ್ನ ಮಾಜಿ ಮುಖ್ಯಮಂತ್ರಿ. ರಾಜ್ಯಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸುವುದು," ಎಂದು ಬರೆದುಕೊಳ್ಳಲಾಗಿದೆ.
ಕಾಂಗ್ರೆಸ್ ತೊರೆಯುವ ಕುರಿತು ಮಾತು:
"ನಾನು 52 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನಗೆ ನನ್ನದೇ ಆದ ನಂಬಿಕೆಗಳು, ನನ್ನದೇ ಆದ ತತ್ವಗಳಿವೆ. ನನ್ನೊಂದಿಗೆ ನಡೆದುಕೊಂಡ ರೀತಿ. ಬೆಳಿಗ್ಗೆ 10.30ಕ್ಕೆ ನೀವು ರಾಜೀನಾಮೆ ನೀಡುತ್ತೀರಾ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳುತ್ತಾರೆ. ಆಗ ನಾನು ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ, ಬದಲಾಗಿ ನಾನು ಈಗಲೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದೆ. ಸಂಜೆ 4 ಗಂಟೆಗೆ ನಾನು ರಾಜ್ಯಪಾಲರ ಬಳಿ ಹೋಗಿ ರಾಜೀನಾಮೆ ನೀಡಿದ್ದೇನೆ. 50 ವರ್ಷಗಳ ನಂತರ ನೀವು ನನ್ನನ್ನು ಅನುಮಾನಿಸಿದರೆ ನನ್ನ ವಿಶ್ವಾಸಾರ್ಹತೆಗೆ ಅಪಾಯ ಎದುರಾಗಿದೆ. ವಿಶ್ವಾಸವಿಲ್ಲದಿದ್ದರೆ, ನಾನು ಪಕ್ಷದಲ್ಲಿ ಉಳಿಯುವುದರ ಅರ್ಥವೇನು?," ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ಸಿನಿಂದ ಮೂರು ಬಾರಿ ಅವಮಾನ:
"ಕಳೆದ ಎರಡು ತಿಂಗಳಲ್ಲಿ ಕಾಂಗ್ರೆಸ್ ನಾಯಕತ್ವದಿಂದ ನಾನು ಮೂರು ಬಾರಿ ಅವಮಾನಕ್ಕೊಳಗಾಗಿದ್ದೇನೆ. ಅವರು ಎರಡು ಬಾರಿ ಶಾಸಕರನ್ನು ದೆಹಲಿಗೆ ಕರೆಸಿಕೊಂಡರು ಹಾಗೂ ಶನಿವಾರ ಶಾಸಕಾಂಗ ಸಭೆಯನ್ನು ಕರೆದರು. ಅವರಿಗೆ ನನ್ನ ಮೇಲೆ ವಿಶ್ವಾಸವಿಲ್ಲ, ಈಗ ಅವರಿಗೆ ವಿಶ್ವಾಸವಿರುವ ಯಾರನ್ನಾದರೂ ನೇಮಿಸಿಕೊಳ್ಳಲಿ," ಎಂದು ಅಮರೀಂದರ್ ಸಿಂಗ್ ಹೇಳಿದ್ದರು.
ನವಜೋತ್ ಸಿಂಗ್ ಸಿಧು ಕೂಡಾ ರಾಜೀನಾಮೆ:
ಪಂಜಾಬ್ನಲ್ಲಿ ಕಾರ್ಯಚೂಚಿ ಹಾಗೂ ನ್ಯಾಯಕ್ಕಾಗಿ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ನವಜೋತ್ ಸಿಂಗ್ ಸಿಧು ತಮ್ಮ ವಿಡಿಯೋ ಸಂದೇಶದಲ್ಲಿ ಸಾರಿ ಹೇಳಿದ್ದಾರೆ. ನನ್ನ ಕೊನೆಯ ಉಸಿರು ಇರುವವರೆಗೂ ನ್ಯಾಯ ಮತ್ತು ಸತ್ಯಕ್ಕಾಗಿ ಹೋರಾಟ ನಡೆಸುತ್ತೇನೆ. ರಾಜಿ ಮಾಡಿಕೊಳ್ಳುವುದರ ಮೂಲಕ ಮನುಷ್ಯನ ಪಾತ್ರದ ಕುಸಿಯಲು ಆರಂಭವಾಗುತ್ತದೆ. ಪಂಜಾಬ್ನ ಭವಿಷ್ಯ ಮತ್ತು ಪಂಜಾಬ್ನ ಕಲ್ಯಾಣದ ವಿಷಯದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದ್ದರಿಂದ, ನಾನು ಈ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಕಾಂಗ್ರೆಸ್ ಸೇವೆ ಮುಂದುವರಿಸುತ್ತೇನೆ," ಎಂದು ಬುಧವಾರ ವಿಡಿಯೋ ಸಂದೇಶದಲ್ಲಿ ಹೇಳಿದ್ದರು.
ಕಾಂಗ್ರೆಸ್ ಎಡವಟ್ಟು:
ರಾಜ್ಯದಲ್ಲಿ ಸಾರ್ವಜನಿಕರ ಬೆಂಬಲವನ್ನು ಸಂಪಾದಿಸಿಕೊಳ್ಳಬೇಕಾದ ರಾಜಕೀಯ ಚಮತ್ಕಾರದ ಅಗತ್ಯವಿದ್ದ ಸಮಯದಲ್ಲಿ ಕಾಂಗ್ರೆಸ್ ಯಡವಟ್ಟು ಮಾಡಿಕೊಳ್ಳುತ್ತಿದೆ. ಪಂಜಾಬ್ನಲ್ಲಿನ ಒಳಜಗಳದಿಂದ ಕಾಂಗ್ರೆಸ್ ತನ್ನ ಪ್ರತಿಸ್ಪರ್ಧಿಗಳಷ್ಟೇ ಅಲ್ಲದೇ ತನ್ನದೇ ನಾಯಕರ ಟೀಕೆಗಳನ್ನೂ ಸಹ ಎದುರಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.