ಪಾಕ್ ವಾಯುಪ್ರದೇಶಕ್ಕೆ ಪ್ರವೇಶ ನಿರ್ಬಂಧಿಸಿದ ಮೇಲೆ ವಿಮಾನ ಯಾನ ಬಲು ದುಬಾರಿ
ಚಂಡೀಗಢ, ಜೂನ್ 14: ಈ ವರ್ಷ ಫೆಬ್ರವರಿಯಲ್ಲಿ ಬಾಲಾಕೋಟ್ ಮೇಲೆ ಭಾರತೀಯ ವಾಯು ಸೇನೆಯಿಂದ ದಾಳಿ ನಡೆದ ನಂತರ ಪಾಕಿಸ್ತಾನದ ವಾಯುಪ್ರದೇಶವನ್ನು ಭಾರತ ಹಾಗೂ ಅಂತರರಾಷ್ಟ್ರೀಯ ವಿಮಾನಗಳಿಗೆ ಬಂದ್ ಮಾಡಲಾಗಿದೆ. ನಾಲ್ಕು ತಿಂಗಳ ಕಾಲ ಹೀಗೆ ವಾಯುಪ್ರದೇಶವನ್ನು ಬಂದ್ ಮಾಡಿದ ಮೇಲೆ ವಿಮಾನ ಯಾನ ಟಿಕೆಟ್ ದರ ಶೇಕಡಾ ಇಪ್ಪತ್ತೈದರಷ್ಟು ಏರಿಕೆ ಆಗಿದೆ.
ಈ ಬಂದ್ ಜೂನ್ ಹದಿನೈದರ ತನಕ ವಿಸ್ತರಣೆ ಮಾಡಲಾಗಿದೆ. ಇದರಿಂದ ನೂರಾರು ವಾಣಿಜ್ಯ ಹಾಗೂ ಸರಕು ಸಾಗಣೆ ವಿಮಾನ ಯಾನದ ಮೇಲೆ ಪರಿಣಾಮ ಬೀರಿದೆ. "ಫೆಬ್ರವರಿ ಕೊನೆ ವಾರದಿಂದ ಪಾಕಿಸ್ತಾನವು ತನ್ನ ವಾಯು ಪ್ರದೇಶವನ್ನು ಬಂದ್ ಮಾಡಿದಾಗಿನಿಂದ ಏರ್ ಕೆನಡಾದ ಭಾರತ ವಿಮಾನಗಳು ರದ್ದಾಗಿವೆ. ಬ್ರಿಟಿಷ್ ಏರ್ ವೇಸ್ ಕೂಡ ದೆಹಲಿಗೆ ಬರುವುದಕ್ಕೆ ಬೇರೆ ಮಾರ್ಗದಲ್ಲಿ ಬರಬೇಕಿದೆ.
ಪಾಕಿಸ್ತಾನದ ಮೇಲೆ ಭಾರತದ ಪ್ರಧಾನಿ ನರೇಂದ್ರ ಮೋದಿ ವಿಮಾನ ತೆರಳಲ್ಲ
"ಅದರ ಪರಿಣಾಮವಾಗಿ ಲಂಡನ್ ನಿಂದ ಬರುವುದಕ್ಕೆ ಪ್ರಯಾಣ ಎರಡು ಗಂಟೆ ದೀರ್ಘವಾಗುತ್ತದೆ. ಆ ನಂತರ ಅಮೆರಿಕ ಅಥವಾ ಕೆನಡಾದ ಕನೆಕ್ಟಿಂಗ್ ವಿಮಾನಗಳನ್ನು ತಪ್ಪಿಸಿಕೊಂಡ ಉದಾಹರಣೆಗಳಿವೆ. ಅಂಥ ಸಮಯದಲ್ಲಿ ಅವರಿಗೆ ವಸತಿ ವ್ಯವಸ್ಥೆಯೂ ಇಲ್ಲದೆ ಪರದಾಡುವಂತಾಗಿದೆ" ಎಂದು ಟ್ರಾವೆಲ್ ಏಜೆಂಟ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅನಿಲ್ ಆನಂದ್ ಹೇಳಿದ್ದಾರೆ.
ಜೆಟ್ ಏರ್ ವೇಸ್ ದಿವಾಳಿ ಆಗಿ, ಕಾರ್ಯಾಚರಣೆ ನಿಲ್ಲಿಸಿದ ಮೇಲೆ ಪ್ರಯಾಣ ದರ ಗಗನಕ್ಕೆ ಏರಿದೆ. ಎಕಾನಮಿ ಕ್ಲಾಸ್ ನ ದೆಹಲಿಯಿಂದ ಯು.ಎಸ್. ಅಥವಾ ಯು.ಕೆ.ಗೆ ತೆರಳುವ ಟಿಕೆಟ್ ಗೆ 1.10 ಲಕ್ಷಕ್ಕಿಂತ ಹೆಚ್ಚಾಗಿದೆ. ಈ ಹಿಂದೆ ದರ 70 ಸಾವಿರದಷ್ಟಿತ್ತು. ಇನ್ನು ಎನ್ ಆರ್ ಐಗಳು ಯಾರು ಮುಂಚಿತವಾಗಿ ಟಿಕೆಟ್ ಬುಕ್ ಮಾಡಿದ್ದರೋ ಅಥವಾ ತುರ್ತಾಗಿ ಪ್ರಯಾಣಿಸಬೇಕೋ ಅಂಥವರು ಮಾತ್ರ ಟಿಕೆಟ್ ಖರೀದಿಸುತ್ತಿದ್ದಾರೆ.
ದೆಹಲಿಯಿಂದ ಲಂಡನ್ ಗೆ ತೆರಳುವ ಎಕಾನಮಿ ಕ್ಲಾಸ್ ಟಿಕೆಟ್ ದರ ಏರಿಕೆ ಆಗುವುದಕ್ಕೆ ಮತ್ತೊಂದು ಕಾರಣವೂ ಇದೆ. ಅದು ಈಗ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವ ಕಪ್ ಕಾರಣ. ಈ ಹಿಂದೆ ನಲವತ್ತೈದು ಸಾವಿರಕ್ಕೆ ಮಾರಾಟ ಆಗುತ್ತಿದ್ದುದು ಈಗ ಅರವತ್ನಾಲ್ಕು ಸಾವಿರಕ್ಕೂ ಹೆಚ್ಚು ದರಕ್ಕೆ ಮಾರಲಾಗುತ್ತಿದೆ.