'ಸಾರ್ವಜನಿಕ ಜೀವನಕ್ಕೆ ತಾತ್ಕಾಲಿಕ ವಿರಾಮ': ಪಂಜಾಬ್ ಸಿಎಂ ಸಲಹೆಗಾರ ಸ್ಥಾನಕ್ಕೆ ಚಾಣಕ್ಯ ರಾಜೀನಾಮೆ
ಚಂಡೀಗಢ, ಆ.05: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ರ ಸಲಹೆಗಾರ ಸ್ಥಾನಕ್ಕೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಗುರುವಾರ ರಾಜೀನಾಮೆ ನೀಡಿದರು. ಸಾರ್ವಜನಿಕ ಜೀವನದಲ್ಲಿ ಸಕ್ರಿಯ ಪಾತ್ರದಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
2022 ಪಂಜಾಬ್ ಚುನಾವಣೆಗೆ ಮುಂಚಿತವಾಗಿ ತಾನು ಕೈಗೊಂಡಿರುವ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್ ಕಿಶೋರ್, "ನಿಮಗೆ ತಿಳಿದಿರುವಂತೆ, ಸಾರ್ವಜನಿಕ ಜೀವನದಲ್ಲಿ ಸಕ್ರಿಯ ಪಾತ್ರದಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳುವ ನನ್ನ ನಿರ್ಧಾರದ ದೃಷ್ಟಿಯಿಂದ, ನಿಮ್ಮ ಪ್ರಧಾನ ಸಲಹೆಗಾರನಾಗಿ ನಾನು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ," ಎಂದಿದ್ದಾರೆ.
ಚುನಾವಣಾ ಚಾಣಕ್ಯನ ಪಕ್ಷ 'ಪುನರುಜ್ಜೀವನ ಯೋಜನೆ' ಬಗ್ಗೆ ಕಾಂಗ್ರೆಸ್ ಸಭೆ
"ನನ್ನ ಮುಂದಿನ ಕಾರ್ಯಕ್ರಮವನ್ನು ನಾನು ಇನ್ನೂ ನಿರ್ಧರಿಸದ ಕಾರಣ, ಈ ಜವಾಬ್ದಾರಿಯಿಂದ ನನ್ನನ್ನು ದಯೆಯಿಂದ ಮುಕ್ತಗೊಳಿಸುವಂತೆ ವಿನಂತಿಸಲು ನಾನು ಬರೆಯುತ್ತೇನೆ. ಈ ಸ್ಥಾನಕ್ಕಾಗಿ ನನ್ನನ್ನು ಪರಿಗಣಿಸಿದ್ದಕ್ಕಾಗಿ ನಿಮಗೆ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ," ಎಂದು ಕಿಶೋರ್ ತಿಳಿಸಿದ್ದಾರೆ.
ಕಿಶೋರ್ ಔಪಚಾರಿಕವಾಗಿ ಕಾಂಗ್ರೆಸ್ ಸೇರುವ ಗುಂಗಿನ ನಡುವೆ ಈ ಕ್ರಮವು ಬಂದಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಯಲ್ಲಿ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಮಾತುಕತೆಯ ಸಮಯದಲ್ಲಿ ಪಕ್ಷ ಮತ್ತು ರಾಜ್ಯಗಳಲ್ಲಿ ದೊಡ್ಡ ಚುನಾವಣೆಗೆ ತಯಾರಿ ನಡೆಸುತ್ತಿರುವ ಹಿನ್ನೆಲೆ ಪಕ್ಷದ ಕಾರ್ಯತಂತ್ರದ ಮುಖಂಡ ಪಾತ್ರವನ್ನು ಗೊತ್ತು ಮಾಡಿರಬಹುದು ಎಂದು ಮೂಲಗಳು ಸೂಚಿಸಿವೆ.
ಮುಂಬರುವ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳುವ ಕಾಂಗ್ರೆಸ್ ಪಕ್ಷದ ಯೋಜನೆಯನ್ನು ಹಳಿ ತಪ್ಪಿಸುವ ಭೀತಿ ಎದುರಾಗಿದ್ದ ಸಂದರ್ಭದಲ್ಲಿ ಪಂಜಾಬ್ನಲ್ಲಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧುರನ್ನು ಜೊತೆಗೂಡಿಸುವಲ್ಲಿ ಪ್ರಶಾಂತ್ ಕಿಶೋರ್ ಪ್ರಮುಖ ಪಾತ್ರ ವಹಿಸಿದ್ದರು.
ಪೆಗಾಸಸ್ ಬಳಸಿ ಪ್ರಶಾಂತ್ ಕಿಶೋರ್ ಮೇಲೆ ಕಣ್ಗಾವಲು: ಮಮತಾ
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಈ ವರ್ಷದ ಮಾರ್ಚ್ನಲ್ಲಿ ತಮ್ಮ ಮುಖ್ಯ ಸಲಹೆಗಾರರಾಗಿ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ರನ್ನು ನೇಮಿಸಿದ್ದರು. ಅಮರೀಂದರ್ ಸಿಂಗ್ ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದ್ದರು. "ಪ್ರಶಾಂತಕಿಶೋರ್ ನನ್ನ ಮುಖ್ಯ ಸಲಹೆಗಾರರಾಗಿ ನನ್ನೊಂದಿಗೆ ಸೇರಿಕೊಂಡಿದ್ದಾರೆ ಎಂದು ಹಂಚಿಕೊಳ್ಳಲು ಸಂತೋಷವಾಗಿದೆ. ಪಂಜಾಬ್ ಜನರ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ," ಎಂದು ಬರೆದಿದ್ದರು.
ಕಿಶೋರ್ ಅವರನ್ನು "ಕ್ಯಾಬಿನೆಟ್ ಮಂತ್ರಿಯ ಶ್ರೇಣಿ ಮತ್ತು ಸ್ಥಾನಮಾನದಲ್ಲಿ" ನೇಮಿಸಲಾಗಿದೆ ಎಂದು ಸಿಎಂಒ ಟ್ವೀಟ್ ಮಾಡಿತ್ತು. ಸರ್ಕಾರದ ಪರವಾಗಿ ಪ್ರಶಾಂತ್ ಕೆಲಸ ಮಾಡಲಿದ್ದಾರೆ. ಟೋಕನ್ ಗೌರವಧನವಾಗಿ ಪ್ರಶಾಂತ್ಗೆ ತಿಂಗಳಿಗೆ 1 ರೂ. ಪಾವತಿಸಲಾಗುವುದು ಎಂದು ಟ್ವೀಟ್ನಲ್ಲಿ ಸೇರಿಸಿತ್ತು. ಹಾಗೆಯೇ ಪ್ರಶಾಂತ್ ಸರ್ಕಾರಿ ನಿವಾಸ, ಅರ್ಧ ಡಜನ್ ಸಿಬ್ಬಂದಿ, ಉಚಿತ ಸಾರಿಗೆ, ಉಚಿತ ವಿಮಾನ ಪ್ರಯಾಣ, ದೂರವಾಣಿ ಮತ್ತು ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಸವಲತ್ತುಗಳಿಗೆ ಅರ್ಹರಾಗಿರುತ್ತಾರೆ ಎಂದು ಕೂಡಾ ಹೇಳಿತ್ತು.
2017 ರ ಚುನಾವಣೆಗೆ ಮುನ್ನ ಕಿಶೋರ್ ಅಮರೀಂದರ್ ಜೊತೆ ಕೆಲಸ ಮಾಡಿದ್ದರು. 117 ಸದಸ್ಯರ ವಿಧಾನಸಭೆಯಲ್ಲಿ 77 ಸ್ಥಾನಗಳೊಂದಿಗೆ ಪಕ್ಷವು ಬಹುಮತವನ್ನು ಗಳಿಸಿದೆ. ಪ್ರಶಾಂತ್ ಕಿಶೋರ್ ಕಳೆದ ಕೆಲವು ತಿಂಗಳುಗಳಿಂದ ಹಲವಾರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿದ್ದಾರೆ. ಎನ್ಸಿಪಿಯ ಮುಖ್ಯಸ್ಥ ಶರದ್ ಪವಾರ್ ಜೊತೆಗೆ ಪ್ರಶಾಂತ್ ನಡೆಸಿದ ಹಲವಾರು ಸಭೆಗಳು ಇತ್ತೀಚೆಗೆ ವಿರೋಧ ಪಕ್ಷಗಳ ರಾಜಕೀಯವಾಗಿ ಬಿಜೆಪಿಗೆ ವಿರುದ್ದವಾಗಿ ಒಂದಾಗುತ್ತದೆಯೇ ಎಂಬ ಊಹಾಪೋಹಗಳನ್ನು ಸೃಷ್ಟಿ ಮಾಡಿತ್ತು. ಆದರೆ ಇಂತಹ ಯಾವುದೇ ಮಾತುಕತೆ ಇಲ್ಲ ಎಂದು ಹೇಳುವ ಮೂಲಕ ಶರದ್ ಪವಾರ್ ವದಂತಿಗೆ ತೆರೆ ಎಳೆದಿದ್ದರು.
ತೃಣಮೂಲ ಕಾಂಗ್ರೆಸ್ ಬಂಗಾಳದಲ್ಲಿ ಸುಗಮ ಗೆಲುವನ್ನು ಸಾಧಿಸಿದಂತೆ, ಪಕ್ಷದ ಯಶಸ್ಸಿನ ಹಿಂದಿನ ವ್ಯಕ್ತಿ ಕಿಶೋರ್ ಚುನಾವಣಾ ನಿರ್ವಹಣೆಯಿಂದ ನಿವೃತ್ತಿ ಘೋಷಿಸಿದ್ದರು. "ನಾನು ಬಹಳ ಸಮಯದಿಂದ ಬಿಡಲು ಯೋಚಿಸುತ್ತಿದ್ದೆ ಮತ್ತು ಅವಕಾಶವನ್ನು ಹುಡುಕುತ್ತಿದ್ದೆ, ಬಂಗಾಳ ನನಗೆ ಆ ಅವಕಾಶವನ್ನು ನೀಡಿತು," ಎಂದಿದ್ದರು. ಪ್ರಶಾಂತ್ರ ರಾಜಕೀಯ ಮಹತ್ವಾಕಾಂಕ್ಷೆಯ ಬಗ್ಗೆ ಕೇಳಿದಾಗ, "ರಾಜಕೀಯಕ್ಕೆ ಸೇರುವುದು ಯಾವಾಗಲೂ ಬಯಕೆ ಇತ್ತು, ನಾನು ಅಲ್ಲಿದ್ದೆ ಮತ್ತು ವಿಫಲವಾಗಿದ್ದೇನೆ , ಆದರೆ ನಾನು ಹಿಂತಿರುಗಿ, ನಾನು ಉತ್ತಮವಾಗಿ ಏನು ಮಾಡಬೇಕು ಎಂಬುದನ್ನು ಪುನರ್ವಿಮರ್ಶಿಸಬೇಕು," ಎಂದು ಹೇಳಿದ್ದರು.
ಇನ್ನು ಪ್ರಶಾಂತ್ ಕಿಶೋರ್ ಈ ನಡುವೆ ಕಾಂಗ್ರೆಸ್ ಪಕ್ಷದ ಪುನರುಜ್ಜೀವನಕ್ಕಾಗಿ ಹಲವಾರು ಕಾರ್ಯತಂತ್ರಗಳನ್ನು ಪಕ್ಷಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ.
(ಒನ್ಇಂಡಿಯಾ ಸುದ್ದಿ)