ಸೋಲಿಗರ ಪೋಡಿನಲ್ಲಿ ಜಿಲ್ಲಾ ಪಂಚಾಯತ್ ಸಿಇಓ ವಾಸ್ತವ್ಯ
ಚಾಮರಾಜನಗರ, ಸೆಪ್ಟೆಂಬರ್.20: ಸೋಲಿಗರ ಪೋಡಿನಲ್ಲಿ ವಾಸ್ತವ್ಯ ಹೂಡುವ ಮೂಲಕ ಅಲ್ಲಿನ ಜನರ ಸಂಕಷ್ಟವನ್ನು ಅರಿಯುವ ಪ್ರಯತ್ನ ಮಾಡುವ ಮೂಲಕ ಜಿಪಂ ಸಿಇಓ ಡಾ. ಹರೀಶ್ ಕುಮಾರ್ ಎಲ್ಲರ ಗಮನಸೆಳೆದಿದ್ದಾರೆ.
ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯ ಮುತ್ತುಗದಗದ್ದೆ ಪೋಡಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಅವರು ಅಲ್ಲಿನ ಸೋಲಿಗರಿಂದ ಅಹವಾಲು ಸ್ವೀಕರಿಸಿ ಸಮಸ್ಯೆ ಪರಿಹರಿಸುವ ಭರವಸೆಯನ್ನು ನೀಡಿದ್ದಾರೆ. ಪೋಡಿಗೆ ಜಿಪಂ ಸಿಇಓ ಅವರು ಆಗಮಿಸುತ್ತಿದ್ದಂತೆಯೇ ಜನರು ಭವ್ಯ ಸ್ವಾಗತಕೋರಿದ್ದರು.
ರೈತರ ಸಾಲ ಮನ್ನಾ : ಎಚ್ಡಿಕೆ ಹೇಳಿದ್ದರ ಮಾತಿನ ಅರ್ಥ ಅದಾಗಿರಲಿಲ್ಲ!
ರಂಗೋಲಿ ಹಾಕಿ ತಳಿರು ತೋರಣಗಳಿಂದ ಸಿಂಗಾರ ಮಾಡಿದ್ದ ಪೋಡಿಯ ಜನ ಕುತೂಹಲದಿಂದ ಸಂಭ್ರಮದಿಂದ ಅವರನ್ನು ಬರ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ ಗೊರುಕನ ನೃತ್ಯ ಮತ್ತು ಹಾಡಿನೊಂದಿಗೆ ಮನಸೆಳೆದರು.
ಊಟಕ್ಕೆ ಸೋಲಿಗರ ಆಹಾರ ಪದ್ದತಿಯಂತೆ ರಾಗಿ ಮುದ್ದೆ, ಸೊಪ್ಪಿನ ಸಾರು, ಎಳೆ ಬಿದಿರಿನ ಸಾಂಬಾರು, ಜೇನುತುಪ್ಪ, ಹಲಸುಗಳನ್ನು ಸಿದ್ದಪಡಿಸಿ ಬಡಿಸಿದ್ದು ವಿಶೇಷವಾಗಿತ್ತು. ಇದನ್ನು ಸಂತೋಷದಿಂದಲೇ ಸ್ವೀಕರಿಸಿದ ಜಿಪಂ ಸಿಇಓ ಡಾ. ಕೆ.ಹರೀಶ್ಕುಮಾರ್ ಅಲ್ಲಿಯೇ ನೆಮ್ಮದಿಯ ನಿದ್ದೆ ಮಾಡಿದರು.
ಗ್ರಾಮವಾಸ್ತವ್ಯದ ವೇಳೆ ಮಾತನಾಡಿದ ಸೋಲಿಗರ ಪೋಡಿನ ಮುಖಂಡರು, ತಮ್ಮ ಹಾಡಿಗೆ ಕಾಡಾನೆಗಳು ಬಾರದಂತೆ ಅರಣ್ಯ ಇಲಾಖೆಯಿಂದ ಕಂದಕ ತೋಡಲಾಗಿದೆ. ಆದರೆ ಆ ಆನೆ ಕಂದಕ ಅಗಲ ಮತ್ತು ಆಳ ಇಲ್ಲ. ಹಾಗಾಗಿ ಆನೆಗಳು ಕಂದಕ ದಾಟಿ ತಮ್ಮ ಫಸಲುಗಳನ್ನು ನಾಶ ಪಡಿಸುತ್ತಿವೆ. ಅಷ್ಟೇ ಅಲ್ಲದೆ ಹಾಡಿಗೂ ಬರುತ್ತಿವೆ.
ಗ್ರಾಮ ವಾಸ್ತವ್ಯ: ದಲಿತ ದಂಪತಿಗೆ ಸ್ವತಃ ಊಟ ಬಡಿಸಿದ ಶ್ರೀರಾಮುಲು
ಇದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಆನೆಕಂದಕವನ್ನು ಅಗಲ ಮತ್ತು ಆಳ ಮಾಡಬೇಕು, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಪ್ರಯೋಜನ ನಮಗೆ ದೊರಕುತ್ತಿಲ್ಲ. ನಮಗೆ ಕೂಲಿ ನೀಡುತ್ತಿಲ್ಲ. ಇದರಿಂದ ನಿರುದ್ಯೋಗಿಗಳಾಗಿದ್ದೇವೆ. ಕೆಲವರು ಬೇರೆ ರಾಜ್ಯಗಳಿಗೂ ವಲಸೆ ಹೋಗಿದ್ದಾರೆ. ಆದ್ದರಿಂದ ಉದ್ಯೋಗ ಕೊಡಿಸಬೇಕು ಎಂದು ಮನವಿ ಮಾಡಿದರು.
ಜತೆಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಿ, ರಾತ್ರಿ ವೇಳೆ ಅರಣ್ಯ ಪ್ರಾಣಿಗಳಿಂದ ರಕ್ಷಣೆ, ಸಮುದಾಯ ಭವನ ಮತ್ತು ವಾಸಕ್ಕೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಇದೇ ವೇಳೆ ಒತ್ತಾಯಿಸಿ ಅಹವಾಲು ಸಲ್ಲಿಸಿದರು.