ತಮ್ಮಡಹಳ್ಳಿ ಕೆರೆಯಲ್ಲಿ ಈಜಲು ಹೋದವರು ಮರಳಿ ಬಂದದ್ದು ಶವವಾಗಿ
ಚಾಮರಾಜನಗರ, ಏಪ್ರಿಲ್ 08: ಬೇಸಿಗೆ ಬರುತ್ತಿದ್ದಂತೆಯೇ ಈಜಲು ತೆರಳುವ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪುವ ಘಟನೆಗಳು ಅಲ್ಲಲ್ಲಿ ವರದಿಯಾಗಿದ್ದು, ಅಂತಹದ್ದೇ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಎರಡು ಪ್ರಕರಣದಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪದ ಹುತ್ತೂರು ಕೆರೆ ಮತ್ತು ತಮ್ಮಡಹಳ್ಳಿ ಕೆರೆಯಲ್ಲಿ ಈ ದುರ್ಘಟನೆ ನಡೆದಿದ್ದು, ಪೋಷಕರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ.
ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ತಂದೆ ವಿಧಿವಶ
ಹುತ್ತೂರು ಕೆರೆಯಲ್ಲಿ ಉಡಿಗಾಲ ಗ್ರಾಮದ 16 ವರ್ಷದ ಕಿರಣ್ ಎಂಬ ವಿದ್ಯಾರ್ಥಿ ಈಜಲು ಹೋಗಿ ಸಾವನ್ನಪ್ಪಿದ್ದು, ಈ ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದು ಘಟನೆ ತಮ್ಮಡಹಳ್ಳಿ ಕೆರೆಯಲ್ಲಿ ನಡೆದಿದ್ದು, ಗುಂಡ್ಲುಪೇಟೆ ಪಟ್ಟಣದ ಕೆಲವು ಯುವಕರು ಈಜಲು ಈ ಕೆರೆಯಲ್ಲಿ ಈಜಲು ತೆರಳಿದ್ದರು.
ಈ ವೇಳೆ ಇಬ್ಬರು ನೀರಿನಲ್ಲಿ ಮುಳುಗಿದ್ದು ಕೂಡಲೇ ಜತೆಗಿದ್ದವರು ಅಲ್ಲಿಂದ ಹೊರಟು ಹೋಗಿದ್ದಾರೆ ಎನ್ನಲಾಗಿದೆ. ತಮ್ಮಡಹಳ್ಳಿ ಗ್ರಾಮದ ಕೆರೆಯಲ್ಲಿ ನೀರು ಪಾಲಾದವರು ಗುಂಡ್ಲುಪೇಟೆ ಪಟ್ಟಣದ ಆಚಾರ್ ಬೀದಿಯ ಅಣ್ಣತಮ್ಮಂದಿರು ಎಂದು ಹೇಳಲಾಗಿದ್ದು, ಮೃತ ದೇಹವನ್ನು ಕೆರೆಯಿಂದ ಗ್ರಾಮಸ್ಥರ ಸಹಾಯ ಹೊರ ತೆಗೆಯಲಾಗಿದೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.