ನೇರಳೆಹಣ್ಣು ಕೀಳುವಾಗ ವಿದ್ಯುತ್ ತಗುಲಿ ಯುವಕ ಸಾವು
ಕೊಳ್ಳೇಗಾಲ, ಜುಲೈ 15: ನೇರಳೆಹಣ್ಣು ಕೀಳಲು ಮರವೇರಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೂಗ ಯುವಕನೊಬ್ಬ ಮೃತಪಟ್ಟ ಘಟನೆ ತಾಲ್ಲೂಕಿನ ಲಕ್ಕರಸನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಲಕ್ಕರಸನಪಾಳ್ಯ ಗ್ರಾಮದ ನಿವಾಸಿ ಯುವಕ ಕಾರ್ತಿಕ್ (24) ಮೃತಪಟ್ಟ ದುರ್ದೈವಿ. ಈತ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಗುಂಡಾಲ್ ಜಲಾಶಯಕ್ಕೆ ತೆರಳಿದ್ದನು. ಜಲಾಶಯ ನೋಡಿಕೊಂಡು ವಾಪಸ್ ತನ್ನ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಮಧುವನಹಳ್ಳಿ ಸಮೀಪ ನೇರಳೆಹಣ್ಣು ಕಂಡಿದ್ದಾನೆ.
ನುಗ್ಗೆ ಸೊಪ್ಪು ಕೀಳಲು ಹೋದವ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು
ಈ ಸಂದರ್ಭ ಹಣ್ಣನ್ನು ಕೀಳಲು ಮರವೇರಿದ್ದು, ಈ ವೇಳೆ ಮರದ ರೆಂಬೆಗಳ ಮಧ್ಯದಲ್ಲಿ 11 ಕೆವಿ ವಿದ್ಯುತ್ ತಂತಿ ಹಾದು ಹೋಗಿರುವುದನ್ನು ನೋಡದೆ ವಿದ್ಯುತ್ ತಂತಿ ಸ್ಪರ್ಶಿಸಿದ್ದಾನೆ. ವಿದ್ಯುತ್ ಶಾಕ್ ಹೊಡೆದಿದ್ದು, ಕಾರ್ತಿಕ್ ಮರದಿಂದ ನೆಲಕ್ಕೆ ಉರುಳಿದ್ದಾನೆ. ಕೂಡಲೇ ಜೊತೆಗಿದ್ದ ಆತನ ಸ್ನೇಹಿತರು ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದಾರೆ.
ಆದರೆ ದುರದೃಷ್ಟವಶಾತ್ ಯುವಕ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ. ಈ ಸಂಬಂಧ ಮೃತ ಯುವಕನ ತಾಯಿ ನಾಗರತ್ನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.