ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಕಟ್ಟುತ್ತಿರುವ ಮಹಿಳೆಯರು
ಚಾಮರಾಜನಗರ, ಮೇ 09: ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಜನರು ಕೆಲಸವಿಲ್ಲದೇ ಪರದಾಡುತ್ತಿದ್ದು, ಗ್ರಾಮ ಪಂಚಾಯಿತಿಗಳು ಈ ಸಮಯದಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡಲು ಮುಂದಾಗಿವೆ. ಅವರಿಗೆ ನೆರವಾಗಲು ಮಹಾತ್ಮ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಆರಂಭಿಸಲಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ, ಚಾಮರಾಜನಗರದಲ್ಲೂ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನೀಡುತ್ತಿದ್ದು, ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿ ಆರಂಭವಾಗಿದೆ. ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿಯೂ ಜನರು ಕೆಲಸಕ್ಕಾಗಿ ಮುಗಿಬಿದ್ದ ದೃಶ್ಯ ಕಂಡುಬಂದಿತು. ನಾಲ್ಕು ದಿನಗಳಲ್ಲಿ ಎರಡೂವರೆ ಸಾವಿರ ಜನಕ್ಕೆ ಯೋಜನೆಯಡಿಯಲ್ಲಿ ಕೆಲಸ ನೀಡಲಾಗುತ್ತಿದೆ.
ಲಾಕ್ ಡೌನ್ ಸಂಕಷ್ಟದಲ್ಲಿ ಹಳ್ಳಿ ಜನರಿಗೆ ನೆರವಾದ ನರೇಗಾ
ತುತ್ತು ಅನ್ನಕ್ಕೂ ಪರದಾಡುತ್ತಿರುವ ಈ ವೇಳೆಯಲ್ಲಿ ಎನ್ ಆರ್ ಇಜಿ ಕೆಲಸವನ್ನು ಸದುಪಯೋಗಪಡಿಸಿಕೊಂಡ ಮಹಿಳೆಯರು ಕೆರೆ ಕಟ್ಟಲು ಮುಂದಾಗಿದ್ದಾರೆ. ಅಂತರ್ಜಲ ಮಟ್ಟ ಹೆಚ್ಚಿಸಲು ಬೆಟ್ಟಗಳ ಸಾಲಿನಿಂದ ಇಳಿದು ಬರುವ ನೀರಿಗೆ ಕಟ್ಟೆ ಕಟ್ಟುವ ಕೆಲಸ ಆರಂಭಗೊಂಡಿದ್ದು, ಈ ಕೆಲಸದಲ್ಲಿ ಎನ್ ಆರ್ ಇಜಿ ಕೂಲಿ ಕೆಲಸದಲ್ಲಿ ಖಾಸಗಿ ಶಾಲಾ ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.