ಗುಂಡ್ಲುಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ವಾಮಾಚಾರ?
ಚಾಮರಾಜನಗರ, ಮೇ 09 : ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಯ ಜಿದ್ದಾಜಿದ್ದಿ ಆರಂಭವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಳೆದ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿ ಸತತ ಸೋಲನ್ನೇ ಅನುಭವಿಸುತ್ತಾ ಬಂದಿರುವ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನ್ ಕುಮಾರ್ ಈ ಬಾರಿ ಗೆದ್ದೇ ತೀರಬೇಕೆಂಬ ಹಠಕ್ಕೆ ಬಿದ್ದಿದ್ದು, ರಾತ್ರಿ ಹಗಲೆನ್ನದೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಉಮಾಶ್ರೀ ವಿರುದ್ಧ ವಾಮಾಚಾರ
ಈ ನಡುವೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನ್ ಕುಮಾರ್ ಸೋಲಿಸಲು ವಾಮಾಚಾರ ನಡೆದಿದೆ ಎಂಬ ಸುದ್ದಿ ಹರಡಿ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕವನ್ನುಂಟು ಮಾಡಿದ್ದು, ವಾಮಾಚಾರದ ಹೆಸರಿನಲ್ಲಿ ಭಯ ಹುಟ್ಟಿಸುವ ಪ್ರಯತ್ನ ನಡೆದಿದೆಯಾ ಎಂಬ ಮಾತುಗಳು ಕೇಳಿಬರುತ್ತಿವೆ.
ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಗ್ರಾಮದ ಜಗಲಿ ಕಟ್ಟೆಯ ಬಳಿ ನಿರಂಜನಕುಮಾರ್ ಭಾವಚಿತ್ರವಿರುವ ಕರಪತ್ರಕ್ಕೆ ನಿಂಬೆಹಣ್ಣು, ಮೊಳೆ, ಕಣಗಿಲೆ ಹೂವು ಅರಿಶಿನ ಕುಂಕುಮ ಹಾಕಿಟ್ಟಿರುವುದು ಕಂಡು ಬಂದಿದ್ದು ಇದನ್ನು ನೋಡಿದವರು ನಿರಂಜನಕುಮಾರ್ ವಿರುದ್ಧ ವಾಮಾಚಾರ ನಡೆಸಿದ್ದಾರೆ ಎಂಬ ಸುದ್ದಿಯನ್ನು ಹರಡಿದ್ದಾರೆ.
ಜಮಖಂಡಿ ಜೆಡಿಎಸ್ ಅಭ್ಯರ್ಥಿಯ ಕಚೇರಿಗೆ ವಾಮಾಚಾರ
ವಿಷಯ ತಿಳಿಯುತ್ತಿದ್ದಂತೆಯೇ ಇದನ್ನು ನೋಡಲು ತಂಡೋಪತಂಡವಾಗಿ ಆಗಮಿಸಿದ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಆತಂಕಗೊಂಡಿದ್ದಾರೆ. ಈ ಕುರಿತಂತೆ ಕ್ಷೇತ್ರದಲ್ಲಿ ಚರ್ಚೆಗಳು ಆರಂಭವಾಗಿವೆ. ಸ್ಥಳಕ್ಕೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಕೃಷ್ಣಪ್ಪ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ವಾಮಾಚಾರಕ್ಕೆ ಬಳಸಿದ್ದು ಎನ್ನಲಾಗುತ್ತಿರುವ ವಸ್ತುಗಳನ್ನು ತೆರವುಗೊಳಿಸಿದ್ದಾರೆ.