ಗೀತಾ ಮಹದೇವ ಪ್ರಸಾದ್ ರನ್ನು ಸಚಿವರರಾಗಿಸುವರೇ ಸಿದ್ದರಾಮಯ್ಯ?
ಉಪಚುನಾವಣೆ ವೇಳೆ ಅದೊಮ್ಮೆ ಭಾಷಣ ಮಾಡುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೀತಾಮಹದೇವಪ್ರಸಾದ್ ಅವರನ್ನು ಗೆಲ್ಲಿಸಿ ಕಳಿಸಿದ್ರೆ ಸಚಿವರನ್ನಾಗಿ ಮಾಡುತ್ತೇನೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
ಚಾಮರಾಜನಗರ, ಏಪ್ರಿಲ್ 24 : ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ತೀರಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದ್ದ ಸಂದರ್ಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮತದಾರರಿಗೆ ನೂರಾರು ಭರವಸೆಗಳನ್ನು ನೀಡಿದ್ದರೂ ಅದರಲ್ಲಿ ಒಂದನ್ನು ಇದೀಗ ಈಡೇರಿಸಲೇಬೇಕೆಂದು ಜನ ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜನ ಸಾಗರದ ನಡುವೆ ಭಾಷಣ ಮಾಡುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೀತಾಮಹದೇವಪ್ರಸಾದ್ ಅವರನ್ನು ಗೆಲ್ಲಿಸಿ ಕಳಿಸಿದ್ರೆ ಸಚಿವರನ್ನಾಗಿ ಮಾಡುತ್ತೇನೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅದರಂತೆ ಈಗ ಗೀತಾ ಅವರನ್ನು ಸಚಿವರನ್ನಾಗಿ ಮಾಡಬೇಕೆಂಬ ಕೂಗು ಈಗ ಹೆಚ್ಚಾಗಿ ಕೇಳಿಬರುತ್ತಿದೆ ಎನ್ನಲಾಗಿದೆ.
ಗೀತಾಮಹದೇವ ಪ್ರಸಾದ್ ಅವರಿಗೆ ಸಚಿವರಾಗುವ ಎಲ್ಲಾ ಅರ್ಹತೆಗಳಿವೆ. ಏಕೆಂದರೆ ಅವರು ಆಂಗ್ಲ ಸಾಹಿತ್ಯದಲ್ಲಿ ಎಂಎ, ಪಿಎಚ್ಡಿ ಮಾಡಿದ್ದಾರೆ. ಜತೆಗೆ ಹಳೆ ಮೈಸೂರು ಭಾಗದ ಏಕೈಕ ಮಹಿಳಾ ಶಾಸಕಿ. ಅಷ್ಟೇ ಅಲ್ಲ ದಕ್ಷಿಣ ಕರ್ನಾಟಕದ ಏಕೈಕ ಲಿಂಗಾಯತ ಶಾಸಕಿಯಾಗಿದ್ದು ಇವರಿಗೊಂದು ಸ್ಥಾನಮಾನ ನೀಡಿದರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ. ಜತೆಗೆ ಜಿಲ್ಲೆಗೊಬ್ಬರು ಸಚಿವರು ದೊರಕುತ್ತಾರೆ ಎಂಬುದು ಹಲವರ ಒತ್ತಾಸೆಯಾಗಿದೆ.
ಚಾಮರಾಜನಗರ ಜಿಲ್ಲೆಯಾಗಿ ಮಾರ್ಪಾಡಾದ ನಂತರ ಹನೂರಿನ ಪರಿಮಳ ನಾಗಪ್ಪ ಅವರನ್ನು ಬಿಟ್ಟರೆ ಇದುವರೆಗೆ ಮಹಿಳೆಯರು ಯಾರೂ ಶಾಸಕಿಯಾಗಿರಲಿಲ್ಲ. ಇದೀಗ ಗೀತಾಮಹದೇವಪ್ರಸಾದ್ ಗುಂಡ್ಲುಪೇಟೆ ಶಾಸಕಿಯಾಗಿದ್ದು, ಮಹಿಳಾ ಪ್ರಾತಿನಿಧ್ಯದಡಿ ಸಚಿವ ಸ್ಥಾನ ನೀಡಲಿ ಎಂಬುದು ಮಹಿಳಾ ಕಾಂಗ್ರೆಸ್ನ ಜಿಲ್ಲಾ ಘಟಕದ ಒತ್ತಾಯವಾಗಿದೆ. ಇದರ ಜತೆಗೆ ಒಂದಷ್ಟು ಕಾರ್ಯಕರ್ತರು ಕೂಡ ಗೀತಾಮಹದೇವಪ್ರಸಾದ್ ಸಚಿವರಾಗಬೇಕು ಎಂಬ ಒತ್ತಾಯವನ್ನು ಮಾಡಿದ್ದಾರೆ.
ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿದ್ದು, ಇರುವ ಅಲ್ಪಾವಧಿಗೆ ಸಚಿವ ಸ್ಥಾನವನ್ನು ನೀಡುವುದು ಕಷ್ಟ ಸಾಧ್ಯ ಎನ್ನಲಾಗುತ್ತಿದ್ದು, ಕ್ಷೇತ್ರದ ಜನ ಮತ್ತು ಕಾರ್ಯಕರ್ತರ ಒತ್ತಡಕ್ಕೆ ಸಿಎಂ ಮಣಿದು ಸಚಿವ ಸ್ಥಾನವನ್ನು ನೀಡುತ್ತಾರಾ ಎಂಬುದು ಸದ್ಯಕ್ಕೆ ಪ್ರಶ್ನೆಯಾಗಿಯೇ ಉಳಿದಿದೆ.