ಬಂಡೀಪುರದಲ್ಲಿ ಕಾಳ್ಗಿಚ್ಚು ತಡೆಗೆ ಡ್ರೋಣ್ ಬಳಕೆ?
ಬಂಡೀಪುರದಲ್ಲಿ ಬೆಂಕಿ ಅನಾಹುತದಿಂದ ಎಚ್ಚೆತ್ತಿರುವ ರಾಜ್ಯ ಅರಣ್ಯ ಇಲಾಖೆಯು ಕಣ್ಗಾವಲು ಇಡಲು ಡ್ರೋಣ್ ಕ್ಯಾಮೆರಾ ಬಳಸಲು ನಿರ್ಧರಿಸಿದೆ.
ಚಾಮರಾಜನಗರ, ಮಾರ್ಚ್ 4: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಈಗಾಗಲೇ ಕಿಡಿಗೇಡಿಗಳು ಬೆಂಕಿ ಹಚ್ಚಿ ಅರಣ್ಯ ಹಾನಿ ಅಲ್ಲದೆ, ಪ್ರಾಣ ಹಾನಿ ಸಂಭವಿಸಿದೆ. ಇಂಥ ಅನಾಹುತ ತಡೆಯಲು ಅರಣ್ಯಾಧಿಕಾರಿಗಳು ಡ್ರೋಣ್ ಬಳಕೆಗೆ ಚಿಂತನೆ ನಡೆಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಯನ್ನು ನೇಮಕ ಮಾಡಿದ್ದರೂ ಬಂಡೀಪುರಕ್ಕೆ ಅತಿಕ್ರಮ ಪ್ರವೇಶ ಮಾಡಿ, ಅಕ್ರಮ ನಡೆಸುವ ದುಷ್ಕರ್ಮಿಗಳು ಇದ್ದೇ ಇದ್ದಾರೆ. ಒಂದೆಡೆ ಬೆಂಕಿ ಹಚ್ಚಿ ಅತ್ತ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿ ಬೆಂಕಿ ಆರಿಸುವ ಕಾರ್ಯವನ್ನು ಮಾಡುತ್ತಿದ್ದಂತೆಯೇ ಮತ್ತೊಂದೆಡೆ ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿ ದುಷ್ಕೃತ್ಯ ಎಸಗುತ್ತಾರೆ.[ಜಂಗಲ್ ಡೈರಿ: ಕಾರಣ ತಿಳಿಯದ ಕಾಡಿನ ಬೆಂಕಿಗೆ ಕಣ್ಮುಚ್ಚುತ್ತಿವೆ ಪ್ರಾಣಿ-ಪಕ್ಷಿ]
ಮರಕಳ್ಳತನ, ಬೇಟೆ ಮೊದಲಾದ ಕೃತ್ಯಗಳನ್ನು ಮಾಡುವ ಕಳ್ಳರ ದೊಡ್ಡ ದಂಡೇ ಇದ್ದು, ಇವರನ್ನು ಸದೆಬಡಿಯುವುದು ಅಷ್ಟು ಸುಲಭವಲ್ಲ. ಕಾರಣ ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಅರಣ್ಯ ಇಲಾಖೆಯನ್ನು ಕಾಡುತ್ತಿವೆ. ಇವೆಲ್ಲವನ್ನು ತಡೆಯಲು ಮತ್ತು ಅರಣ್ಯವನ್ನು ಕಾಡುಗಳ್ಳರಿಂದ ರಕ್ಷಿಸಲು ಡ್ರೋಣ್ ಕ್ಯಾಮೆರಾನ್ನು ಬಳಸುವ ಬಗ್ಗೆ ಬಂಡೀಪುರ ಉಪವಿಭಾಗದ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಡಿ.ಎ.ಮರಡಿಮನಿ ತಿಳಿಸಿದ್ದಾರೆ.
ಇದೀಗ ಡ್ರೋಣ್ ಕ್ಯಾಮೆರಾ ಮೂಲಕ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ. ಇಕೋ ಸಂಸ್ಥೆಯು ಇತ್ತೀಚೆಗೆ ಬಂಡೀಪುರದ ಅರಣ್ಯ ಕಚೇರಿ ಮುಂಭಾಗದಲ್ಲಿ ಡ್ರೋಣ್ ನ ಪ್ರಾತ್ಯಕ್ಷಿಕೆ ನಡೆಸಿದ್ದು, ರಾಷ್ಟ್ರೀಯ ಉದ್ಯಾನದಲ್ಲಿ ಬೆಂಕಿಯಂತಹ ಅವಘಡ ಸಂಭವಿಸಿದಾಗ ಸಹಾಯಕ್ಕೆ ಬರುವ ಬಗ್ಗೆ ತಿಳಿಸಲಾಗಿದೆ.[10 ದಿನದಲ್ಲಿ 4 ಕಡೆ ಕಾಳ್ಗಿಚ್ಚು, ನೂರಾರು ಎಕರೆ ಭಸ್ಮ, ಆದರೆ ಕಾರಣ ಗೊತ್ತಿಲ್ಲ]
ಉನ್ನತ ಗುಣಮಟ್ಟದ ಡ್ರೋಣ್ ಕ್ಯಾಮೆರಾಗಳನ್ನು ಅರಣ್ಯದ ಸೇವೆಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು, ಈ ಯಂತ್ರದ ಸಹಾಯದಿಂದ ಸದ್ಯ ಕಾಡಂಚಿನ ಗ್ರಾಮಗಳ ಜನರು ಅತಿಕ್ರಮ ಪ್ರವೇಶ ಮಾಡದಂತೆ ಅಲ್ಲದೆ, ಬೆಂಕಿ ಬೀಳದಂತೆ ತಡೆಯಲು ಸಾಧ್ಯವಿದೆ ಎಂದು ಇಕೋ ವಾಲೆಂಟಿಯರ್ಸ್ ಸಂಸ್ಥೆಯ ಫಣೀಶ್ ಹೇಳುತ್ತಾರೆ.[ಬದುಕು ಬೆಂದು ಹೋಗುವಂತೆ ಮಾಡಿದ ಬಂಡೀಪುರದ ಬೆಂಕಿ ಅನಾಹುತ]
ಇತ್ತೀಚೆಗೆ ಕಲ್ಕೆರೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದ ಪರಿಣಾಮ ಸಾವಿರಾರು ಎಕರೆ ಅರಣ್ಯ ನಾಶವಾಗಿತ್ತು. ಬೇಸಿಗೆ ಏರುತ್ತಿದ್ದಂತೆ ಸಂಭವನೀಯ ಅವಘಡಗಳನ್ನು ತಪ್ಪಿಸಬೇಕಾದರೆ ಈಗಿನಿಂದಲೇ ಮುಂಜಾಗ್ರತಾ ಕ್ರಮ ವಹಿಸುವುದು ಅನಿವಾರ್ಯವಾಗಲಿದೆ. ಆದ್ದರಿಂದ ದ್ರೋಣ್ ಕ್ಯಾಮೆರಾ ಸಹಾಯಕ್ಕೆ ಬರಲಿದೆ.