ಕರ್ನಾಟಕದ ನಯಾಗರವಾಗುತ್ತಾ ಭರಚುಕ್ಕಿ ಜಲಪಾತ!
ಚಾಮರಾಜನಗರ, ಸೆಪ್ಟೆಂಬರ್ 21: ಎಲ್ಲವೂ ಅಂದುಕೊಂಡಂತೆ ಆದರೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ಶಿವನಸಮುದ್ರ ಬಳಿಯಲ್ಲಿರುವ ಭರಚುಕ್ಕಿ ಜಲಪಾತವು ವಿಶ್ವದ ಗಮನ ಸೆಳೆಯಲಿದೆ. ಅಷ್ಟೇ ಅಲ್ಲದೆ ಕರ್ನಾಟಕದ ನಯಾಗರವಾಗಲಿದೆ.
ಈಗಾಗಲೇ ಭರಚುಕ್ಕಿ ಪ್ರದೇಶವನ್ನು ಅಂತರರಾಷ್ಟ್ರೀಯ ಮಟ್ಟದ ಜೀವ ವೈವಿಧ್ಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದು, ಮೊದಲನೇ ಹಂತದ ಯೋಜನೆ ಅನುಷ್ಠಾನಕ್ಕೆ ಅನುಮೋದನೆಯೂ ದೊರೆತಿದೆ ಎನ್ನಲಾಗಿದೆ. ಇದರಿಂದ ಈ ತಾಣದ ಖ್ಯಾತಿ ಇನ್ನಷ್ಟು ಇಮ್ಮಡಿಯಾಗುವುದರೊಂದಿಗೆ ಕರ್ನಾಟಕದ ಹೆಮ್ಮೆಯಾಗಲಿದೆ.
ಭರಚುಕ್ಕಿಗೆ ಪ್ರವಾಸಿಗರ ದೌಡು... ಅಪಾಯಕಾರಿ ತೆಪ್ಪ ವಿಹಾರ...
ಸಾಮಾನ್ಯವಾಗಿ ಭರಚುಕ್ಕಿ ಜಲಪಾತವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಅಭಿವೃದ್ಧಿ ಮಾಡಿದರಂತು ಇನ್ನಷ್ಟು ಪ್ರವಾಸಿಗರು ಎಲ್ಲಕಾಲದಲ್ಲೂ ಇತ್ತ ಬರುವುದರಿಂದ ಪ್ರವಾಸೋದ್ಯಮ ಬೆಳೆಯಲು ಸಾಧ್ಯವಾಗಲಿದೆ.
ಯೋಜನೆಯಲ್ಲಿ ವಿಶೇಷತೆ ಏನೇನಿದೆ?
ಈ ಯೋಜನೆಯಲ್ಲಿ ಏನೇನು ಇದೆ ಎಂಬುದನ್ನು ನೋಡುವುದಾದರೆ, ಜಲಪಾತಕ್ಕೆ ತೆರಳುತ್ತಿದ್ದಂತೆಯೇ ಆಕರ್ಷಕ ದ್ವಾರ, ದ್ವಾರದ ಎರಡು ಬದಿಯಲ್ಲಿ ನವಿಲು ಆಕಾರದ ಪ್ರತಿಮೆ, ಅಲ್ಲಿಂದ ದ್ವಿಪಥದ ಹಾದಿ, ಮಧ್ಯ ಭಾಗದಲ್ಲಿ ಕಾರಂಜಿ, ಆಸುಪಾಸಿನಲ್ಲಿ ಹೂವಿನ ಗಿಡಗಳು... ಅಲ್ಲಿಂದ ಮುಂದೆ ಬಂದರೆ ಹಿಂಬದಿಯಲ್ಲಿ ಜಲಪಾತ ಕಾಣುವಂತೆ ವಿಶಾಲವಾದ ಥಿಯೇಟರ್. ಇದಕ್ಕೆ ಹೊಂದಿಕೊಂಡಂತೆ ಸುಮಾರು 1.5 ಕಿ.ಮೀ. ಅಂತರದ ಸ್ಕೈವಾಕ್ ಪಥವಿರಲಿದೆ.
21 ಬಗೆಯ ವಿಶೇಷ ವಿನ್ಯಾಸದಲ್ಲಿ ಅಭಿವೃದ್ಧಿ
ಎನರ್ಜಿ ಪಾರ್ಕ್ ಸೋಲಾರ್ ಬೆಂಬಲಿತವಾಗಿದ್ದು, ಬೋನ್ಸಾಯ್ ಗಾರ್ಡನ್, ಆರ್ಕಿಡ್ ಒಳಗೊಂಡ ವನ, ನಕ್ಷತ್ರ ಆಕಾರದ ಉದ್ಯಾನ, ಬಿದಿರು ವನ, ಅಪರೂಪದ ಸಸ್ಯಗಳ ಟ್ರೀ ಪಾರ್ಕ್, ಸೋಲಿಗರ ಬದುಕು ತೋರುವ ಟ್ರೈಬಲ್ ಪಾರ್ಕ್, ಮ್ಯೂಸಿಯಂ ಸೇರಿದಂತೆ 21 ಬಗೆಯ ವಿಶೇಷ ವಿನ್ಯಾಸದ ಕಲ್ಪನೆಯಲ್ಲಿ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಈ ಯೋಜನೆಯಡಿ ಮೊದಲ ಹಂತದ ಕಾಮಗಾರಿ ನಡೆಸಲು ಸರ್ಕಾರ 3.5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಿದ್ದು, ಇದರಲ್ಲಿ ಥಿಯೇಟರ್, ಆಕರ್ಷಕ ದ್ವಾರ ಹಾಗೂ ಫುಡ್ ಪಾರ್ಕ್ ಅಭಿವೃದ್ಧಿ ಮಾಡಲಿದ್ದಾರೆ. ಈ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಅವರು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದು, ಅಂದುಕೊಂಡಂತೆ ನೆರವೇರಿದರೆ ಇನ್ನು ನಾಲ್ಕೈದು ವರ್ಷದಲ್ಲಿ ಭರಚುಕ್ಕಿ ಜಲಪಾತ ಪ್ರದೇಶ ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗುವುದು ಖಚಿತ.
ಕಣ್ತುಂಬಿಕೊಳ್ಳಿ ಭರಚುಕ್ಕಿ- ಗಗನಚುಕ್ಕಿಗಳ ನೃತ್ಯವೈಭವ!
ರೋಮಾಂಚನಕಾರಿ ಅನುಭವ ನೀಡುವ ಜಲಪಾತ
ಶಿವನಸಮುದ್ರಕ್ಕೆ ಬರುವ ಪ್ರವಾಸಿಗರು ಭರಚುಕ್ಕಿಯತ್ತ ಹೆಜ್ಜೆಹಾಕುತ್ತಿದ್ದರು. ಅಪರಿಚಿತವಾಗಿಯೇ ಉಳಿದಿದ್ದ ಜಲಪಾತವನ್ನು 2007ರಲ್ಲಿ ರಾಜ್ಯ ಸರ್ಕಾರ ಭರಚುಕ್ಕಿಯಲ್ಲಿ ಜಲಪಾತೋತ್ಸವ ಮಾಡುವ ಮೂಲಕ ಎಲ್ಲರಿಗೆ ಪರಿಚಯಿಸುವ ಕೆಲಸ ಮಾಡಲಾಯಿತು. 100 ಅಡಿ ಮೇಲ್ಭಾಗದಿಂದ ಕರ್ರಗಿನ ಹೆಬ್ಬಂಡೆಗಳ ಮೇಲೆ ಶ್ವೇತಧಾರೆಯಾಗಿ ನೀರು ಹರಿಯುವುದನ್ನು ನೋಡುವುದೇ ರೋಮಾಂಚನಕಾರಿ ಅನುಭವ.
ಇತ್ತೀಚೆಗೆ ಇಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದ್ದು, ವೀಕ್ಷಣಾ ಗೋಪುರ, ಜಲಪಾತದ ಕೆಳಭಾಗದವರೆಗೂ ಮೆಟ್ಟಿಲು ನಿರ್ಮಾಣ ಸೇರಿದಂತೆ ನಾನಾ ಕಾಮಗಾರಿಗಳನ್ನು ಮಾಡಲಾಗಿದೆ. ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಈಗೀಗ ವರ್ಷಕ್ಕೆ ಸುಮಾರು ಒಂದು ಲಕ್ಷದಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.
100 ಕೋಟಿಯಲ್ಲಿ ಅಭಿವೃದ್ಧಿ ಸಾಧ್ಯನಾ?
ಭರಚುಕ್ಕಿ ಜಲಪಾತ ಪ್ರದೇಶವು ಸುಮಾರು 100 ಎಕರೆ ಪ್ರದೇಶದಲ್ಲಿ ಜೀವ ವೈವಿಧ್ಯತೆ ತಾಣವಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಎಲ್ಲ 21 ಬಗೆಯ ಪರಿಕಲ್ಪನೆಯ ತಾಣಗಳನ್ನು ಇಲ್ಲಿ ಅಭಿವೃದ್ಧಿಗೊಳಿಸುವುದು ಅಷ್ಟು ಸುಲಭವಲ್ಲ. ಇದನ್ನು ಅನುಷ್ಠಾನಗೊಳಿಸಲು ಕನಿಷ್ಠ 100 ಕೋಟಿ ರೂ. ಅನುದಾನದ ಅಗತ್ಯವಿದೆ. ಹೀಗಾಗಿ ಇದು ಸಾಧ್ಯವಾಗುತ್ತದೆಯಾ ಎಂಬುದನ್ನು ಕಾದು ನೋಡಬೇಕಾಗಿದೆ.