ಗುಂಡ್ಲುಪೇಟೆಯಲ್ಲಿ ದುರ್ವಾಸನೆ ಬೀರುತ್ತಿರುವ ಕಾಡುಹಂದಿ ಕಳೇಬರ!
ಗುಂಡ್ಲುಪೇಟೆ, ಜನವರಿ 21: ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಗ್ರಾಮೀಣ ರಸ್ತೆಯಲ್ಲಿ ಪರಸ್ಪರ ಕಾದಾಟದಲ್ಲಿ ಎರಡು ಕಾಡುಹಂದಿಗಳು ಸಾವಿಗೀಡಾಗಿದ್ದು ಅದು ಕೊಳೆತು ತೀವ್ರ ದುರ್ವಾಸನೆ ಬೀರುತ್ತಿದ್ದರೂ ಅದನ್ನು ತೆರವುಗೊಳಿಸದ ಕಾರಣ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಂಡೀಪುರ ಹುಲಿಯೋಜನೆಯ ವ್ಯಾಪ್ತಿಯ ಮಂಗಲ ಗ್ರಾಮದಿಂದ ಕಣಿಯನಪುರಕ್ಕೆ ಹೋಗುವ ರಸ್ತೆಯಲ್ಲಿ ಕಳೆದ ಮೂರು ದಿನಗಳಿಂದ ಎರಡು ಕಾಡುಹಂದಿಗಳ ಮೃತದೇಹ ಕೊಳೆಯುತ್ತಾ ಬಿದ್ದಿದ್ದು, ಇದನ್ನು ತೆರವುಗೊಳಿಸದ ಕಾರಣದಿಂದ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಓಡಾಡಿದರೆ, ಅಲ್ಲೇ ವಾಸಿಸುವವರ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಇವುಗಳ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರಣದಿಂದ ದಿನದಿಂದ ದಿನಕ್ಕೆ ಕೊಳೆಯುತ್ತಾ ದುರ್ವಾಸನೆ ಬೀರುವುದು ಜಾಸ್ತಿಯಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಹಂದಿಗಳ ಮೃತದೇಹವನ್ನು ತೆರವುಗೊಳಿಸಿ ಹೂತು ಹಾಕುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.