ಬಂಡೀಪುರದಲ್ಲಿ ಜನರ ಸೆಲ್ಫಿ ಗೀಳಿಗೆ ರೊಚ್ಚಿಗೇಳುತ್ತಿವೆ ವನ್ಯಜೀವಿಗಳು
ಚಾಮರಾಜನಗರ, ಮೇ 20: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ಪ್ರಾಣಿಗಳನ್ನು ನೋಡುವುದಕ್ಕಾಗಿ ಪ್ರಯಾಣಿಕರು ಸಂತಸದಿಂದಲೇ ಕಿಲೋಮೀಟರ್ ಗಟ್ಟಲೇ ದೂರಕ್ಕೆ ಪ್ರಯಾಣಿಸುತ್ತಾರೆ.
ಆದರೆ ರಸ್ತೆಯಲ್ಲಿಯೇ ತಮ್ಮ ವಾಹನಗಳನ್ನು ನಿಲ್ಲಿಸಿ, ಅಪಾಯವನ್ನು ಲೆಕ್ಕಿಸದೆ ಪ್ರಾಣಿಗಳಿಗೂ ತೊಂದರೆಯಾಗುವಂತೆ ಸೆಲ್ಫಿಯನ್ನು ತೆಗೆದುಕೊಳ್ಳಲು ಮತ್ತು ಫೋಟೋ ಕ್ಲಿಕ್ಕಿಸಲು ಮುಂದಾಗುತ್ತಿರುವುದು ಅವುಗಳಿಗೆ ಕಿರಿಕಿರಿಯುಂಟು ಮಾಡುತ್ತಿದೆ.
ಬಂಡೀಪುರದ ಮೇಲುಕಾಮನಹಳ್ಳಿಯಲ್ಲಿ ಸಫಾರಿಗೆ ಸಿದ್ಧತೆ ಆರಂಭ
ಹೌದು, ಹೆದ್ದಾರಿಯ ಮಧ್ಯೆ ವಾಹನಗಳನ್ನು ನಿಲ್ಲಿಸಬಾರದು. ಪ್ಲಾಸ್ಟಿಕ್ ಎಸೆಯಬಾರದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಅಭಯಾರಣ್ಯದ ಪ್ರವೇಶದ್ವಾರದಲ್ಲಿಯೇ ವಾಹನ ಸವಾರರಿಗೆ ಮನವರಿಕೆ ಮಾಡುತ್ತಿದ್ದರೂ, ಕೆಲವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಅಭಯಾರಣ್ಯದಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ಸಂಚಾರ ಮಾಡಬೇಕಾದರೆ ಪಾಲಿಸಬೇಕಾದ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಅಲ್ಲದೇ ಮಾರ್ಗಮಧ್ಯೆ ಸಿಗುವ ಪ್ರಾಣಿಗಳನ್ನು ನೋಡಲು ತಮ್ಮ ವಾಹನದಿಂದ ಇಳಿದು ಫೋಟೋಗಳನ್ನು ತೆಗೆಯುವುದು, ಜಿಂಕೆಗಳಿಗೆ ತಿಂಡಿ ನೀಡುವುದನ್ನು ಕರಗತ ಮಾಡಿಕೊಂಡಿದ್ದಾರೆ.
ಬಂಡೀಪುರದಲ್ಲಿ ಗಂಧದ ಮರ ಕಳ್ಳರ ಮೇಲೆ ಫೈರಿಂಗ್: ಮೂವರ ಬಂಧನ
ಹುಲಿ ಯೋಜನೆಯ ಅರಣ್ಯ ಪ್ರದೇಶದಲ್ಲಿ ತಮಿಳುನಾಡಿನ ಊಟಿ ಹಾಗೂ ಕೇರಳಕ್ಕೆ ಹೋಗುವ ಎರಡು ರಾಷ್ಟ್ರೀಯ ಹೆದ್ದಾರಿಗಳ ಚೆಕ್ ಪೋಸ್ಟ್ ಗಳಿಂದ ಕರ್ನಾಟಕದ ಗಡಿಯವರೆಗೆ ಸುಮಾರು 20 ಕಿಲೋಮೀಟರ್ ರಸ್ತೆ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿದೆ. ಈ ರಸ್ತೆಗಳಲ್ಲಿ ಪ್ರತಿದಿನವೂ ಸಾವಿರಾರು ವಾಹನಗಳು ಸಂಚಾರ ನಡೆಸುತ್ತದೆ. ರಸ್ತೆಯ ಮಧ್ಯೆ ಸಾಮಾನ್ಯವಾಗಿ ಸಾರಂಗ, ಕರಡಿ, ನವಿಲು, ಕಾಡೆಮ್ಮೆ, ಕೆಲವೊಮ್ಮೆ ಹುಲಿ, ಚಿರತೆಗಳು ಕಾಣಸಿಗುತ್ತವೆ.
ವನ್ಯಜೀವಿಯನ್ನು ಕಂಡೊಡನೆ ವಾಹನವನ್ನು ನಿಲ್ಲಿಸುವ ಪ್ರವಾಸಿಗರು ಅವುಗಳ ಸಮೀಪಕ್ಕೆ ತೆರಳಿ ಫೋಟೊ ತೆಗೆಯುವುದು, ಶಿಳ್ಳೆ ಹೊಡೆಯುವುದು, ದೊಡ್ಡ ದ್ವನಿಯಲ್ಲಿ ಕಿರುಚುವುದನ್ನು ಮಾಡುವ ಮೂಲಕ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.
ಕಾಡು ಪ್ರಾಣಿಗಳ ಹಾವಳಿ, ಗಣಿಗಾರಿಕೆಯಿಂದ ತತ್ತರಿಸಿದ ಬಂಡೀಪುರ ಕಾಡಂಚಿನ ರೈತರು
ಪ್ರವಾಸಿಗರ ಈ ಹುಚ್ಚಾಟಕ್ಕೆ ಕೆರಳುವ ವನ್ಯಜೀವಿಗಳು ಜನರು ಹಾಗೂ ವಾಹನಗಳ ಮೇಲೆ ದಾಳಿ ನಡೆಸಲು ಮುಂದಾಗುತ್ತಿದೆ. ಕೀಟಲೆ ಮಾಡಿದವರು ಯಾವುದೇ ತೊಂದರೆ ಇಲ್ಲದೆ ಕ್ಷಣಾರ್ಧದಲ್ಲಿ ಪಾರಾದರೂ, ಹಿಂದೆ ಬರುವ ಅಮಾಯಕ ವಾಹನ ಸವಾರರು ಕ್ರೋಧಗೊಂಡ ಪ್ರಾಣಿಗಳ ದಾಳಿಗೆ ಒಳಗಾಗುತ್ತಿದ್ದಾರೆ.
ಇತ್ತೀಚೆಗೆ ಮೂಲೆಹೊಳೆ ರಸ್ತೆಯಲ್ಲಿ ಗುಂಪಿನಲ್ಲಿ ಸಾಗುತ್ತಿದ್ದ ಮರಿಯಾನೆಯ ರಕ್ಷಣೆಗಾಗಿ ಹೆಣ್ಣಾನೆಯೊಂದು ಚಿಕ್ಕಮಗಳೂರು ಕಲ್ಲಿಕೋಟೆಗೆ ತೆರಳುತ್ತಿದ್ದ ಸಾರಿಗೆ ಬಸ್ ಮೇಲೆ ದಾಳಿ ಮಾಡಿದ ಪ್ರಕರಣ ಕೂಡ ನಡೆದಿತ್ತು. ಆದ್ದರಿಂದ ಇವುಗಳ ನಿಯಂತ್ರಣಕ್ಕೆ ಹೆದ್ದಾರಿಯಲ್ಲಿ ಅರಣ್ಯ ಇಲಾಖೆ ಹೆಚ್ಚಿನ ಗಸ್ತು ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.