ಬಿಎಸ್ಪಿ ಉಚ್ಛಾಟಿತ ಎನ್.ಮಹೇಶ್ಗೆ ಬಿಜೆಪಿಯತ್ತ ಒಲವೇಕೆ?
ಚಾಮರಾಜನರ, ಜನವರಿ 12: ಕರ್ನಾಟಕದಲ್ಲಿ ಬಿಎಸ್ಪಿ ಪಕ್ಷದ ಏಕೈಕ ಶಾಸಕ ಎನ್. ಮಹೇಶ್. ಸಚಿವರಾಗಿಯೂ ರಾಜ್ಯದಲ್ಲಿ ಗಮನಸೆಳೆದಿದ್ದ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆದರೆ, ಎನ್. ಮಹೇಶ್ ಈಗ ಸುದ್ದಿಯಲ್ಲಿದ್ದಾರೆ.
ಬಿಎಸ್ಪಿಯಿಂದ ಉಚ್ಛಾಟನೆಗೊಂಡಿರುವ ಎನ್. ಮಹೇಶ್ ಬಿಜೆಪಿಯತ್ತ ಒಲವು ತೋರುತ್ತಿರುವುದು ಅವರ ವಿರೋಧಿಗಳಲ್ಲಿ ಸಂಚಲನವನ್ನುಂಟು ಮಾಡಿದೆ. ಜತೆಗೆ ಕುತೂಹಲವನ್ನು ಕೆರಳಿಸಿದೆ. ಎನ್. ಮಹೇಶ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ರಾಜ್ಯ ರಾಜಕೀಯದಲ್ಲಿ ಹಲವಾರು ದಿನಗಳಿಂದ ಹಬ್ಬಿದೆ.
ಬಿಜೆಪಿ ಸೇರಲಿದ್ದಾರೆ ಬಿಎಸ್ಪಿ ಶಾಸಕ ಎನ್. ಮಹೇಶ್?
ಬಿಎಸ್ಪಿ ಸಿದ್ಧಾಂತ ಹೊಂದಿದ್ದ ಅವರು ಬಿಜೆಪಿ ಸಿದ್ಧಾಂತಕ್ಕೆ ಹೊಂದಿಕೆಯಾಗುತ್ತಾರಾ? ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡತೊಡಗಿದೆ. ಆದರೆ, ಅವರು ಅಧಿಕೃತವಾಗಿ ಬಿಜೆಪಿಗೆ ಸೇರುವ ಕುರಿತಂತೆ ಯಾವುದೇ ಮಾಹಿತಿಗಳು ಹೊರಬರದಿದ್ದರೂ ಮಾನಸಿಕವಾಗಿ ಅವರು ಬಿಜೆಪಿ ಕಡೆಗೆ ವಾಲುತ್ತಿದ್ದಾರೆ ಎಂಬುದು ಅವರ ನಡವಳಿಕೆ ಮತ್ತು ಹೇಳಿಕೆಯಿಂದ ಗೊತ್ತಾಗುತ್ತಿದೆ.
ಬಿಎಸ್ಪಿ ಕಾರ್ಯಕರ್ತರ ಮೇಲೆ ಹಲ್ಲೆ: ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಬೆಂಬಲಿಗರ ಬಂಧನ
ರಾಜ್ಯದಲ್ಲಿ ಬಿಎಸ್ಪಿಗೊಂದು ಹೊಸ ದಿಕ್ಕು ನೀಡುವ ಸಲುವಾಗಿ ಹಲವು ವರ್ಷಗಳ ಕಾಲ ಸತತವಾಗಿ ಪಕ್ಷದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಎನ್. ಮಹೇಶ್ ಹಲವು ಬಾರಿ ಚುನಾವಣೆಗೆ ನಿಂತು ಸೋತಿದ್ದರು. ಕೊಳ್ಳೇಗಾಲ ಕ್ಷೇತ್ರದಲ್ಲಿ ಮಾಡಿದ್ದ ಸಾಮಾಜಿಕ ಚಟುವಟಿಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಗೆಲ್ಲುವಂತೆ ಮಾಡಿತ್ತು.
ಮೈಸೂರು ಹೈಕಮಾಂಡ್; ಜಿಟಿಡಿಗೆ ಸಾ. ರಾ. ಮಹೇಶ್ ಪ್ರತಿಕ್ರಿಯೆ!
ಬಿಜೆಪಿ ಸರ್ಕಾರ ರಚನೆಯಲ್ಲಿ ಪಾತ್ರ?
ಎನ್. ಮಹೇಶ್ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಲ್ಪ ಸಮಯದವರೆಗೆ ಸಚಿವರಾಗಿ ಕಾರ್ಯನಿರ್ವಹಿಸಿದರು. ತದನಂತರ ಮಾಯಾವತಿ ಅವರ ಸೂಚನೆಯಂತೆ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದರು. ಬಳಿಕ ಅವರು ಸಂಪೂರ್ಣ ಮೌನಕ್ಕೆ ಶರಣಾಗಿ ಬಿಟ್ಟರು. ಆದರೆ, ಇದೀಗ ಅವರು ಮೌನವಾಗಿರಲಿಲ್ಲ. ಸಮ್ಮಿಶ್ರ ಸರ್ಕಾರ ಪತನವಾಗಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರಲು ಅವರ ಬೆಂಬಲ ಇತ್ತು ಎಂಬುದು ಗೊತ್ತಾಗುತ್ತಿದೆ. ಅದು ಏನೆಂದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಎನ್. ಮಹೇಶ್, ಬಾಹ್ಯ ಬೆಂಬಲ ನೀಡಿದ್ದರು. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸದನಕ್ಕೆ ಗೈರು ಹಾಜರಾಗುವ ಮೂಲಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಅವರು ಕೂಡ ಪರೋಕ್ಷವಾಗಿ ಸಹಕರಿಸಿದ್ದರಂತೆ.
ಸಚಿವ ಸ್ಥಾನ ಪಡೆದು ಬಿಜೆಪಿ ಸೇರಿ
ಮಹೇಶ್ ಅವರಿಗೂ ಬಿಜೆಪಿಗೆ ಸೇರ್ಪಡೆಯಾಗುವ ಮನಸ್ಸಿದೆ. ಆದರೆ, ಅವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು ಸಚಿವ ಸ್ಥಾನ ನೀಡಿದರೆ ಪಕ್ಷಕ್ಕೆ ಸೇರ್ಪಡೆಯಾಗುವ ಚಿಂತನೆಯಲ್ಲಿದ್ದಾರೆ. ಬಿಳಿಗಿರಿರಂಗನಬೆಟ್ಟದಲ್ಲಿ ಮಾತನಾಡಿದ್ದ ಅವರು, "ಬಿಜೆಪಿ ಸೇರ್ಪಡೆ ವಿಚಾರ ನಾನೊಬ್ಬನೆ ತೀರ್ಮಾನಿಸುತ್ತಿಲ್ಲ. ಬಿಜೆಪಿ ಸೇರಬೇಕೆಂಬುದು ರಾಜ್ಯಾದ್ಯಂತ ಇರುವ ತಮ್ಮ ಅಭಿಮಾನಿ ಕಾರ್ಯಕರ್ತರ ನಿರೀಕ್ಷೆಯಾಗಿದೆ. ಸಚಿವ ಸ್ಥಾನ ತೆಗೆದುಕೊಂಡು ಬಿಜೆಪಿ ಸೇರಿ ಅಂತಿದ್ದಾರೆ. ನನ್ನ ಕ್ಷೇತ್ರದ ಹಾಗೂ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ತೀರ್ಮಾನ ಕೈಗೊಳ್ಳಬೇಕೆಂಬುದು ನಮ್ಮ ಕಾರ್ಯಕರ್ತರ ಅಪೇಕ್ಷೆಯಾಗಿದೆ" ಎಂದು ಹೇಳಿದ್ದರು. ಈ ಮೂಲಕ ಸಚಿವ ಸ್ಥಾನದ ಬೇಡಿಕೆಯನ್ನು ಬಹಿರಂಗವಾಗಿ ಬಿಜೆಪಿ ಮುಂದಿಟ್ಟಿದ್ದರು.
ಮಹೇಶ್ರನ್ನು ಒಪ್ಪಿಕೊಳ್ತಾರಾ ನಾಯಕರು?
ಚಾಮರಾಜನಗರದ ಸ್ಥಳೀಯ ನಾಯಕರು ಮಹೇಶ್ ಅವರನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿದ್ದಾರಾ? ಎಂಬುದು ಅಷ್ಟೇ ಮುಖ್ಯವಾಗಿದೆ. ಬಿಜೆಪಿಗೆ ಮುಖ್ಯವಾಗಿ ಕಾಂಗ್ರೆಸ್ ವಿರುದ್ಧ ಜಿಲ್ಲೆಯಲ್ಲಿ ಒಂದೊಳ್ಳೆಯ ನಾಯಕತ್ವದ ತಂಡವನ್ನು ಕಟ್ಟುವ ಅಗತ್ಯತೆಯಿದೆ ಹೀಗಾಗಿ ಅವರು ಏನು ಬೇಕಾದರೂ ಆಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಇನ್ನು ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಸುಂದರ್ ಹೇಳುವ ಪ್ರಕಾರ, "ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಅವರು ಬಹುಜನ ಸಮಾಜ ಪಕ್ಷದಿಂದ ಉಚ್ಛಾಟಿತರಾಗಿರುವುದರಿಂದ ಬಿಜೆಪಿಗೆ ಸೇರ್ಪಡೆಯಾಗಲು ಕೆಲವು ತಾಂತ್ರಿಕ ತೊಡಕುಗಳು ಉಂಟಾಗಬಹುದು. ಹಾಗಾಗಿ ಅದೆಲ್ಲವನ್ನು ನಿವಾರಿಸಿಕೊಂಡು ಬಿಜೆಪಿ ಸೇರುವ ನಿರೀಕ್ಷೆ ಇದೆ. ಅವರ ಬೆಂಬಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಸೇರ್ಪಡೆಯಾಗುವುದು ಕೂಡ ಅವರ ಉದ್ದೇಶವಾಗಿದೆ".
ಒಪ್ಪಿಗೆ ಇಲ್ಲದೆ ಫೋಟೋ ಹಾಕಲು ಸಾಧ್ಯವೆ!
ಈ ನಡುವೆ ಎನ್. ಮಹೇಶ್ ಅವರ ಫೋಟೋ ಸೋಮವಾರ ನಡೆದ ಬಿಜೆಪಿ ಜನಸೇವಕ್ ಸಮಾವೇಶದ ಫ್ಲೆಕ್ಸ್ನಲ್ಲಿ ಕಾಣಿಸಿಕೊಂಡಿರುವುದು ಅವರ ನಡೆ ಬಿಜೆಪಿ ಕಡೆಗಿದೆ ಎಂಬುದನ್ನು ಸಾರಿ ಹೇಳುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಆರ್. ಅಶೋಕ್, ಎಸ್. ಟಿ. ಸೋಮಶೇಖರ್, ಹಾಗೂ ಸಂಸದ ಪ್ರತಾಪ್ ಸಿಂಹ ಮೊದಲಾದವರು ಭಾಗವಹಿಸುತ್ತಿರುವುದಕ್ಕೆ ಸ್ವಾಗತ ಕೋರುವ ಜಿಲ್ಲಾ ಬಿಜೆಪಿಯ ಫ್ಲೆಕ್ಸ್ ಹಾಗೂ ಪೋಸ್ಟರ್ಗಳಲ್ಲಿ ಎನ್. ಮಹೇಶ್ ಅವರ ಫೋಟೋ ಹಾಕಲಾಗಿತ್ತು. ಇದು ಮಹೇಶ್ ಅವರ ಒಪ್ಪಿಗೆ ಇಲ್ಲದೆ ಹಾಕಲು ಸಾಧ್ಯವೆ? ಎಂಬ ಪ್ರಶ್ನೆಯೂ ಎಲ್ಲರನ್ನು ಕಾಡುತ್ತಿದೆ.
ಮಹೇಶ್ರವರ ರಾಜಕೀಯ ಒಳಮರ್ಮವೇನು?
ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಸುಂದರ್ ಮಾತನಾಡಿ, "ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಪರೋಕ್ಷವಾಗಿ ಬೆಂಬಲ ನೀಡಿದ್ದರು. ಅಲ್ಲದೆ ಕೊಳ್ಳೇಗಾಲ ನಗರಸಭೆಯಲ್ಲಿ ಎನ್.ಮಹೇಶ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದ್ದೇವೆ. ಅಲ್ಲದೆ ಈಗ ಜಿಲ್ಲೆಯಲ್ಲಿ ಚುನಾವಣೆ ನಡೆದಿರುವ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ಹಿಡಿಯಲು ಎನ್.ಮಹೇಶ್ ಅವರ ಸಹಕಾರ ಅಗತ್ಯವಾಗಿದೆ. ಇನ್ನೂ ಕೆಲವು ಪಂಚಾಯ್ತಿಗಳಲ್ಲಿ ಅವರ ಬೆಂಬಲಿಗರಿಗೆ ನಮ್ಮ ಸಹಕಾರವೂ ಅಗತ್ಯವಾಗಿದೆ. ಹಾಗಾಗಿ ಜೊತೆಜೊತೆಯಾಗಿ ಹೋಗುತ್ತಿರುವುದರಿಂದ ಎನ್.ಮಹೇಶ್ ಅವರ ಫೋಟೋ ಹಾಕಿರುವುದಾಗಿ" ಹೇಳಿದ್ದಾರೆ. ಆದರೆ, ಇದರ ಒಳಮರ್ಮ ಏನೆಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.