ಬಂಡೀಪುರದಲ್ಲಿ ಚಿತ್ರೀಕರಣಕ್ಕೆ ವಿರೋಧ ಕೇಳಿಬಂದಿದ್ದೇಕೆ?
ಚಾಮರಾಜನಗರ, ಜನವರಿ 30: ಡಿಸ್ಕವರಿ ಚಾನೆಲ್ನ ಜನಪ್ರಿಯ ಟಿ.ವಿ ಶೋ ಮ್ಯಾನ್ ವರ್ಸಸ್ ವೈಲ್ಡ್ನ ಚಿತ್ರೀಕರಣ ಮೊನ್ನೆಯಷ್ಟೇ ಮುಗಿದಿದೆ. ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ಈ ಚಿತ್ರೀಕರಣ ನಡೆದ ಬೆನ್ನಲ್ಲೇ ಕೆಲವು ಪರಿಸರಪ್ರೇಮಿಗಳು ಬಂಡೀಪುರದಲ್ಲಿ ಚಿತ್ರೀಕರಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಕಾಲ ಚಿತ್ರೀಕರಣಕ್ಕೆ ಹಲವು ನಿಬಂಧನೆಗಳೊಂದಿಗೆ ಅನುಮತಿ ಪಡೆದಿದ್ದರೂ ಬಂಡೀಪುರ ಅರಣ್ಯದಲ್ಲಿ ಚಿತ್ರೀಕರಣ ನಡೆಸಲು ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಇಷ್ಟಕ್ಕೂ ಪರಿಸರವಾದಿಗಳು ಚಿತ್ರೀಕರಣಕ್ಕೆ ವಿರೋಧ ವ್ಯಕ್ತಪಡಿಸಿದ್ದೇಕೆ? ಇಲ್ಲಿದೆ ಅದರ ವಿವರ...
ವಿರೋಧಕ್ಕೆ ಕಾರಣವೇನು?
ಹಿಂದೆ ಬಂಡೀಪುರ ಹಲವು ಅನಾಹುತಗಳಿಗೆ ಸಿಲುಕಿ ನಲುಗಿದೆ. ಇದೀಗ ಬೇಸಿಗೆ ಕಾಲವಾಗಿರುವುದರಿಂದ ಅವಘಡಗಳು ಬಹುಬೇಗ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಜತೆಗೆ ಬಂಡೀಪುರ ಅರಣ್ಯ ಪ್ರದೇಶವಾದ ಮದ್ದೂರು, ಮೂಳೆಹೊಳೆ, ಕಲ್ಕೆರೆ ವಲಯಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದ್ದು, ಇವು ಸೂಕ್ಷ್ಮ ಪ್ರದೇಶಗಳಾಗಿರುವುದರಿಂದ ವನ್ಯಪ್ರಾಣಿಗಳ ದೈನಂದಿನ ಬದುಕಿಗೆ ತೊಂದರೆಯಾಗುತ್ತದೆ ಎಂಬ ಆರೋಪ ಪರಿಸರವಾದಿಗಳದ್ದು.
ಬಂಡೀಪುರದಲ್ಲಿ ತಲೈವಾ: ಫೋಟೊ ಹಂಚಿಕೊಂಡ ಬಿಯರ್ ಗ್ರಿಲ್ಸ್
ಹುಲಿ ಹಾಲಿನ ಮೇವು ಚಿತ್ರೀಕರಣ
ಈ ಹಿಂದೆ ಹುಲಿ ಹಾಲಿನ ಮೇವು ಸಿನಿಮಾವನ್ನು ಚಿತ್ರೀಕರಿಸಲು ಅಂದಿನ ಗುಂಡೂರಾವ್ ಸರ್ಕಾರ ಅನುಮತಿ ನೀಡಿತ್ತು. ಆದರೆ ಇದಕ್ಕೆ ಪರಿಸರವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಅನುಮತಿಯನ್ನು ಹಿಂಪಡೆಯಲಾಗಿತ್ತು. ಆ ನಂತರ ಯಾವುದೇ ಸಿನಿಮಾಗಳಿಗೆ ಚಿತ್ರೀಕರಣಕ್ಕೆ ಅವಕಾಶ ನೀಡಿರಲಿಲ್ಲ. ಆದರೆ ಮೊನ್ನೆ ಮ್ಯಾನ್ ವರ್ಸಸ್ ವೈಲ್ಡ್ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ.
ಚಿತ್ರೀಕರಣಕ್ಕೆ ಅನುಮತಿ ನೀಡಿದ್ದೇಕೆ?
ರಾಜ್ಯ ಪರಿಸರ ತಜ್ಞ ಜೋಸೆಫ್ ಹೂವಾರ ಅವರು ಮಾತನಾಡಿ, "ಬಂಡೀಪುರ ವ್ಯಾಪ್ತಿಯಲ್ಲಿ ಇದೀಗ ಬೇಸಿಗೆ ಸಮಯವಾಗಿದ್ದು, ಈಗ ಚಿತ್ರೀಕರಣಕ್ಕೆ ಅನುಮತಿ ನೀಡುವ ಅವಶ್ಯಕತೆ ಏನಿತ್ತು" ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನದಿಂದ ಬೇಸಿಗೆ ಸಮಯದಲ್ಲಿ ಅಭಯಾರಣ್ಯದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಕಳೆದ ವರ್ಷ ಇದೇ ವೇಳೆ ಬಂಡೀಪುರದಲ್ಲಿ ಬೆಂಕಿ ಅನಾಹುತದಿಂದ 25 ಸಾವಿರ ಎಕರೆ ಅರಣ್ಯ ಭೂಮಿ ಭಸ್ಮವಾಗಿತ್ತು. ಹೀಗಿರುವಾಗ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದೆಷ್ಟು ಸರಿ ಎಂದು ಕೇಳಿದ್ದಾರೆ.
ರಜನಿಕಾಂತ್ ಬೆನ್ನಲ್ಲೇ ನಟ ಅಕ್ಷಯ ಕುಮಾರ್ ಬಂಡೀಪುರಕ್ಕೆ ಭೇಟಿ
"ಪ್ರವಾಸೋದ್ಯಮ ನಂತರದ ಆದ್ಯತೆಯಾಗಲಿ"
ಕಳೆದ ವರ್ಷ ಸಂಭವಿಸಿದ ಅಗ್ನಿ ದುರಂತ ಇನ್ನೂ ಕಣ್ಣ ಮುಂದೆಯೇ ಇದೆ. ಈ ಬಾರಿ ಹೇಗಾದರೂ ಕಾಡನ್ನು ರಕ್ಷಿಸಲೇಬೇಕು ಎಂದು ಸಿಬ್ಬಂದಿ ಶ್ರಮ ಪಡುತ್ತಿರುವ ಈ ಸಮಯದಲ್ಲಿ ಚಿತ್ರೀಕರಣ ನಡೆಸುತ್ತಿರುವುದು ಸರಿಯಲ್ಲ. ಮಳೆಗಾಲದಲ್ಲಿ ಬಂದಿದ್ದರೆ ನಮ್ಮ ಅಭ್ಯಂತರವಿರಲಿಲ್ಲ ಎಂದಿರುವ ಅವರು ಕಾಡನ್ನು ಮೊದಲು ಉಳಿಸಿ ಬಳಿಕ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡುವತ್ತ ಸರ್ಕಾರ ಮುಂದಾಗಬೇಕು ಎಂದು ಹೇಳಿದ್ದಾರೆ.