ಬಂಡೀಪುರ ಕಾಡ್ಗಿಚ್ಚು ದುರಂತದ ಕುರಿತು ನೀಡಿದ ತನಿಖಾ ವರದಿಯಲ್ಲೇನಿದೆ?
ಚಾಮರಾಜನಗರ, ಸೆಪ್ಟೆಂಬರ್ 11: ಕಳೆದ ಫೆಬ್ರವರಿಯಲ್ಲಿ ಕಾಡ್ಗಿಚ್ಚಿನಿಂದ ಬಂಡೀಪುರದ ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದ್ದಲ್ಲದೆ, ಜೀವಜಂತುಗಳು ಸಜೀವ ದಹನವಾಗಿದ್ದವು. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಅರಣ್ಯ ಇಲಾಖೆಯಿಂದ ಹಿರಿಯ ಅಧಿಕಾರಿ ಹರಿಕುಮಾರ್ ಝಾರವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಸೂಚನೆ ನೀಡಲಾಗಿತ್ತು.
ಬಂಡೀಪುರದಲ್ಲಿ ಮತ್ತೆ ಬೆಂಕಿ: ನೂರಕ್ಕೂ ಹೆಚ್ಚು ಎಕರೆ ಅರಣ್ಯ ಭಸ್ಮ
ಇದೀಗ ತನಿಖೆ ನಡೆಸಿದ ನಂತರ ವರದಿಯನ್ನು ನೀಡಲಾಗಿದೆ. ಹಾಗಿದ್ದರೆ, ಬಂಡೀಪುರ ಕಾಡ್ಗಿಚ್ಚು ದುರಂತದ ಕುರಿತು ನೀಡಿದ ತನಿಖಾ ವರದಿಯಲ್ಲೇನಿದೆ?
ನಡೆಯದ ಲಂಟಾನಾ ತೆರವು, ಬೆಂಕಿ ರೇಖೆ ನಿರ್ಮಾಣ
ಇದೀಗ ತನಿಖಾ ತಂಡವು ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದ ಅಗ್ನಿ ಅವಘಡಕ್ಕೆ ಅರಣ್ಯಾಧಿಕಾರಿಗಳ ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರವೇ ಕಾರಣ ಎಂಬುದಾಗಿ ವರದಿ ನೀಡಿದೆ. ಆ ಪ್ರಕಾರ ಅರಣ್ಯದಲ್ಲಿ ಕಾಣಿಸಿಕೊಂಡ ಅಗ್ನಿ ದುರಂತಕ್ಕೆ ಬಂಡೀಪುರದ ಸಿಎಫ್ ಅಂಬಾಡಿ ಮಾಧವ್ ನೇರಹೊಣೆಗಾರರಾಗಿದ್ದಾರೆ ಎಂಬುದು ದೃಢಪಟ್ಟಿದ್ದು, ಅಂಬಾಡಿ ಮಾಧವ್ ರವರಿಗೆ ಬೆಂಕಿ ಅವಘಡ ಸಮಯದಲ್ಲಿ ಮುಂಬಡ್ತಿ ಮೇಲೆ ಮೈಸೂರು ವಿಭಾಗಕ್ಕೆ ಸಿಸಿಎಫ್ ಆಗಿ ವರ್ಗಾವಣೆ ಮಾಡಲಾಗಿತ್ತು. ಆದರೂ ಬಂಡೀಪುರದ ಸಿಎಫ್ ಆಗಿ ಹೆಚ್ಚುವರಿ ಹೊಣೆಗಾರಿಕೆ ಪಡೆದ ಅವರು ಭಾರಿ ಪ್ರಮಾಣದಲ್ಲಿ ಕರ್ತವ್ಯ ಲೋಪ ಮತ್ತು ಭ್ರಷ್ಟಾಚಾರ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಅವರು ಸೇವೆಯಿಂದ ನಿವೃತ್ತಿಯಾಗಿದ್ದಾರೆ.
ವರದಿಯಲ್ಲಿ ಅಂಬಾಡಿ ಮಾಧವ್ ಅಭಯಾರಣ್ಯದಲ್ಲಿ ಲಂಟಾನಾ ತೆರವುಗೊಳಿಸದೆ ಹಾಗೂ ಬೆಂಕಿ ರೇಖೆ ನಿರ್ಮಾಣ ಮಾಡದೇ ಇರುವುದರಿಂದ ಅರಣ್ಯದಲ್ಲಿ ಬೆಂಕಿ ತಗುಲಿ ಭಾರಿ ಪ್ರಮಾಣದಲ್ಲಿ ಅರಣ್ಯ ನಾಶವಾಗಲು ಕಾರಣವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಬಂಡೀಪುರ ಅರಣ್ಯದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಆಕಸ್ಮಿಕವಲ್ಲ ಸೇಡು?
ಸರ್ಕಾರಿ ಸವಲತ್ತುಗಳನ್ನು ನೀಡದಂತೆ ಒತ್ತಾಯ
ಈ ಕುರಿತಂತೆ ಮಾಜಿ ವೈಲ್ಡ್ ಲೈಫ್ ವಾರ್ಡನ್ ನವೀನ್ ಕುಮಾರ್ ಅವರು ಮಾತನಾಡಿ, ಹಗರಣ ಹೊತ್ತು ತನಿಖಾ ವರದಿಯನ್ನು ಬಹಿರಂಗಗೊಳಿಸದಂತೆ ಕಟ್ಟೆಚ್ಚರ ವಹಿಸಿದ ಅಂಬಾಡಿ ಮಾಧವ್ ಅವರ ಮೇಲೆ ಕಾನೂನುಕ್ರಮ ಜರುಗಿಸಿ, ನಿವೃತ್ತಿಯ ಸವಲತ್ತುಗಳನ್ನು ಸರ್ಕಾರ ನೀಡಬಾರದು. ಅಲ್ಲದೆ ಅರಣ್ಯ ಇಲಾಖೆಯ ಕಾನೂನಿನಡಿ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸ್ಥಳ ಪರಿಶೀಲನೆಯ ಕೊರತೆಯೇ ಮೂಲ
ರಾಜ್ಯ ಪರಿಸರ ತಜ್ಞ ಜೋಸೆಫ್ ಹೂವಾರ ಮಾತನಾಡಿ, ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಇತಿಹಾಸದಲ್ಲಿ ಕಂಡು ಕೇಳರಿಯದಷ್ಟು ಪ್ರಮಾಣದಲ್ಲಿ ಅರಣ್ಯ ನಾಶವಾಗಿದ್ದು, ಇದಕ್ಕೆ ಆಗಿನ ಸಿ.ಎಫ್ ಅಂಬಾಡಿ ಮಾಧವ್ ರವರ ಕರ್ತವ್ಯ ಲೋಪ ಕಾರಣ ಎನ್ನುವ ಅಂಶ ಇದೀಗ ತನಿಖಾ ವರದಿಯಿಂದ ಬಯಲಾಗಿದೆ. ಸರ್ಕಾರವು ಅರಣ್ಯ ಪ್ರದೇಶದಲ್ಲಿ ಅನುಷ್ಠಾನಕ್ಕೆ ತರುವ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಆಗಾಗ್ಗೆ ಸ್ಥಳ ಪರಿಶೀಲನೆ ಮತ್ತು ವರದಿ ತರಿಸಿಕೊಂಡಿದ್ದರೆ ಇಂತಹ ಅನಾಹುತ ನಡೆಯುತ್ತಿರಲಿಲ್ಲ. ಸರ್ಕಾರ ಅಧಿಕಾರಿಗಳ ಮೇಲೆ ಅರಣ್ಯ ಇಲಾಖೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಬರಡಾದ ಬಂಡೀಪುರದಲ್ಲಿ ಹಸಿರೀಕರಣದ ಕಾರ್ಯ ಆರಂಭ
ಉರಿದು ಹೋದ ನಾಲ್ಕೂವರೆ ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ
ಫೆಬ್ರವರಿಯಲ್ಲಿ ಕಾಣಿಸಿಕೊಂಡ ಬೆಂಕಿ ಭಾರಿ ಪ್ರಮಾಣದಲ್ಲಿ ಹೊತ್ತಿ ಉರಿದಿತ್ತು. ಇದರಿಂದ ಸುಮಾರು ನಾಲ್ಕೂವರೆ ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹೊತ್ತಿ ಉರಿದಿತ್ತು. ಕೊನೆಗೆ ಹೆಲಿಕಾಪ್ಟರ್ ಮೂಲಕ ನೀರನ್ನು ಹಾಯಿಸಿ ಬೆಂಕಿ ನಂದಿಸಲಾಗಿತ್ತು. ಈ ಬೆಂಕಿ ಅನಾಹುತದಿಂದ ಅರಣ್ಯ ನಾಶವಾಗುವುದರೊಂದಿಗೆ ವನ್ಯ ಜೀವಿಗಳು ಬೆಂಕಿಯಲ್ಲಿ ಬೆಂದು ಹೋಗಿದ್ದವು. ಈ ಸಂದರ್ಭ ದೇಗುಲಗಳಲ್ಲಿ ಮಳೆಗಾಗಿ ಜನ ಪ್ರಾರ್ಥನೆ ಸಲ್ಲಿಸಿದ್ದರು. ಬಹುಶಃ ಜನರ ಮತ್ತು ಮೂಕ ಪ್ರಾಣಿಗಳ ರೋಧನೆ ವರುಣನಿಗೆ ಕೇಳಿಸಿತೋ ಏನೋ ಅದೃಷ್ಟವಶಾತ್ ಈ ದುರ್ಘಟನೆ ನಡೆದ ಕೆಲವೇ ದಿನಗಳಲ್ಲಿ ಈ ವ್ಯಾಪ್ತಿಯಲ್ಲಿ ಸ್ವಲ್ಪ ಮಳೆಯಾಗುವುದರೊಂದಿಗೆ ಹೊತ್ತಿ ಉರಿದ ಭೂಮಿ ತಂಪಾಗಿ ಗಿಡಮರಗಳು ಬದುಕುವಂತಾಗಿತ್ತು.
ಅದು ಏನೇ ಇರಲಿ ಇನ್ನು ಮುಂದೆಯಾದರೂ ಬಂಡೀಪುರದಲ್ಲಿ ಇಂತಹ ಭೀಕರ ಅಗ್ನಿ ಅನಾಹುತ ನಡೆಯದಿರಲಿ ಎನ್ನುವುದೇ ಎಲ್ಲರ ಆಶಯ.