ಗುಂಡ್ಲುಪೇಟೆ ಈ ಬಡಾವಣೇಲಿ ಶೌಚಾಲಯವೇ ಇಲ್ಲ, ಇದೇನಾ ಅಭಿವೃದ್ಧಿ?
ಅಭಿವೃದ್ಧಿ ಬಗ್ಗೆ ಗಂಟೆಗಟ್ಟಲೆ ಭಾಷಣ ಕೊರೆಯುವ ಜನಪ್ರತಿನಿಧಿಗಳು ಗುಂಡ್ಲುಪೇಟೆಯ ಹೊಸೂರಿಗೆ ಒಮ್ಮೆ ಭೇಟಿ ಕೊಡಬೇಕು. ಈಗ ಉಪ ಚುನಾವಣೆ ನಡೀತಿದೆಯಲ್ಲಾ ಅಲ್ಲೇ ಸಿಎಂ ಸಹಿತ ಇಡೀ ಸರಕಾರವೇ ಇದೆ ಅಂತೀರಾ? ಹಾಗಿದ್ದರೆ ಈ ವರದಿ ಓದಿ...
"ನಾವು ನೀರಿಲ್ಲದಿದ್ದರೆ ಹೇಗೋ ಸಂಭಾಳಿಸ್ತೀವಿ. ಆದರೆ ಶೌಚಾಲಯ ಇಲ್ಲದಿದ್ದರೆ ಹೇಗೆ? ನಮ್ಮ ಮನೆಯಲ್ಲಿ ಶೌಚಾಲಯ ಇಲ್ಲ ಅನ್ನೋ ಕಾರಣಕ್ಕೆ ರಜಾ ಇದ್ದಾಗಲೂ ಮಗಳು ಮನೆಗೆ ಬರಲ್ಲ. ಮಹಿಳೆಯಾಗಿ ನಮ್ಮ ಸಮಸ್ಯೆ ನೀವು ಅರ್ಥ ಮಾಡಿಕೊಳ್ತೀರಿ ಅಂದುಕೊಳ್ತೀನಿ" -ಗುಂಡ್ಲುಪೇಟೆಯ ಮತದಾರರಾದ ರತ್ನಮ್ಮ ಅವರು ಆಡಿದ ಮಾತುಗಳಿವು.
ಗುಂಡ್ಲುಪೇಟೆಯ ಹೂಸೂರಿನವರಾದ ಅವರು, ಉಳಿದ ಮಹಿಳೆಯರಂತೆ ಏಪ್ರಿಲ್ 9ರಂದು ಉಪಚುನಾವಣೆಗೆ ಮತ ಹಾಕಲು ಸಿದ್ಧರಾಗಿದ್ದಾರೆ. ಆದರೆ ಅವರ ಏಕೈಕ ಬೇಡಿಕೆ ಅಂದರೆ, ಉತ್ತಮ ಶೌಚಾಲಯ ವ್ಯವಸ್ಥೆ. ಸಚಿವ ಖಾದರ್ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಮಗ ಯತೀಂದ್ರ ಇಲ್ಲಿ ಮತ ಯಾಚನೆಗೆ ಬಂದಾಗ ಆರತಿ ಮಾಡಿ, ಸ್ವಾಗತಿಸಲಾಯಿತು. ಆದರೆ ತಮಗೇನು ಬೇಕು ಅನ್ನೋ ಬಗ್ಗೆ ಒಂದು ಮಾತಾಡಲಿಲ್ಲ. ಅಲ್ಲಿಂದ ಆ ಮೂವರು ಹೊರಟ ನಂತರ ಆ ಮಹಿಳೆ ಜತೆಗೆ ಮಾತನಾಡಿದ್ವಿ. ಮತದಾನದ ಬಗ್ಗೆ ಅವರ ಆಲೋಚನೆ ಏನು ಅಂತ ಕೇಳಿದ್ವಿ.[ಉಪಚುನಾವಣೆ ಕಾವಿರುವ ಗುಂಡ್ಲುಪೇಟೆಯಲ್ಲಿ ಒಂದೇ ತಿಂಗಳು 3ರೈತರ ಆತ್ಮಹತ್ಯೆ]
"ಹಳ್ಳಿಯಲ್ಲಿರುವ ಎಲ್ಲ ಹೆಂಗಸರು ಕತ್ತಲಾಗುವವರೆಗೆ ಕಾಯಬೇಕು. ಅಥವಾ ಬೆಳಗ್ಗೆ ಸೂರ್ಯ ಹುಟ್ಟುವುದಕ್ಕೆ ಮುಂಚೆ ಹೋಗಿಬರಬೇಕು. ಇಲ್ಲೊಂದು ಬಯಲು ಜಾಗವಿದೆ. ಅದಕ್ಕೆ ಯಾವುದೇ ಕಾಂಪೌಂಡ್, ಗೋಡೆ ಅಂತಿಲ್ಲ. ಕೆಲವು ಸಲ ಗಂಡಸರು ಓಡಾಡ್ತಿರ್ತಾರೆ. ಅದು ಬಹಳ ಅವಮಾನ ಆಗುತ್ತೆ. ಹೆಂಗಸರು ಕತ್ತಲೆ ಭಯದಿಂದ ಗುಂಪಾಗಿ ಹೋಗ್ತೀವಿ" ಎಂದವರು ಇಪ್ಪತ್ತರ ವಯಸ್ಸಿನ ಸಹನಾ.
ಇವೇ ಮಾತನ್ನು ಈಗಷ್ಟೇ ಬಂದು ಹೋದ ರಾಜಕೀಯ ಮುಖಂಡರ ಎದುರು ಯಾಕೆ ಆಡಲಿಲ್ಲ ಎಂದು ಆಕೆಯನ್ನು ಪ್ರಶ್ನಿಸಿದರೆ, ನಮ್ಮ ಮನೆಯ ಗಂಡಸರು ರಾಜಕಾರಣಿಗಳ ಎದುರು ನಾವು ಮಾತನಾಡೋದನ್ನ ಇಷ್ಟಪಡಲ್ಲ ಎಂದು ತಲೆ ತಗ್ಗಿಸಿದರು.[ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಒನ್ಇಂಡಿಯಾ ಸಂದರ್ಶನ]
"ನಾನು ಮಾತನಾಡಿದರೆ ನನ್ನ ಗಂಡ ಆಮೇಲೆ ನನಗೆ ಬಯ್ತಾರೆ, ಸುಮ್ಮನೆ ತೊಂದರೆ. ನನಗ್ಯಾಕೆ ಬೇಕು ಇಲ್ಲದ ಉಸಾಬರಿ?" ಎಂದ ಅವರು, ಹತ್ತಿರದ ಹಳ್ಳಿಯಲ್ಲಿ ಈ ಸಮಸ್ಯೆ ಇಲ್ಲ. ಈಗೆಲ್ಲ ಪಟ್ಟಣಕ್ಕಿಂತ ಹಳ್ಳಿಯೇ ವಾಸಿ. ಶೌಚಾಲಯ ಕಟ್ಟಿಸಿಕೊಳ್ಳುವುದಕ್ಕೆ ಅವರಿಗೆ ಹಣ ಕೊಡ್ತಾರೆ. ಇಲ್ಲಿ ಸರಕಾರದವರು ಒಳಚರಂಡಿ ವ್ಯವಸ್ಥೆ ಮಾಡಲಿ, ನಮ್ಮ ಮನೆ ಗಂಡಸರು ಶೌಚಾಲಯ ಕಟ್ಟಿಸಲಿ ಅನ್ನೋದೇ ನಮ್ಮ ನಿರೀಕ್ಷೆ.
ಶೌಚಾಲಯ ಹೊರತುಪಡಿಸಿದರೆ ಉದ್ಯೋಗ ಸೃಷ್ಟಿಯಾಗಬೇಕು ಎಂಬುದು ಈ ಮಹಿಳೆಯರ ಬೇಡಿಕೆ. "ಬರದಿಂದ ನಮಗೆ ಬಹಳ ತೊಂದರೆಯಾಗಿದೆ. ನೀರಿಲ್ಲದೆ ಕೃಷಿ ಮಾಡಲು ಆಗ್ತಿಲ್ಲ. ಬೇರೆಯವರ ಹತ್ತಿರ ಕೆಲಸಕ್ಕೆ ಹೋಗಬೇಕು. ಪಟ್ಟಣದಲ್ಲೇ ಗಾರ್ಮೆಂಟ್ ಫ್ಯಾಕ್ಟರಿ ಮಾಡಿದರೆ ಅಲ್ಲಿಗೆ ಕೆಲಸಕ್ಕೆ ಹೋಗಬಹುದು" ಎಂದವರು ಮೂವತ್ತರ ಹರೆಯದ ಇನ್ನೊಬ್ಬ ಮಹಿಳೆ.[ಅನುಕಂಪದ ಅಲೆಯಲ್ಲ, ಪತಿಯ ಜನಸೇವೆ ನನ್ನ ಗೆಲ್ಲಿಸುತ್ತೆ: ಗೀತಾ ಮಹಾದೇವಪ್ರಸಾದ್]
ಸರಕಾರ ಅಭಿವೃದ್ಧಿ ಬಗ್ಗೆ, ಡಿಜಿಟಲ್ ಇಂಡಿಯಾ ಬಗ್ಗೆ ಮಾತಾಡುತ್ತದೆ. ಆದರೆ ಹೊಸೂರಿನಂತಹ ಕಡೆ ಶೌಚಾಲಯವೇ ಇಲ್ಲ. ಚುನಾಯಿತ ಪ್ರತಿನಿಧಿಗಳು ತುರ್ತಾಗಿ ಇಂತಹ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಗಮನ ಕೊಡಬೇಕು.