ಕೊಚ್ಚಿ ಹೋದ ವೆಸ್ಲಿ ಸೇತುವೆಗೆ ಬರಲಿದೆ ಮರು ಜೀವ!
ಚಾಮರಾಜನಗರ, ಜೂನ್ 6: ಸುಮಾರು ಎರಡು ಶತಮಾನ ಕಂಡ, ಬ್ರಿಟೀಷರ ಕಾಲದ ಪಳೆಯುಳಿಕೆಯಾಗಿ ಹಲವಾರು ಸಿನಿಮಾಗಳಲ್ಲಿ ಮಿಂಚಿದ ಜಿಲ್ಲೆಯ ಇತಿಹಾಸ ಪ್ರಸಿದ್ಧ ವೆಸ್ಲೀ ಸೇತುವೆಯ ಕೆಲ ಭಾಗ ಕಳೆದ ಮುಂಗಾರು ಮಳೆಯಲ್ಲಿ ಕೊಚ್ಚಿ ಹೋಗಿತ್ತು. ಇದೀಗ ಸರ್ಕಾರ ಅದರ ಪುನರ್ ನವೀಕರಣಕ್ಕೆ ಮುಂದಾಗಿರುವುದು ಜನರಲ್ಲಿ ಸಂತಸ ತಂದಿದೆ.
ಕಾವೇರಿ ರಭಸಕ್ಕೆ ಕೊಚ್ಚಿಹೋದ ಭರಚುಕ್ಕಿ ಬಳಿಯ ವೆಸ್ಲಿ ಸೇತುವೆ
ಇತಿಹಾಸ ಪ್ರಸಿದ್ಧ ಕಟ್ಟಡಗಳು, ಸೇತುವೆ ಸೇರಿದಂತೆ ಹಲವು ಸ್ಮಾರಕಗಳು ನಿರ್ಲಕ್ಷ್ಯಕ್ಕೊಳಗಾಗಿ ಇತಿಹಾಸದ ಪುಟಗಳನ್ನು ಸೇರುತ್ತಿವೆ. ಹೀಗಿರುವಾಗ ಕಳೆದ ಮಳೆಗಾಲದಲ್ಲಿ ಹರಿದ ಕಾವೇರಿ ನೀರಿನ ಹೊಡೆತಕ್ಕೆ ಸಿಲುಕಿದ್ದ ಕೊಳ್ಳೇಗಾಲ ತಾಲೂಕಿನ ಹನೂರಿನ ಸತ್ತೇಗಾಲ ಸಮೀಪದ ಮಧರಂಗ ದೇವಾಲಯದ ಬಳಿ ಇರುವ ಬ್ರಿಟೀಷರ ಕಾಲದ ವೆಸ್ಲೀ ಸೇತುವೆಯ ಕೆಲಭಾಗ ಕೊಚ್ಚಿಹೋಗಿತ್ತು.
ಆನಂತರ ಜನ ಸರ್ಕಾರ ವೆಸ್ಲೀ ಸೇತುವೆ ಪುನರ್ ನವೀಕರಣದ ಮಾತನ್ನು ಮರೆತೇಬಿಟ್ಟಿದ್ದರು. ಆದರೆ ಇದೀಗ ನವೀಕರಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಶಿಲಾನ್ಯಾಸ ಮಾಡುವ ಮೂಲಕ ಶಿಥಿಲಾವಸ್ಥೆಯಲ್ಲಿದ್ದ ಸೇತುವೆಗೆ ಮರು ಜೀವ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಎರಡು ಕೋಟಿ ಅನುದಾನದಲ್ಲಿ ಮರು ನಿರ್ಮಾಣ ಕಾರ್ಯವನ್ನು ನಡೆಸಲಾಗುತ್ತಿದೆ.
ಕೊಡಗಿನ ಜಲಪ್ರಳಯಕ್ಕೆ ಕೊಳ್ಳೇಗಾಲದ ಊರುಗಳು ನೀರುಪಾಲು!
ಕಳೆದ ಜುಲೈನಲ್ಲಿ ಕಾವೇರಿ ಕಣಿವೆಯಲ್ಲಿ ಸುರಿದ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಕೆಆರ್ ಎಸ್ಗೆ ನೀರು ಹರಿದು ಬಂದಿದ್ದರಿಂದ ಹೆಚ್ಚಿನ ನೀರನ್ನು ಹೊರಬಿಡಲಾಗಿತ್ತು. ಒಮ್ಮೆಲೆ ಭಾರಿ ಪ್ರಮಾಣದ ನೀರು ಹರಿದಿದ್ದರಿಂದ ಅದರ ರಭಸಕ್ಕೆ ಸೇತುವೆಯ ಕೆಲ ಭಾಗ ಕೊಚ್ಚಿ ಹೋಗಿತ್ತು.
ಪ್ರತಿನಿತ್ಯ ಈ ವೆಸ್ಲೀ ಸೇತುವೆ ಮೇಲೆ ನೂರಾರು ಮಂದಿ ಪ್ರವಾಸಿಗರು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು, ಅದೃಷ್ಟವಶಾತ್ ಆ ದಿನ ರಭಸದಿಂದ ಕಾವೇರಿ ನೀರು ಹರಿಯುತ್ತಿದ್ದರಿಂದ ಪ್ರವಾಸಿಗರು ದುಸ್ಥಿತಿಯಲ್ಲಿದ್ದ ವೆಸ್ಲೀ ಸೇತುವೆ ಬಳಿ ತೆರಳಿರಲಿಲ್ಲ. ಹೀಗಾಗಿ ಯಾವುದೇ ಜೀವಹಾನಿ ಸಂಭವಿಸಿರಲಿಲ್ಲ. ಇದೀಗ ಸರ್ಕಾರ ಈ ಸೇತುವೆ ಪುನರ್ ನಿರ್ಮಾಣಕ್ಕೆ ಮುಂದಾಗಿರುವುದು ಪ್ರವಾಸಿಗರಿಗೆ ಖುಷಿ ತಂದಿದೆ. ಅಷ್ಟೇ ಅಲ್ಲ ಇತಿಹಾಸ ಪ್ರಸಿದ್ಧ ಸೇತುವೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡಂತಾಗಿದೆ.