ಯುಪಿಎ ಅವಧಿಯಲ್ಲಿ ಪಾಕ್ ಮೇಲೆ 12 ಬಾರಿ ಸರ್ಜಿಕಲ್ ದಾಳಿ ಮಾಡಿದ್ದೆವು: ಸಿದ್ದರಾಮಯ್ಯ
Recommended Video
ಚಾಮರಾಜನಗರ, ಮಾರ್ಚ್ 16: ನಮ್ಮ ಯುಪಿಎ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನದ ಮೇಲೆ 12-13 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ಆದರೆ, ನಾವು ಅದನ್ನು ಪ್ರಚಾರಕ್ಕೆ ಬಳಸಿಕೊಂಡಿರಲಿಲ್ಲ. ಬಿಜೆಪಿಯವರು ಒಂದೆರಡು ಸರ್ಜಿಕಲ್ ದಾಳಿ ನಡೆಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸರ್ಕಾರದ ಅವಧಿಯಲ್ಲಿ ನಡೆದ ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನ ಸೋತು ಶರಣಾಗಿದ್ದು ಗೊತ್ತಿಲ್ಲವೇ? ಈ ಸರ್ಜಿಕಲ್ ಸ್ಟ್ರೈಕ್ ಆ ಯುದ್ಧಕ್ಕಿಂತಲು ದೊಡ್ಡದಾ? ದೇಶದ ರಕ್ಷಣೆಯ ವಿಚಾರವನ್ನು ಕಾಂಗ್ರೆಸ್ ಎಂದಿಗೂ ರಾಜಕಾರಣಕ್ಕೆ ಬಳಸಿಕೊಂಡಿರಲಿಲ್ಲ ಎಂದು ಹರಿಹಾಯ್ದರು.
ಪ್ರತಾಪ್ ಸಿಂಹಗೆ ಏಕವಚನದಲ್ಲೇ ಕ್ಲಾಸ್ ತೆಗೆದುಕೊಂಡ ಸಿದ್ದರಾಮಯ್ಯ
ಬಿಜೆಪಿಯವರು ಬರಿ ಸುಳ್ಳು ಹೇಳುತ್ತಿದ್ದಾರೆ. ಕಳೆದ ಬಾರಿ ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ಸಿದ್ದರಾಮಯ್ಯ ಹಿಂದೂ ವಿರೋಧಿ, ಮುಸ್ಲಿಂ ಪರ ಎಂದರು. ಬಡವರು, ಮುಸ್ಲಿಮರು, ದಲಿತರು, ಹಿಂದುಳಿದವರ ಪರ ಇರುವುದು ನಿಜ. ಅಕ್ಕಿ, ಹಾಲಿಗೆ ಸಬ್ಸಿಡಿ, ಇಂದಿರಾ ಕ್ಯಾಂಟೀನ್ ಸ್ಥಾಪನೆ, ಸಾಲ ಮನ್ನಾ ಮಾಡಿದ್ದು ಎಲ್ಲಾ ವರ್ಗದ ಜನರಿಗಾಗಿ. ಯಡಿಯೂರಪ್ಪ ಅವಧಿಯಲ್ಲಿ ಏನು ಮಾಡಿದರು? ಜೈಲಿಗೆ ಹೋಗಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ ಎಂದು ಲೇವಡಿ ಮಾಡಿದರು.
ಚಾಮರಾಜನಗರದ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ್ ಅವರನ್ನು ಮಧುಮಗ ಎಂದು ತಮಾಷೆ ಮಾಡಿದ ಸಿದ್ದರಾಮಯ್ಯ, ಧ್ರುವನಾರಾಯಣ್ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರಷ್ಟು ಬೇರೆ ಯಾರೂ ಅಭಿವೃದ್ಧಿ ಮಾಡಿಲ್ಲ. ಕೆಲವರು ನಾಲ್ಕೈದು ಬಾರಿ ಆಯ್ಕೆಯಾದರೂ ಕೆಲಸ ಮಾಡಿಲ್ಲ ಎಂದರು.
ಭಾಷಣದ ವೇಳೆ ಎದ್ದು ಹೋದ ಜನ: ಏ ಪಂಚೆ ಕೂತ್ಕೊಳ್ಳಯ್ಯಾ ಎಂದು ಗದರಿದ ಸಿದ್ದರಾಮಯ್ಯ
ನಮಗೆ ರಾಮಮಂದಿರ ನಿರ್ಮಾಣಕ್ಕೆ ವಿರೋಧವಿಲ್ಲ. ನಾನು ಕೂಡ ರಾಮ ಅಲ್ಲವೇ? ಆದರೆ, ಮಸೀದಿ ಒಡೆದು ಅಲ್ಲಿ ರಾಮಮಂದಿರ ಕಟ್ಟುವುದಕ್ಕೆ ನನ್ನ ವಿರೋಧವಿದೆ. ರಾಮಮಂದಿರ ಕಟ್ಟುತ್ತೇವೆ ಎಂದು ಇಟ್ಟಿಗೆಯನ್ನು ತೆಗೆದುಕೊಂಡು ಹೋದರು. ಇಟ್ಟಿಗೆ ಊರಿನಿಂದ ಹೊರಗೆ ಎಸೆದು ಹಣವನ್ನು ಜೇಬಿಗೆ ಹಾಕಿಕೊಂಡು ಹೋದರು. ರಾಮಮಂದಿರ, ಹಿಂದುತ್ವ ಎಂದು ಹೇಳಿ ಜನರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರ ಹೇಳಿಕೆ ಬಿಜೆಪಿಯವರ ಟೀಕೆಗೆ ಗುರಿಯಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ 12-13 ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದರೂ ಬಹಿರಂಗವಾಗದೆ ಇರುವುದು ಹೇಗೆ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ಸಿನವರು ಎಷ್ಟು ನಿಸ್ವಾರ್ಥಿಗಳೆಂದರೆ ಈ 12 ಸರ್ಜಿಕಲ್ ದಾಳಿಗಳ ಮಾಹಿತಿಯನ್ನು ಸೈನ್ಯಕ್ಕೂ ನೀಡಿರಲಿಲ್ಲ. https://t.co/b59Wn5AN5n
— Sureshkumar (@nimmasuresh) 15 March 2019
'ಕಾಂಗ್ರೆಸ್ನವರು ಎಷ್ಟು ನಿಸ್ವಾರ್ಥಿಗಳೆಂದರೆ ಈ 12 ಸರ್ಜಿಕಲ್ ದಾಳಿಗಳ ಮಾಹಿತಿಯನ್ನು ಸೈನ್ಯಕ್ಕೂ ನೀಡಿರಲಿಲ್ಲ' ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.