ಕಬಿನಿ, ಕೆಆರ್ ಎಸ್ ನಿಂದ ನೀರು; ಕೊಳ್ಳೇಗಾಲದ ಗ್ರಾಮಗಳಿಗೆ ಆತಂಕ
ಚಾಮರಾಜನಗರ, ಆಗಸ್ಟ್ 10: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ನದಿಯಂಚಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಆವರಿಸಿದೆ.
Recommended Video
ನಿರಂತರ ಸುರಿಯುತ್ತಿರುವ ಮಳೆಯಿಂದ ಜಲಾಶಯಗಳ ನೀರಿನ ಮಟ್ಟದಲ್ಲೂ ಏರಿಕೆ ಕಂಡಿದೆ. ಕೆಆರ್ ಎಸ್ ಹಾಗೂ ಕಬಿನಿ ಜಲಾಶಯಗಳ ಒಳಹರಿವು ಹೆಚ್ಚಳವಾಗಿದ್ದು, ನದಿಗಳಿಗೆ, ನಾಲೆಗಳಿಗೆ ಹೆಚ್ಚಿನ ನೀರು ಹರಿಸಲಾಗುತ್ತಿದೆ. ಆದರೆ ಸುತ್ತ ಮುತ್ತಲ ಗ್ರಾಮಗಳಿಗೆ ಪ್ರವಾಹ ಭೀತಿಯೂ ಆವರಿಸಿದೆ.
ಕೆಆರ್ ಎಸ್, ಕಬಿನಿ ಅಣೆಕಟ್ಟೆಯಿಂದ ನೀರು
ಕೆಆರ್ ಎಸ್ ಅಣೆಕಟ್ಟು ಹಾಗೂ ಕಬಿನಿ ಅಣೆಕಟ್ಟೆಯಿಂದ ಹೆಚ್ಚಿನ ನೀರನ್ನು ನದಿಗಳಿಗೆ ಹೊರಬಿಡಲಾಗುತ್ತಿದೆ. ಹೀಗಾಗಿ ಕಾವೇರಿ ನದಿ ಪಾತ್ರದಲ್ಲಿ ಜಮೀನುಗಳು ಮುಳುಗಡೆಯಾಗುವ ಆತಂಕ ವ್ಯಕ್ತವಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾವೇರಿ ನದಿಯಂಚಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಆವರಿಸಿದೆ.
KRS ಅಣೆಕಟ್ಟಿನಿಂದ ನೀರು ಬಿಡುಗಡೆ, ನದಿಪಾತ್ರದಲ್ಲಿ ಪ್ರವಾಹ ಭೀತಿ
ಮುಳುಗಡೆಯಾದ ಗದ್ದೆಗಳು
ಜಿಲ್ಲೆಯ ಹರಳೆ, ದಾಸಪುರ, ಹಳೆ ಅಣಗಳ್ಳಿ ಗ್ರಾಮಗಳಲ್ಲಿ ಜಮೀನಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮಳೆ ನೀರು ನುಗ್ಗಿ ಭತ್ತದ ನಾಟಿ ಪೈರು, ಮುಸುಕಿನ ಜೋಳದ ಬೆಳೆ ನಾಶವಾಗಿದೆ. ನಾಟಿಯಾಗಿದ್ದ ಗದ್ದೆಗಳು ಹೀಗೆ ನೀರಿನಲ್ಲಿ ಮುಳುಗಡೆಯಾಗಿರುವುದು ಕಂಡು ರೈತರು ಕಂಗಾಲಾಗಿದ್ದಾರೆ.
ಮತ್ತಷ್ಟು ಜಮೀನು ಮುಳುಗಡೆ ಸಾಧ್ಯತೆ
ನೀರಿನ ಹರಿವು ಹೆಚ್ಚಳವಾಗುತ್ತಲೇ ಇದ್ದು, ಇಂದು ಮತ್ತಷ್ಟು ಜಮೀನು, ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆಯಿದೆ. ಆದರೆ ಮಳೆಯಿಂದ ಇಷ್ಟೆಲ್ಲಾ ಅವಾಂತರವಾಗುತ್ತಿದ್ದರೂ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೇಫ್ ಆಗಿದ್ದ ಕುಶಾಲನಗರದಲ್ಲೂ ನೆರೆ ಉಂಟಾಗಿದ್ದು ಹೇಗೆ?
ಕಳೆದ ವರ್ಷವೂ ಅಪಾರ ಪ್ರಮಾಣದ ನಷ್ಟ
ಕಳೆದ ವರ್ಷವೂ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ನಷ್ಟ ಸಂಭವಿಸಿತ್ತು. ನದಿ ನೀರು ಜಮೀನುಗಳಿಗೆ ನುಗ್ಗಿ ಬೆಳೆಗಳು ನಾಶವಾಗಿದ್ದವು. ಹತ್ತಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ಆಗ ತಡೆಗೋಡೆ ಕಟ್ಟುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಭರವಸೆಗಳು ಹಾಗೇ ಉಳಿದಿವೆ.