ಚಾಮರಾಜನಗರ: ಹುಚ್ಚಪ್ಪನಕಟ್ಟೆಯಲ್ಲಿ ಹರಿದಿದೆ ಜಲಧಾರೆ
ಚಾಮರಾಜನಗರ, ಮೇ 28: ಬ್ರಿಟೀಷರ ಕಾಲದಲ್ಲಿ ಕೆರೆಯೊಂದಕ್ಕೆ ಕಟ್ಟಲಾಗಿದ್ದ ಹುಚ್ಚಪ್ಪನಕಟ್ಟೆ ಇದೀಗ ಜಲಪಾತವಾಗಿ ಮಾರ್ಪಾಡುಗೊಂಡಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯತೊಡಗಿದೆ. ಅಂದ ಹಾಗೆ ಈಗ ಜಲಧಾರೆಯಾಗಿ ಧುಮುಕುತ್ತಿರುವ ಹುಚ್ಚಪ್ಪನಕಟ್ಟೆ ಒಂದು ಕೆರೆಯಷ್ಟೆ. ಆದರೆ ಇಲ್ಲಿ ಜಲಧಾರೆ ನಿರ್ಮಾಣವಾಗಿ ಸೌಂದರ್ಯ ತುಂಬಿಕೊಂಡು ಕಣ್ಸೆಳೆಯುತ್ತಿದೆ.
ಜೋರು ಮಳೆಯಲ್ಲೂ ಕೊಡಚಾದ್ರಿ ಚಾರಣ, ಮೈ ನಡುಗಿಸುವ ಜೀಪ್ ಪಯಣ
ಹುಚ್ಚಪ್ಪನಕಟ್ಟೆಯು ಚಾಮರಾಜನಗರದಿಂದ ಸುಮಾರು 18 ಕಿ.ಮೀ. ದೂರದಲ್ಲಿ, ಹರದನಹಳ್ಳಿ, ಅಮಚವಾಡಿ, ಹೊನ್ನಳ್ಳಿಗೂ ಮಾರ್ಗ ಮಧ್ಯದಲ್ಲಿದೆ. ಈ ಕಟ್ಟೆಗೆ ಸಣ್ಣ ಇತಿಹಾಸವೂ ಇದೆ. ಗುಡ್ಡಗಳ ನಡುವೆ ಹರಿದುಬರುತ್ತಿದ್ದ ನೀರು ಈ ಕರೆಯಲ್ಲಿ ಸಂಗ್ರಹವಾಗುತ್ತಿತ್ತು. ಆದ್ದರಿಂದ ಈ ಕೆರೆಗೆ ಬ್ರಿಟೀಷರ ಕಾಲದಲ್ಲಿ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಇದರಲ್ಲಿ ಮಳೆಗಾಲದ ವೇಳೆ ನೀರು ಸಂಗ್ರಹವಾಗುತ್ತಿತ್ತಾದರೂ ನೀರು ಮಾತ್ರ ತುಂಬಿ ಹರಿದಿದ್ದು ಕಡಿಮೆಯೇ. ಹೀಗಾಗಿ ನೀರು ಧುಮ್ಮಿಕ್ಕಿ ಹರಿವ ದೃಶ್ಯ ಯಾರಿಗೂ ಲಭ್ಯವಾಗಿರಲಿಲ್ಲ. ಆದರೆ ಈ ಬಾರಿ ಮಳೆಗಾಲದಲ್ಲಲ್ಲದೇ ಬೇಸಿಗೆಯಲ್ಲಿಯೇ ಇಲ್ಲಿ ಜಲಧಾರೆ ಸೃಷ್ಟಿಯಾಗಿದ್ದು ಎಲ್ಲರ ಅಚ್ಚರಿಗೂ ಕಾರಣವಾಗಿದೆ.
ಪ್ರತಿಯೊಬ್ಬರು ನೋಡಲೇಬೇಕಾದ ಕೊಡಗಿನ ಟಾಪ್ 20 ಪ್ರವಾಸಿ ತಾಣಗಳು
ಮಳೆ ಬಾರದೆ ನೀರು ಹೇಗೆ ಹುಚ್ಚಪ್ಪನಕಟ್ಟೆಯಿಂದ ಧುಮ್ಮಿಕ್ಕುತ್ತಿದೆ ಎಂದು ಎಲ್ಲರೂ ಆಶ್ಚರ್ಯಪಟ್ಟುಕೊಂಡವರೇ. ಆದರೆ ಅದಕ್ಕೆ ಕಾರಣ, ಈ ವ್ಯಾಪ್ತಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಈ ಹುಚ್ಚಪ್ಪನಕಟ್ಟೆ ಕೆರೆಗೂ ಕಬಿನಿ ನದಿಯಿಂದ ನೀರು ಹರಿಸಿದ್ದಾಗಿತ್ತು. ಈ ನೀರಿನಿಂದ ಕೆರೆ ತುಂಬಿಕೊಂಡು ತಡೆಗೋಡೆಯ ಮೇಲ್ಭಾಗದಿಂದ ಧುಮ್ಮಿಕ್ಕಿ ಹರಿಯುತ್ತಿದೆ. ಅದು ನೋಡುಗರಿಗೆ ಜಲಧಾರೆಯ ಮಾದರಿಯಲ್ಲಿ ಕಾಣಿಸುತ್ತಿದ್ದು, ಇದನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಬೇಸಿಗೆ ಧಗೆಯಿಂದಾಗಿ ಬಸವಳಿದ ಜನ ದೇಹವನ್ನು ತಂಪು ಮಾಡಿಕೊಳ್ಳಲು ಇಲ್ಲಿಗೆ ಬರುತ್ತಿದ್ದಾರೆ. ಸುರಿಯುವ ಜಲಧಾರೆಗೆ ಮೈಯೊಡ್ಡಿ ಸಂತಸಗೊಳ್ಳುತ್ತಿದ್ದಾರೆ. ಈಗಾಗಲೇ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಅದರಂತೆ ಹುಚ್ಚಪ್ಪನ ಕೆರೆಗೂ ನೀರು ಹರಿದು ಬಂದಿದ್ದು, ದೃಶ್ಯ ಜಾದೂ ಸೃಷ್ಟಿಮಾಡಿದಂತಾಗಿದೆ.