ಪ್ಲೇಟು ತೊಳ್ಯೋಕೂ ನೀರಿಲ್ಲ, ವಡ್ಡನಹೊಸಹಳ್ಳಿ ಶಾಲೇಲಿ ಇದೆಂಥ ದುಸ್ಥಿತಿ!
ಚಾಮರಾಜನಗರ, ಆಗಸ್ಟ್ 11: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನೇನೋ ಸರ್ಕಾರ ನೀಡುತ್ತಿದೆ. ಆದರೆ ಬಹಳಷ್ಟು ಶಾಲೆಗಳಿಗೆ ನೀರಿನ ವ್ಯವಸ್ಥೆಯನ್ನು ಒದಗಿಸದ ಕಾರಣದಿಂದಾಗಿ ಮಕ್ಕಳು ಪರದಾಡುವಂತಾಗಿದ್ದು, ಇದಕ್ಕೆ ಗುಂಡ್ಲುಪೇಟೆ ತಾಲೂಕಿನ ವಡ್ಡನಹೊಸಹಳ್ಳಿ ಗ್ರಾಮದ ಸರ್ಕಾರಿ ಶಾಲೆ ನಿದರ್ಶನವಾಗಿದೆ.
ಭರವಸೆ ಈಡೇರಿಸದ ಸರ್ಕಾರ. ಗುಂಡ್ಲುಪೇಟೆಯಲ್ಲಿ ನೀರಿಗೆ ಪರದಾಟ!
ಇವತ್ತು ಎಲ್ಲ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ನೀಡಲಾಗುತ್ತಿದೆಯಾದರೂ ಅದರ ಹಿಂದಿನ ಫಜೀತಿಗಳು ಆಯಾಯ ಶಾಲಾ ಶಿಕ್ಷಕರಿಗೆ ಮಾತ್ರ ಗೊತ್ತು. ಬಹಳಷ್ಟು ಶಾಲೆಗಳಿಗೆ ಇನ್ನೂ ಕೂಡ ಮೂಲಭೂತ ಸೌಲಭ್ಯವಿಲ್ಲ. ನೀರಿನ ವ್ಯವಸ್ಥೆಯಿಲ್ಲ, ಸುವ್ಯವಸ್ಥಿತ ಕಟ್ಟಡವಿಲ್ಲ. ಆದರೂ ಹೇಗೋ ಶಿಕ್ಷಕರು ಶ್ರಮವಹಿಸಿ ಅಕ್ಷರ ದಾಸೋಹ ನಡೆಸುತ್ತಿದ್ದಾರೆ.
ಗುಂಡ್ಲುಪೇಟೆಗೆ ಹೊಂದಿಕೊಂಡಂತೆ ಕೇವಲ 8 ಕಿಲೋ ಮೀಟರ್ ದೂರವಿರುವ ವಡ್ಡನಹೊಸಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದಾರೆ. ಇಲ್ಲಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದು ಕಷ್ಟವೇನಲ್ಲ. ಆದರೆ ಅದ್ಯಾಕೋ ನಮ್ಮ ಜನಪ್ರತಿನಿಧಿಗಳಿಗೆ, ಸಂಬಂಧಿಸಿದ ಅಧಿಕಾರಿಗಳಿಗೆ ಉದಾಸೀನಭಾವ ಹೀಗಾಗಿ ಮಕ್ಕಳು ನೀರಿಲ್ಲದೆ ಪರದಾಡುವಂತಾಗಿದೆ.
ಕಾಮಗೆರೆಯಲ್ಲಿ ಮಳೆ ಬಂದರೂ ಕೆರೆ ತುಂಬಿಲ್ಲ!
ಹಾಗೆನೋಡಿದರೆ ಈ ಶಾಲೆಯಲ್ಲಿ ನೀರು ಸಂಗ್ರಹಿಸಿಡಲು ಟ್ಯಾಂಕ್ ಇದೆಯಾದರೂ ಇದಕ್ಕೆ ನೀರೇ ಬಾರದಂತಾಗಿದೆ. ಹೀಗಾಗಿ ಕೈಯ್ಯಿಂದ ಹಣ ನೀಡಿ ನೀರು ತಂದು ತುಂಬಿಸಿಕೊಂಡು ಬಿಸಿಯೂಟ ತಯಾರಿಸಬೇಕಾಗಿದೆ. ಇದರ ಹಣವನ್ನು ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು, ಶಾಲಾಭಿವೃದ್ಧಿ ಮಂಡಳಿ ಬರಿಸಬೇಕಾಗಿದೆ.
ಬಹಳಷ್ಟು ಸಾರಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು ತಮ್ಮ ಕೈನಿಂದ ಹಣ ಪಾವತಿಸಿ ಟ್ಯಾಂಕರ್ ಮೂಲಕ ನೀರು ಹಾಕಿಸುತ್ತಿದ್ದಾರೆ. ಶೌಚಾಲಯ ಬಳಕೆಗೆ ಸಮರ್ಪಕ ನೀರು ಸಿಗದ ಕಾರಣದಿಂದಾಗಿ ಶೌಚಾಲಯ ಗಬ್ಬೆದ್ದು ನಾರುವಂತಾಗಿದೆ. ಹೊರಗಿನಿಂದ ತಂದ ನೀರಿನಲ್ಲಿ ಬಿಸಿಯೂಟ ತಯಾರಿಸಲಾಗುತ್ತಿದ್ದು, ಊಟ ಮಾಡಿದ ತಟ್ಟೆಯನ್ನು ತೊಳೆಯಲು ಮಕ್ಕಳು ಪರದಾಡುವಂತಾಗಿದೆ. ಕೆಲವೊಮ್ಮೆ ಕೈತೊಳೆಯಲು ಕೂಡ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲೆಯ ಮುಖ್ಯ ಶಿಕ್ಷಕರು ಪೋಷಕರ ಮನವೊಲಿಸಿದ ಪರಿಣಾಮವಾಗಿ ವಿದ್ಯಾರ್ಥಿಗಳೇ ಇದೀಗ ತಮ್ಮ ಮನೆಯಿಂದ ಬಾಟಲು ಹಾಗೂ ಬಿಂದಿಗೆಗಳಲ್ಲಿ ನೀರನ್ನು ಹೊತ್ತು ತರುತ್ತಿದ್ದಾರೆ. ಶಾಲೆಯಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆ ಕುರಿತಂತೆ ಮುಖ್ಯ ಶಿಕ್ಷಕರಾದ ಮಲ್ಲು ಅವರು ಬಿಸಿಯೂಟ ಯೋಜನೆಯ ನಿರ್ದೇಶಕರಿಗೆ ಹಾಗೂ ಗ್ರಾಮಪಂಚಾಯಿತಿಗೆ ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಅಗತ್ಯವಾದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ ಎಂದು ಪತ್ರ ಬರೆದರೂ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಶಾಲೆಯಲ್ಲಿ ನೀರಿಗಾಗಿ ಪರದಾಟ ಮುಂದುವರೆದಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಪೋಷಕರು ಪಟ್ಟಣದ ಸಮೀಪವೇ ಗ್ರಾಮವಿದ್ದರೂ ನೀರಿನ ಸಮಸ್ಯೆ ಬಗೆಹರಿಸಲು ಗ್ರಾಮಪಂಚಾಯಿತಿಯವರು ಮುಂದಾಗದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೆ, ನಮ್ಮ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮನೆಯಿಂದಲೇ ನೀರು ಕಳಿಸಿಕೊಡುತ್ತಿರುವುದಾಗಿ ಹೇಳಿದ್ದಾರೆ.
ಇನ್ನು ಮನೆಯಿಂದ ತಂದ ನೀರಿನಿಂದಲೇ ಮಧ್ಯಾಹ್ನದ ಬಿಸಿಯೂಟ ತಯಾರಿಸಬೇಕಾಗಿದ್ದು, ಬಾಯಾರಿಕೆಯಿಂದ ನೀರು ಕುಡಿದರೆ ಮಧ್ಯಾಹ್ನ ಊಟ ಮಾಡಿದ ತಟ್ಟೆಯನ್ನು ತೊಳೆಯಲು ನೀರು ಸಿಗದೆ ಮನೆಗೆ ಕೊಂಡೊಯ್ದು ತೊಳೆಯಬೇಕಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಶೌಚಾಲಯವಿದ್ದರೂ ನೀರಿಲ್ಲದ ಕಾರಣದಿಂದ ಬಯಲಿಗೆ ತೆರಳುವುದು ಅನಿವಾರ್ಯವಾಗಿದೆ. ಇನ್ನು ಮುಂದೆಯಾದರೂ ಸಂಬಂಧಿಸಿದವರು ಇದರತ್ತ ಗಮನಹರಿಸುತ್ತಾರಾ ಎಂಬುದೇ ಪ್ರಶ್ನೆಯಾಗಿದೆ.