ಹೈಕಮಾಂಡ್ ಮತ್ತು ಬಿಎಸ್ವೈ ನಡುವೆ 2 ವರ್ಷಗಳ ಅಗ್ರಿಮೆಂಟ್ ಆಗಿತ್ತು
ಚಾಮರಾಜನಗರ, ಜುಲೈ 23: "ಬಿಜೆಪಿ ಹೈಕಮಾಂಡ್ ಮತ್ತು ಸಿಎಂ ಯಡಿಯೂರಪ್ಪ ನಡುವೆ ಎರಡು ವರ್ಷಗಳ ಅಗ್ರಿಮೆಂಟ್ ಆಗಿತ್ತು,'' ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
Recommended Video
ಸಿಎಂ ಯಡಿಯೂರಪ್ಪ ರಾಜೀನಾಮೆ ವಿಚಾರವಾಗಿ ಚಾಮರಾಜನಗರದಲ್ಲಿ ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, "ಸಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಒಪ್ಪಂದ ಆಗಿತ್ತು. ನಿಮಗೆ ವಯಸ್ಸಾಗಿದ್ದರೂ ಅವಕಾಶ ಕೊಡುತ್ತೇವೆ. ಎರಡು ವರ್ಷ ಸಿಎಂ ಆಗಿ ಎಂದು ಬಿಜೆಪಿ ಹೈಕಮಾಂಡ್ ಹೇಳಿತ್ತು,'' ಎಂದು ತಿಳಿಸಿದರು.
ಯಡಿಯೂರಪ್ಪ ಬದಲಾವಣೆ: ಬಿಜೆಪಿ ಹೈಕಮಾಂಡ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು!
"ಬಿಎಸ್ವೈ ಹಾಗೂ ಹೈಕಮಾಂಡ್ ನಡುವೆ ನಡೆದಿದ್ದ ಮಾತುಕತೆ ಪ್ರಕಾರ ಈಗ ಅವರು ರಾಜೀನಾಮೆಗೆ ಮುಂದಾಗಿದ್ದಾರೆ. ಪಕ್ಷದ ಮುಖ್ಯ ಹುದ್ದೆಯಲ್ಲಿ 75 ವರ್ಷ ಮೇಲ್ಪಟ್ಟವರು ಇರಬಾರದೆಂದು ಪಕ್ಷದ ನಿಲುವಾಗಿದೆ. ವಿಶೇಷ ಸಂಧರ್ಭದಲ್ಲಿ ಯಡಿಯೂರಪ್ಪ ಸಿಎಂ ಆದರು. ಇದುವರೆಗಿದ್ದ ಉಹಾಪೋಹಕ್ಕೆ ತೆರೆಬಿದ್ದಿದೆ,'' ಎಂದು ಹೇಳಿದರು.
"ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ನಡುವೆ ಆಗಿದ್ದ ಮಾತುಕತೆಯಂತೆ ಈಗ ಯಡಿಯೂರಪ್ಪ ನಡೆದುಕೊಂಡಿದ್ದಾರೆ. ಈಗ ಒಂದು ಹಂತಕ್ಕೆ ಬಂದಿದೆ,'' ಎಂದು ಚಾಮರಾಜನಗರದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಸ್ಪೋಟಕ ಮಾಹಿತಿ ಹಂಚಿಕೊಂಡರು.
ಎಚ್. ವಿಶ್ವನಾಥ್ ಹೇಳಿಕೆಗೆ ಆಕ್ರೋಶ
"ಬಾಂಬೆ ಫ್ರೆಂಡ್ಸ್ಗೆ ಮಂತ್ರಿ ಸ್ಥಾನ ಕೊಡಬಾರದೆಂಬ ಎಂಎಲ್ಸಿ ಎಚ್. ವಿಶ್ವನಾಥ್ ಹೇಳಿಕೆಗೆ ಶ್ರೀನಿವಾಸ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿ, ವಿಶ್ವನಾಥ್ ಹೇಳಿಕೆಗೆ ಚಿಕ್ಕಾಸಿನ ಬೆಲೆ ಇಲ್ಲ. ವಿಶ್ವನಾಥ್ ಹತಾಶವಾದ ಹೇಳಿಕೆ ಕೊಡುತ್ತಿದ್ದಾರೆ. ವಿಶ್ವನಾಥ್ ಏನ್ ಹೈಕಮಾಂಡ? ತಮ್ಮ ತೇವಲಿಗೆ ಈ ರೀತಿಯ ಹೇಳಿಕೆ ಕೊಡಬಾರದು. ನಾನು ವಿಶ್ವನಾಥ್ ಬಿಜೆಪಿ ಪಕ್ಷ ಕಟ್ಟಿದ್ದವರಲ್ಲ. ಬಿಜೆಪಿಗೆ ಬಂದಿದ್ದೇವೆ, ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕೇ ಹೊರತು ಈ ರೀತಿ ಮಾತನಾಡಬಾರದು,'' ಎಂದು ವಿಶ್ವನಾಥ್ ವಿರುದ್ಧ ಸಂಸದ ಶ್ರೀನಿವಾಸ ಪ್ರಸಾದ್ ವಾಗ್ಧಾಳಿ ನಡೆಸಿದರು.
ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ
ಬಿಜೆಪಿಯವರು ದಲಿತರನ್ನು ಸಿಎಂ ಮಾಡಲಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಸಂಸದ ಶ್ರೀನಿವಾಸ ಪ್ರಸಾದ್ ಏಕವಚನದಲ್ಲಿ ಪ್ರತಿಕ್ರಿಯಿಸಿ, "ಅವನ್ಯಾರು ಹೇಳೋಕೆ? ವಿರೋಧ ಪಕ್ಷದಲ್ಲಿರುವವರು ಈ ರೀತಿ ಹೇಳಿಕೆ ಕೊಡುವುದಾ? ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮುಂದಿನ ಬಾರಿಗೆ ದಲಿತರನ್ನು ಸಿಎಂ ಮಾಡುತ್ತೇನೆಂದು ಹೇಳುತ್ತಿದ್ದರು. ಆದಾದ ಮೇಲೆ ಮಾತನ್ನು ಬದಲಾಯಿಸಿದರು. ಮುಂದಿನ ಮುಖ್ಯಮಂತ್ರಿ ನಾನೇ ಎಂದು ಅಂಬಾರಿ ಮೇಲೆ ಕುಳಿತುಕೊಂಡು ಬಂದರು.''
ದಲಿತರ ಸಿಎಂ ಮಾಡೋಣ ಎಂದಿದ್ದೆ
"ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ನಿಲ್ಲಲು ಕ್ಷೇತ್ರ ಹುಡುಕುವಂಥ ಪರಿಸ್ಥಿತಿಗೆ ಬಂದಿದ್ದಾರೆ. ಸುಮ್ಮನೆ ಮಾತನಾಡುತ್ತಾರೆ. 5 ವರ್ಷ ನೀವೇ ಸಿಎಂ ಆಗಿ ಸಂಪೂರ್ಣ ಬೆಂಬಲ ಕೊಡುತ್ತೇವೆ. ನಂತರ ದಲಿತರ ಸಿಎಂ ಮಾಡೋಣ ಎಂದು ಸಿದ್ದರಾಮಯ್ಯ ಬಳಿ ಹೇಳಿದ್ದೆ. ದಲಿತರಲ್ಲಿ ಯಾರು ಸಿಎಂ ಆಗಬೇಕು ಎಂಬುದನ್ನು ಕುಳಿತು ಮಾತನಾಡೋಣವೆಂದಿದ್ದೆ. ನಂತರ ಅವರ ದಾಟಿಯೇ ಬದಲಾಯಿತು. ಅವನ ಹಿಂದೆ ಕುಳಿತುಕೊಳ್ಳುತ್ತಿದ್ದ ಎಚ್.ಸಿ. ಮಹದೇವಪ್ಪ ನಾನೇ ಸಿಎಂ ಅನ್ನೋಕೆ ಶುರು ಮಾಡಿದ. ಆದರೆ ಎಲ್ಲರೂ ಮನೆಗೆ ಹೊರಟು ಹೋದರು. ಅಂದು ನಡೆದ ಕೆಲ ವಿಚಾರಗಳನ್ನು ಶಾಸಕ ಎನ್. ಮಹೇಶ್ ಜೊತೆ ಸಂಸದ ಶ್ರೀನಿವಾಸ ಪ್ರಸಾದ್ ಹಂಚಿಕೊಂಡರು.
ಸ್ವಾಮೀಜಿಗಳು ಸೂಪರ್ ಹೈಕಮಾಂಡ್ ಅಲ್ಲ
ಬಿಎಸ್ವೈ ಮುಂದುವರಿಕೆಗೆ ಸ್ವಾಮೀಜಿಗಳ ಒತ್ತಾಯ ವಿಚಾರವಾಗಿ ಮಾತನಾಡಿದ ಸಂಸದ ಶ್ರೀನಿವಾಸ ಪ್ರಸಾದ್, "ಸ್ವಾಮೀಜಿಗಳು ಸೂಪರ್ ಹೈಕಮಾಂಡ್ ಅಲ್ಲ. ಪಕ್ಷಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳಬಾರದು, ಹೇಳಿಕೆ ನೀಡಬಾರದು ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ. ಮುಂದಿನ ಸಿಎಂ ಯಾರೆಂದು ಇನ್ನೆರಡು ದಿನದಲ್ಲಿ ಗೊತ್ತಾಗಲಿದೆ. ಯಾರು ಎಂದು ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮುಂದಿನ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಪಕ್ಷ ಸಂಘಟಿಸಿದ ಯಡಿಯೂರಪ್ಪನವರನ್ನು ಹೈಕಮಾಂಡ್ ಗೌರವಯುತವಾಗಿ ನಡೆಸಿಕೊಂಡಿದೆ,'' ಎಂದು ಚಾಮರಾಜನಗರದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದರು.