ಒಡೆಯರಪಾಳ್ಯದ ಟಿಬೆಟಿಯನ್ನರಿಂದ ಕೋವಿಡ್ ವಿರುದ್ಧ ಯಶಸ್ವಿ ಹೋರಾಟ
ಚಾಮರಾಜನಗರ, ಜೂನ್ 4: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಒಡೆಯರಪಾಳ್ಯದ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಸರ್ಕಾರ ಅಥವಾ ಜಿಲ್ಲಾಡಳಿತದ ನೆರವನ್ನು ಬಳಸಿಕೊಳ್ಳದೆ ತನ್ನದೇ ಸಂಪನ್ಮೂಲ ಬಳಸಿಕೊಂಡು ಕೋವಿಡ್ 2ನೇ ಅಲೆಯ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತಿದೆ.
ಈ ಶಿಬಿರದಲ್ಲಿ ಹೊರಗಿನಿಂದ ಬಂದವರಿಂದ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ಮೂರು ಪ್ರತ್ಯೇಕ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ. ಹೊರಗಿನಿಂದ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿ ತರುವುದು ಕಡ್ಡಾಯ. ಆ ನಂತರವಷ್ಟೇ ಶಿಬಿರದ ಗ್ರಾಮಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಈ ಶಿಬಿರದಲ್ಲಿ ಸುಮಾರು 3200 ಟಿಬೆಟಿಯನ್ನರು ವಾಸವಾಗಿದ್ದು, ಇಲ್ಲಿ ಈವರೆಗೂ ಯಾರೂ ಕೋವಿಡ್ನಿಂದಾಗಿ ಮೃತಪಟ್ಟಿಲ್ಲ, ಮೊದಲನೆ ಅಲೆಯಲ್ಲೂ ಯಾರೂ ಮೃತಪಟ್ಟಿಲ್ಲ.
ಕೋವಿಡ್ ಮೊದಲನೇ ಅಲೆಯಲ್ಲಿ ಈ ಶಿಬಿರದಲ್ಲಿ 11 ಪ್ರಕರಣಗಳು ಕಾಣಿಸಿಕೊಂಡಿದ್ದವು. ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಲಿದೆ ಎಂಬ ಆರೋಗ್ಯ ಇಲಾಖೆಯ ಮುನ್ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ, ಅದರ ನಿಯಂತ್ರಣಕ್ಕಾಗಿ ಕೆಲವೊಂದು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಪರಿಣಾಮ ಸೋಂಕು ಕಂಡು ಬಂದರೂ, ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಇಲ್ಲಿನ ಶಾಲೆ, ಆಸ್ಪತ್ರೆ ಹಾಗೂ ಸಮುದಾಯ ಭವನಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಎರಡನೇ ಅಲೆಯಲ್ಲಿ ಇದುವರೆಗೆ 137 ಮಂದಿಗೆ ಸೋಂಕು ದೃಢಪಟ್ಟಿದ್ದು, 97 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈಗ 36 ಸಕ್ರಿಯ ಪ್ರಕರಣಗಳಿವೆ.
'ಈ ಶಿಬಿರಕ್ಕೆ ರಾಷ್ಟ್ರದ ವಿವಿಧೆಡೆಗಳಿಂದ ಹಾಗೂ ಹಲವು ಜಿಲ್ಲೆಗಳಿಂದ ಜನರು ಬರುತ್ತಾರೆ. ಅವರೆಲ್ಲರೂ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರುವುದು ಕಡ್ಡಾಯ. ವರದಿ ನೆಗೆಟಿವ್ ಇದ್ದರೆ, ಅವರು ಯಾವ ಗ್ರಾಮದವರು ಎಂಬುದರ ಬಗ್ಗೆ ಮಾಹಿತಿ ಪಡೆದು, ಆ ಗ್ರಾಮಕ್ಕೆ ಮಾಹಿತಿ ನೀಡುತ್ತೇವೆ. ವರದಿ ಪಾಸಿಟಿವ್ ಇದ್ದರೆ ಅವರನ್ನು ಐಸೊಲೇಷನ್/ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತದೆ.'
ಕೊರೊನಾ ಎರಡನೇ ಅಲೆಯಲ್ಲಿ ಇದುವರೆಗೆ ಇಬ್ಬರಿಗೆ ಮಾತ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿರುವ ಸೋಂಕಿತರ ಆರೋಗ್ಯ ತಪಾಸಣೆಯನ್ನು ದಿನಕ್ಕೆ ಎರಡು ಬಾರಿ ನಡೆಸಲಾಗುತ್ತಿದೆ. ಅವರಿಗೆ ಉಪಹಾರದ ವ್ಯವಸ್ಥೆಯನ್ನು ಇಲ್ಲಿನ ಆಸ್ಪತ್ರೆ ವತಿಯಿಂದಲೇ ಪೂರೈಸಲಾಗುತ್ತಿದೆ' ಎಂದು ದಾಡೇಲಿಂಗ್ ಆಸ್ಪತ್ರೆಯ ಕಾರ್ಯದರ್ಶಿ ಮಿಂಗ್ಮಾರ್ ಸೇರಿನಿ ಅವರು ತಿಳಿಸಿದರು.
ಶಿಬಿರದಲ್ಲಿರುವ 3,200 ಜನರ ಪೈಕಿ 60ಕ್ಕಿಂತ ಹೆಚ್ಚು ವಯಸ್ಸಾದ 700 ಮಂದಿಗೆ ಮೊದಲನೇ ಹಾಗೂ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇಲ್ಲಿನ ಆಸ್ಪತ್ರೆಯಲ್ಲಿ 4 ಆಕ್ಸಿಜನ್ ಸಾಂದ್ರಕಗಳೂ ಇವೆ. ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಇಲ್ಲಿಯೇ ಆಮ್ಲಜನಕ ನೀಡಲಾಗುತ್ತದೆ ಎಂದೂ ಅವರು ಹೇಳಿದರು.
Recommended Video
ಈ ಹಿಂದೆ ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕೊಪ್ಪ ಟಿಬೆಟಿಯನ್ ಶಿಬಿರದಲ್ಲಿ ಕಳೆದ ಒಂದು ವರ್ಷದಿಂದಲೂ ಯಾವುದೇ ಕೋವಿಡ್ ಸೋಂಕು ಇಲ್ಲದೆ ರಾಜ್ಯ ಮಟ್ಟದಲ್ಲಿ ಸುದ್ದಿಯೂ ಆಗಿತ್ತು. ಕಟ್ಟುನಿಟ್ಟಿನ ಲಾಕ್ಡೌನ್ ಮಾಡುತ್ತಿರುವುದೇ ಟಿಬೆಟಿಯನ್ನರ ಯಶಸ್ಸಿನ ಗುಟ್ಟಾಗಿದೆ.