ಸುಭದ್ರ ಸರ್ಕಾರಕ್ಕಾಗಿ ಬಿಜೆಪಿ ಮತ ನೀಡಿ: ಶಾಸಕ ಎನ್.ಮಹೇಶ್
ಚಾಮರಾಜನಗರ, ಡಿಸೆಂಬರ್ 03: 'ಸುಭದ್ರ ಸರ್ಕಾರಕ್ಕಾಗಿ ಬಿಜೆಪಿ ಗೆ ಮತ ನೀಡಿ' ಎಂದು ಚಾಮರಾಜನಗರ ಶಾಸಕ ಎನ್.ಮಹೇಶ್ ಕರೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ಶಾಸಕನಾಗಿ ಆಯ್ಕೆ ಆಗಿ ಒಂದು ವರ್ಷವಷ್ಟೆ ಆಗಿದೆ. ಕ್ಷೇತ್ರದ ಅಭಿವೃದ್ಧಿ ಮಾಡಲು ಇನ್ನುಳಿದ ಮೂರು ವರ್ಷದ ಅವಧಿಯ ಅವಶ್ಯಕತೆ ಇದೆ, ಹಾಗಾಗಿ ಸುಭದ್ರ ಸರ್ಕಾರ ಬರುವುದು ಮುಖ್ಯ' ಎಂದು ಮಹೇಶ್ ಹೇಳಿದ್ದಾರೆ.
15 ಕ್ಷೇತ್ರದ ಉಪ ಚುನಾವಣೆ; ಬಿಜೆಪಿ ಆಂತರಿಕ ಸಮೀಕ್ಷೆ ವರದಿ
ದಲಿತ ಹೋರಾಟ ಮೂಲಕ ಗುರುತಿಸಿಕೊಂಡಿದ್ದ ಮಹೇಶ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಪಿ ಪಕ್ಷದಿಂದ ಶಾಸಕರಾಗಿ ಆಯ್ಕೆ ಆಗಿದ್ದರು. ಅವರಿಗೆ ಜೆಡಿಎಸ್ ಬೆಂಬಲ ನೀಡಿತ್ತು. ಆದರೆ ಆ ನಂತರ ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆ ವೇಳೆ ಸರ್ಕಾರದ ಪರ ಮತ ಚಲಾಯಿಸದೇ ತಟಸ್ಥವಾಗಿ ಉಳಿದರು.
ಎನ್.ಮಹೇಶ್ ಅವರು ಬಿಜೆಪಿ ಪರವಾಗಿ ವಾಲಿದ್ದಾರೆಂಬ ಕಾರಣಕ್ಕೆ ಅವರನ್ನು ಬಿಎಸ್ಪಿ ಪಕ್ಷದಿಂದ ಉಚ್ಛಾಟಿಸಲಾಯಿತು. ಆದರೆ ಆಗ ಮಾತನಾಡಿದ್ದ ಎನ್.ಮಹೇಶ್ ಬಿಎಸ್ಪಿ ಹೈಕಮಾಂಡ್ ಗೆ ತಪ್ಪು ಮಾಹಿತಿ ರವಾನೆ ಆಗಿದೆ. ನಾನು ಬಿಜೆಪಿ ಪರವಾಗಿಲ್ಲ ಎಂದಿದ್ದರು.
ಆದರೆ ಈಗ ಮಹೇಶ್ ಅವರು ನೇರವಾಗಿ ಬಿಜೆಪಿ ಗೆ ಬೆಂಬಲ ಸೂಚಿಸಿದ್ದಾರೆ. ನೇರವಾಗಿ ಬಿಜೆಪಿ ಗೆ ಮತ ನೀಡಿ ಎಂದು ಹೇಳಿದ್ದಾರೆ.