ಬೀದಿ ನಾಯಿ ದಾಳಿಗೆ ಸಿಲುಕಿದ್ದ ಜಿಂಕೆಯ ರಕ್ಷಣೆ
ಗುಂಡ್ಲುಪೇಟೆ, ಮಾರ್ಚ್ 08 : ಕಾಡಿನಿಂದ ಹೊರಬಂದು ಬೀದಿ ನಾಯಿಗಳ ದಾಳಿಗೆ ಸಿಲುಕಿದ್ದ ಒಂದೂವರೆ ವರ್ಷದ ಗಂಡು ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿರುವ ಘಟನೆ ತಾಲೂಕಿನ ಕುರುಬರಹುಂಡಿ ಗ್ರಾಮದಲ್ಲಿ ನಡೆದಿದೆ.
ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಅರಣ್ಯದಿಂದ ಹೊರಬಂದ ಜಿಂಕೆಯನ್ನು ಸೀಳು ನಾಯಿಗಳು ಬೆನ್ನಟ್ಟಿದ ಪರಿಣಾಮವಾಗಿ ಸಮೀಪದ ಕುರುಬರಹುಂಡಿ ಗ್ರಾಮಕ್ಕೆ ಬಂದಿದೆ. ಜಿಂಕೆಯನ್ನು ಕಂಡ ಗ್ರಾಮದ ಬೀದಿನಾಯಿಗಳು ಬೆನ್ನಟ್ಟುತ್ತಿದ್ದಂತೆ ಗ್ರಾಮಸ್ಥರಾದ ನಂಜಪ್ಪ, ವೃಷಭೇಂದ್ರಪ್ಪ, ಗುರುಮಲ್ಲಪ್ಪ, ಮಹದೇವಸ್ವಾಮಿ ಹಾಗೂ ಚನ್ನಪ್ಪ ಜಿಂಕೆಯನ್ನು ದಾಳಿಯಿಂದ ರಕ್ಷಿಸಿದ್ದಾರೆ.
ಓಡಿ ಸುಸ್ತಾಗಿದ್ದ ಜಿಂಕೆಗೆ ನೀರು ಕುಡಿಸಿದ ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಓಂಕಾರ್ ವಲಯದ ಡಿಆರ್ಎಫ್ಓ ಮೈಲಾರಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಜಿಂಕೆಯನ್ನು ಅರಣ್ಯಕ್ಕೆ ಕೊಂಡೊಯ್ದರು.
ವಿಷಯುಕ್ತ ಆಹಾರ ಸೇವಿಸಿ ಹಸುಗಳು ಸಾವು
ವಿಷಯುಕ್ತ ಆಹಾರ ಸೇವಿಸಿ ನಾಲ್ಕು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಸುಗಳು ತಾಲೂಕಿನ ಮಧುವನಹಳ್ಳಿ ಗ್ರಾಮದ ಹೊರವಲಯದ ಲೊಕ್ಕನಹಳ್ಳಿ ರಸ್ತೆಯಲ್ಲಿರುವ ಪುಟ್ಟಬಸವಯ್ಯ ಅವರಿಗೆ ಸೇರಿದ್ದು, ಇವು ಸಾವಿನಿಂದ ಸುಮಾರು 2 ಲಕ್ಷ ರೂ. ನಷ್ಟವುಂಟಾಗಿದೆ.
ಪುಟ್ಟಬಸವಯ್ಯ ಅವರು ಎಂದಿನಂತೆ ಮಂಗಳವಾರ ಬೆಳಿಗ್ಗೆ ಹಸುಗಳಿಗೆ ಆಹಾರ ನೀಡಿ ಬೇರೆ ಕೆಲಸದಲ್ಲಿ ನಿರತರಾಗಿದ್ದರು. ಆದರೆ ಅವರು ನೀಡಿದ ಆಹಾರದಲ್ಲಿ ವಿಷ ಬೆರಕೆಯಾಗಿತ್ತೋ ಏನೋ. ಆದರೆ ಆಹಾರ ಸೇವಿಸಿದ ಹಸುಗಳು ನೋಡ ನೋಡುತ್ತಿದ್ದಂತೆಯೇ ಇದಕ್ಕಿದಂತೆ ಕೆಳಗೆ ಬಿದ್ದು ಒದ್ದಾಡಿ ಮೃತಪಟ್ಟಿವೆ.
ಸ್ಥಳಕ್ಕೆ ಆಗಮಿಸಿದ ಹನೂರು ಶಾಸಕ ಆರ್.ನರೇಂದ್ರ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಕೊಡಿಸುವುದಾಗಿ, ಪಶುಭಾಗ್ಯದ ಯೊಜನೆಯಲ್ಲಿ ಹಸುಗಳನ್ನು ನೀಡುವುದಾಗಿ ಹಸು ಕಳೆದುಕೊಂಡಿರುವ ಪುಟ್ಟಬಸವಯ್ಯನವರಿಗೆ ಸಾಂತ್ವನ ಹೇಳಿದ್ದಾರೆ.