ಬೈಕ್ ಸವಾರನ ಮೇಲೆ ಕಾಡಾನೆ ದಾಳಿಗೆ ಯತ್ನ; ವಿಡಿಯೋ ವೈರಲ್
ಚಾಮರಾಜನಗರ, ನವೆಂಬರ್ 09: ಬಂಡೀಪುರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೈ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಸಂಚಾರ ಮಾಡುತ್ತಿದ್ದ ಬೈಕ್ ಸವಾರನ ಮೇಲೆ ಕಾಡಾನೆ ದಾಳಿ ಮಾಡಲು ಯತ್ನಿಸಿದ್ದು, ಈ ದೃಶ್ಯ ಇದೀಗ ವೈರಲ್ ಆಗಿದೆ.
ಬಂಡೀಪುರದಿಂದ ಎರಡು ಬೈಕಿನಲ್ಲಿ ಸವಾರರು ಊಟಿ ಕಡೆಗೆ ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ಕಾಡಾನೆಯೊಂದು ಮೇಯುತ್ತಿತ್ತು. ಈ ವೇಳೆ ಸವಾರರು ವೇಗವಾಗಿ ಹೋಗಿಬಿಡಬಹುದೆಂಬ ಲೆಕ್ಕಾಚಾರದಲ್ಲಿ ಮುಂದೆ ಸಾಗುವ ಪ್ರಯತ್ನ ಮಾಡಿದ್ದಾರೆ. ತಕ್ಷಣ ಅವರ ಮೇಲೆ ಕಾಡಾನೆ ದಾಳಿ ಮಾಡಲು ಮುಂದಾಗಿದೆ. ಇದನ್ನರಿತ ಬೈಕ್ ಸವಾರರು ಕೂಡಲೇ ಬೈಕನ್ನು ಹಿಂದಕ್ಕೆ ತಿರುಗಿಸಿಕೊಂಡು ವಾಪಸ್ ಹೋಗಿದ್ದು, ಅವರನ್ನು ಹಿಂಬಾಲಿಸಿಕೊಂಡು ಘೀಳಿಡುತ್ತಾ ಹಿಂಬಾಲಿಸಿದೆ.
ಬೆಳ್ಳಂಬೆಳಿಗ್ಗೆ ಮೂಡಿಗೆರೆಯಲ್ಲಿ ರಾಜಾರೋಷವಾಗಿ ಓಡಾಡಿ ಆತಂಕ ತಂದ ಆನೆ
ಆದರೆ ಚಾಲಕರ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಈ ದೃಶ್ಯವನ್ನು ಕಾರಿನಲ್ಲಿ ಹೋಗುತ್ತಿದ್ದವರು ಸೆರೆ ಹಿಡಿದಿದ್ದು, ಈ ದೃಶ್ಯವೀಗ ವೈರಲ್ ಆಗಿದೆ.
ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಸಂಚರಿಸುವ ಸವಾರರಿಗೆ ಕಾಡಾನೆ ಭಯ ಹುಟ್ಟಿಸುತ್ತಿದ್ದು, ಒಂದೇ ಸ್ಥಳದಲ್ಲಿ ನಿಂತು ದಾಳಿ ಮಾಡುತ್ತಿದೆ. ಕಳೆದ ತಿಂಗಳ ಅಕ್ಟೋಬರ್ 22ರಂದು ಇದೇ ಸ್ಥಳದಲ್ಲಿ ಬೈಕ್ ಸವಾರನ ಮೇಲೆ ದಾಳಿಗೆ ಮುಂದಾಗಿತ್ತು. ಇನ್ನೊಂದೆಡೆ ಗೂಡಲೂರು ಹತ್ತಿರ ಬೈಕ್ ಸವಾರನ ಮೇಲೆ ದಾಳಿಗೆ ಯತ್ನಿಸಿದ ಘಟನೆಯೂ ನಡೆದಿತ್ತು. ಆನೆ ಹತ್ತಿರಕ್ಕೆ ಬರುತ್ತಿದ್ದಂತೆ ಸವಾರ ವಾಹನವನ್ನು ಬಿಟ್ಟು ಓಡಿದ್ದ. ಸ್ವಲ್ಪ ಹೊತ್ತಿನವರೆಗೂ ಕಾಡಾನೆ ವಾಹನವನ್ನು ಬಿಟ್ಟು ಕದಲದೆ ನಿಂತಿತ್ತು.
ರಸ್ತೆಯಲ್ಲಿ ಇತರೆ ವಾಹನಗಳು ಚಲಿಸುತ್ತಿದ್ದರೂ ತನ್ನ ಸ್ಥಳದಿಂದ ಮಾತ್ರ ತೆರಳಲಿಲ್ಲ. ಕೊನೆಗೆ ಬೇಸರವಾಯಿತೇನೋ ಸ್ಥಳದಿಂದ ಸ್ವಲ್ಪ ಸರಿದು ದೂರದಲ್ಲಿ ನಿಂತಿತ್ತು. ಬಳಿಕ ವಾಹನ ಸವಾರ ಬೇರೆ ವಾಹನದಲ್ಲಿದ್ದವರ ನೆರವು ಪಡೆದು ತನ್ನ ವಾಹನವನ್ನು ತೆಗೆದುಕೊಂಡು ಹೋಗುವಂತಾಯಿತು.