ಇನ್ನೂ ತಪ್ಪಿಲ್ಲ ಸುಳ್ವಾಡಿ ವಿಷ ಪ್ರಕರಣದ ಸಂತ್ರಸ್ತರ ಪರದಾಟ
ಚಾಮರಾಜನಗರ, ಆಗಸ್ಟ್ 30: ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ವಿಷಪ್ರಸಾದ ಸೇವಿಸಿ ಕೆಲ ಮಂದಿ ಸಾವನ್ನಪ್ಪಿದ ಪ್ರಕರಣದಲ್ಲಿ ಸಂತ್ರಸ್ತರ ಬದುಕು ಮಾತ್ರ ಇನ್ನೂ ಹಸನಾಗಿಲ್ಲ.
ಮೈತ್ರಿ ಸರ್ಕಾರವಿದ್ದ ಕಾಲದಲ್ಲಿ ಈ ದುರಂತ ನಡೆದಿತ್ತು. ಅವತ್ತಿನ ಸರ್ಕಾರ ಹಲವು ಭರವಸೆಗಳನ್ನು ನೀಡಿತ್ತಾದರೂ ಅದು ಇಂದಿಗೂ ಈಡೇರಿಲ್ಲ. ಜತೆಗೆ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಸರ್ಕಾರ ತಿಳಿಸಿದ್ದರೂ ಉಚಿತ ಚಿಕಿತ್ಸೆ ದೊರೆಯುತ್ತಿಲ್ಲ ಎನ್ನುವುದು ಸಂತ್ರಸ್ತರ ಅಳಲು.
ಪುಸ್ತಕ ರೂಪದಲ್ಲಿ ಸುಳ್ವಾಡಿ ವಿಷ ಪ್ರಸಾದ, ಕನಗನಮರಡಿ ಬಸ್ ದುರಂತ
ಘಟನೆಯಲ್ಲಿ 125 ಮಂದಿ ಅಸ್ವಸ್ಥರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಬದುಕುಳಿದಿದ್ದರೂ ಇನ್ನೂ ಅವರ ಆರೋಗ್ಯ ಸರಿಹೋಗಿಲ್ಲ. ಒಂದಲ್ಲ ಒಂದು ರೀತಿಯ ತೊಂದರೆ ಅನುಭವಿಸುತ್ತಲೇ ಇದ್ದಾರೆ. ದುರಂತ ನಡೆದ ಬಳಿಕ ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಬಿದರಳ್ಳಿಗೆ ಭೇಟಿ ನೀಡಿದ ವೇಳೆ ಸಂತ್ರಸ್ತರ ಪ್ರತಿ ಕುಟುಂಬಕ್ಕೆ 3 ಎಕರೆ ಜಮೀನು, ಅದಕ್ಕೆ ಕೊಳವೆ ಬಾವಿ, ವಾಸಕ್ಕೆ ಮನೆ, ಸರಕಾರಿ ಉದ್ಯೋಗ, ಉಚಿತ ವೈದ್ಯಕೀಯ ಸೇವೆ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದರು. ಆದರೆ ಅದು ಇನ್ನೂ ಈಡೇರಿಲ್ಲ. ವಿಷ ಪ್ರಸಾದ ಸೇವಿಸಿದ ಮಕ್ಕಳು ಈಗ ಶಾಲೆಗೆ ಹೋಗುವಾಗ ಮಂಪರು ನಿದ್ರೆಗೆ ಜಾರುವುದು ಸೇರಿದಂತೆ ಹಲವು ತೊಂದರೆ ಅನುಭವಿಸುತ್ತಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ರಕ್ತ ಪರೀಕ್ಷೆ, ಔಷಧ, ಚುಚ್ಚುಮದ್ದು ಹೀಗೆ ಹಣವನ್ನು ನೀಡಬೇಕಾಗುತ್ತದೆ.
ಇಷ್ಟೇ ಅಲ್ಲದೆ ಸಂತ್ರಸ್ತರು ಬಿಸಿಲಿಗೆ ಮುಖವೊಡ್ಡಲು ಕಷ್ಟಪಡುತ್ತಿದ್ದಾರೆ. ಕಣ್ಣು ಉರಿ, ಹೊಟ್ಟೆ ಉರಿ ಆಗಾಗ್ಗೆ ಕಾಡುತ್ತಿದೆ. ಹೀಗಾಗಿ ಸಂತ್ರಸ್ತರು ತೊಂದರೆಯಲ್ಲೇ ಕಾಲ ಕಳೆಯುವಂತಾಗಿದೆ. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಸಂಕಷ್ಟ ಅನುಭವಿಸುವಂತಾಗಿದೆ. ಕೆಲವು ಕುಟುಂಬಗಳಲ್ಲಿ ಮನೆಯಲ್ಲಿ ದುಡಿಯುವವರೇ ಇಲ್ಲದಾಗಿದೆ. ಇನ್ನು ದುಡಿಯೋಣ ಎಂದರೂ ಆರೋಗ್ಯದ ಸಮಸ್ಯೆ ಕಾಡುತ್ತಿದೆ. ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ವಿಷ ಪ್ರಸಾದ ಸೇವಿಸಿದ ಸುಳ್ವಾಡಿ, ಎಂ.ಜಿ.ದೊಡ್ಡಿ, ಬಿದರಳ್ಳಿ ಮತ್ತಿತರ ಗ್ರಾಮಗಳ ನೂರಕ್ಕೂ ಹೆಚ್ಚು ಸಂತ್ರಸ್ತರು ತೊಂದರೆ ಅನುಭವಿಸುತ್ತಿದ್ದಾರೆ.
ವಿಷ ಪ್ರಸಾದ ದುರಂತದ ಸುಳ್ವಾಡಿ ಮಾರಮ್ಮ ದೇವಾಲಯ ಸರ್ಕಾರದ ವಶಕ್ಕೆ
ಈ ಪ್ರಕರಣ ನ್ಯಾಯಾಲಯದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದೆ. ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೂ ಸಂತ್ರಸ್ತರ ಗ್ರಾಮಗಳಿಗೂ ಸುಮಾರು 200 ಕಿ.ಮೀ. ದೂರವಿರುವುದರಿಂದ ಪ್ರಕರಣದಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು ತೆರಳಲು ಕಷ್ಟವಾಗುತ್ತಿದೆ. ಹೀಗಾಗಿ ಹನೂರು ಕೇಂದ್ರ ಸ್ಥಾನದಲ್ಲೇ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಬೇಕು. ಸಂತ್ರಸ್ತ ಆರು ಮಂದಿಗೆ ಸರ್ಕಾರದಿಂದ ಇನ್ನೂ ಸ್ವಲ್ಪ ಪರಿಹಾರ ದೊರಕಬೇಕಾಗಿದೆ. ಸಂತ್ರಸ್ತರಿಗೆ ಕೊನೆಯವರೆಗೂ ಉಚಿತ ವೈದ್ಯಕೀಯ ಸೇವೆ ಒದಗಿಸುವುದು ಸೇರಿದಂತೆ ಪ್ರತಿ ತಿಂಗಳು 10 ಸಾವಿರ ಪಿಂಚಣಿ ನೀಡಬೇಕು ಎನ್ನುವುದು ಸಂತ್ರಸ್ತರ ಒತ್ತಾಯ.
ನೂತನವಾಗಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಈ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.