ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬೆಂಕಿ: ಹತ್ತಾರು ಎಕರೆ ಭಸ್ಮ
ಬಂಡೀಪುರ ರಾಷ್ಟ್ರೀಯ ಉದ್ಯಾನದ ಹಿಮವದ್ ಗೋಪಾಲಸ್ವಾಮಿ ಅರಣ್ಯಕ್ಕೆ ಭಾನುವಾರ ಬೆಂಕಿಬಿದ್ದು ಹತ್ತಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ.
ಗುಂಡ್ಲುಪೇಟೆ, ನವೆಂಬರ್, 28: ಬಂಡೀಪುರ ರಾಷ್ಟ್ರೀಯ ಉದ್ಯಾನದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಮಧ್ಯಾಹ್ನ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮವಾಗಿ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹುಲ್ಲು ಹಾಗೂ ಕುರುಚಲು ಬೆಂಕಿಗಾಹುತಿಯಾಗಿರುವ ಘಟನೆ ಸೋಮವಾರ ನಡೆದಿದ್ದು, ಪ್ರಾಣಿಪಕ್ಷಿಗಳ ಜೀವಕ್ಕೂ ಕುತ್ತು ತಂದಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಅರಣ್ಯ ಪ್ರದೇಶದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸಿಬ್ಬಂದಿಗಳು ಅಧಿಕಾರಿಗಳ ಗಮನಕ್ಕೆ ತಂದು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು.
ಗಾಳಿಯ ರಭಸಕ್ಕೆ ಬೆಂಕಿಯು ಹೆಚ್ಚಿನ ಪ್ರದೇಶಗಳಿಗೆ ಹರಡುವುದನ್ನು ತಪ್ಪಿಸಲು ಸಿಬ್ಬಂದಿಯು ಹರ ಸಾಹಸ ಮಾಡಿದರು. ಪಟ್ಟಣದಿಂದ ಅಗ್ನಿಶಾಮಕದಳವನ್ನೂ ಸಹ ಕರೆಸಿದರೂ ಬೆಂಕಿ ಬಿದ್ದ ಪ್ರದೇಶಕ್ಕೆ ತೆರಳಲು ಸಾಧ್ಯವಾಗದೆ ಹಿಂತಿರುಗಬೇಕಾಯಿತು.
ಕಳೆದ 4 ತಿಂಗಳಿನಿಂದಲೂ ಮಳೆ ಬೀಳದ ಪರಿಣಾಮ ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯಲ್ಲಿನ ಗಿಡಮರಗಳು ಒಣಗಿ ನಿಂತಿವೆ. ರಸ್ತೆಯ ಬದಿಯಲ್ಲಿ ಬೆಳೆದಿದ್ದ ಲಂಟಾನ ಹಾಗೂ ಇತರ ಒಣ ಕಳೆಗಳನ್ನು ತೆರವುಗೊಳಿಸಿ ಸುಟ್ಟುಹಾಕಲಾಗಿದ್ದು ಮುಂಜಾಗರೂಕತಾ ಕ್ರಮವಾಗಿ ಅರಣ್ಯ ಇಲಾಖೆಯು ಎಲ್ಲ 13 ವಲಯಗಳಲ್ಲಿಯೂ ಫೈರ್ಲೈನ್ ನಿರ್ಮಾಣ ಕಾಮಗಾರಿ ಕೈಗೊಂಡಿವೆ. ಆದರೂ ಸದಾ ಹಿಮದ ಹಸಿರಿನಿಂದ ಕೂಡಿರುವ ಗೋಪಾಲಸ್ವಾಮಿ ಬೆಟ್ಟ ವಲಯಕ್ಕೆ ಬೆಂಕಿ ಬಿದ್ದಿರುವುದು ಅಚ್ಚರಿಗೆ ಕಾರಣವಾಗಿದೆ.
ರಸ್ತೆ ಅಭಿವೃದ್ದಿ ಕಾರಣದಿಂದ ನ.28 ರಿಂದ 3 ದಿನಗಳ ಕಾಲ ಬೆಟ್ಟಕ್ಕೆ ಹೋಗಿ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದ್ದರೂ ಅರಣ್ಯಕ್ಕೆ ಬೆಂಕಿ ಬಿದ್ದಿರುವುದು ಅರಣ್ಯಾಧಿಕಾರಿಗಳು ತಲೆಕೆಡಿಸಿಕೊಳ್ಳುವಂತೆ ಮಾಡಿದೆ.