ಬಂಡೀಪುರ-ಕೇರಳ ರಾತ್ರಿ ಸಂಚಾರ ತೆರವುಗೊಳಿಸದಂತೆ ವಾಟಾಳ್ ಪ್ರತಿಭಟನೆ
ಚಾಮರಾಜನಗರ, ಸೆಪ್ಟೆಂಬರ್ 30: ರಾತ್ರಿ ವೇಳೆ ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ತೆರಳುವ ಹೆದ್ದಾರಿಯಲ್ಲಿ ವಾಹನ ನಿರ್ಬಂಧವನ್ನು ತೆರವುಗೊಳಿಸಲು ಒಂದೆಡೆ ಕೇರಳದಲ್ಲಿ ಲಾಬಿ ನಡೆಯುತ್ತಿದ್ದರೆ, ಮತ್ತೊಂದೆಡೆ ಕೇರಳ ಪರವಾಗಿ ವಯನಾಡು ಸಂಸದ ರಾಹುಲ್ ಗಾಂಧಿ ಕೂಡ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಹೀಗಿರುವಾಗ ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ಕೇರಳದ ಟಿಂಬರ್ ಲಾಬಿಗೆ ಮಣಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೇರಳ ರಾಜ್ಯದ ಸುಲ್ತಾನ್ ಬತ್ತೇರಿಗೆ ತೆರಳುವ ಮದ್ದೂರು ಚೆಕ್ ಪೋಸ್ಟ್ನಲ್ಲಿ ಮಲಗಿ ಭಾನುವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ಕೇರಳ ನಡುವೆ ರಾತ್ರಿ ಮಾತ್ರ ಸಂಚಾರ ಬಂದ್
ಈ ವೇಳೆ ಮಾತನಾಡಿದ ಅವರು, "ಬಂಡೀಪುರ ರಾಷ್ಟ್ರೀಯ ಉದ್ಯಾನದ ವನ್ಯಜೀವಿಗಳ ಸಹಜ ಜೀವನಕ್ಕೆ ಅಡ್ಡಿಯಾಗದಂತೆ ಸುಪ್ರೀಂ ಕೋರ್ಟ್ ರಾತ್ರಿ ಸಂಚಾರ ನಿಷೇಧಿಸಿದೆ. ಆದರೆ ಕೇರಳ ಸರ್ಕಾರ ರಾತ್ರಿ ಸಂಚಾರ ತೆರವು, ಮೇಲ್ಸೇತುವೆ ನಿರ್ಮಾಣ, ಸುರಂಗಮಾರ್ಗ, ರೈಲು ಮಾರ್ಗ ನಿರ್ಮಾಣಕ್ಕೆ ಅವಕಾಶ ನೀಡುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಇದಕ್ಕಾಗಿ ಭಾರೀ ಪ್ರಮಾಣದ ಹಣವನ್ನೂ ಮೀಸಲಿರಿಸಿ ಎಲ್ಲಾ ವೆಚ್ಚವನ್ನೂ ತಾನೇ ಭರಿಸುವ ಮಾತನ್ನಾಡುತ್ತಿದೆ. ಇದರಿಂದ ಸಾವಿರಾರು ಮರಗಿಡಗಳು ಹಾಗೂ ವನ್ಯಜೀವಿಗಳು ನಾಶವಾಗುತ್ತವೆ. ಇದಕ್ಕಾಗಿ ಪರ್ಯಾಯ ಮಾರ್ಗ ನಿರ್ಮಾಣ ಮಾಡಿದರೆ ಅಪಾರ ಪ್ರಮಾಣದ ಮರಗಿಡಗಳು ನಾಶವಾಗಲಿದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ಪಟ್ಟಣ ಠಾಣೆಯ ಪಿಎಸ್ ಐ ಲತೇಶ್ ಕುಮಾರ್ ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಬಂಡೀಪುರ ರಾತ್ರಿ ವಾಹನ ಸಂಚಾರ ನಿಷೇಧ ಖಾಯಂ ಆಗುತ್ತಾ?
ಇದೆಲ್ಲದರ ನಡುವೆ ಗುಂಡ್ಲುಪೇಟೆ ತಾಲೂಕಿನ ಮದ್ದೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿ ಮಲ್ಲಯ್ಯನಪುರ ಸಮೀಪ ರಸ್ತೆ ಬದಿಗಳಲ್ಲಿ ರೈತರೇ ಮಾರಾಟ ಮಾಡುವ ಮಳಿಗೆಗಳಿಗೆ ತೆರಳಿದ ವಾಟಾಳ್ ಟೊಮೆಟೊ, ಬೀನ್ಸ್, ಮೂಲಂಗಿ ಹಾಗೂ ಹಸಿ ಕಾಳುಗಳನ್ನು ಖರೀದಿಸಿದರು. ವಾಟಾಳ್ ಅವರನ್ನು ಕಂಡ ಸಾರ್ವಜನಿಕರು ಹಾಗೂ ವಾಹನ ಸವಾರರು ಕುತೂಹಲದಿಂದ ಮುತ್ತಿಕೊಂಡರು.